ಪರಿಸರ ಉಳಿಸುವ ಕಾರ್ಯದಲ್ಲಿ ಗಿಡನೆಡುವಿಕೆಯು ಮಹತ್ವದ ಪಾತ್ರ ವಹಿಸಿದೆ. ನಾವೆಲ್ಲರೂ ಪರಿಸರ ಉಳಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮಾಡಬೇಕಿದೆ ಎಂದು ಇಎಮ್ಪಿಆರ್ಐ ಸಂಸ್ಥೆಯ ಮುಖ್ಯ ದತ್ತಾಂಶ ಮಾಹಿತಿ ಅಧಿಕಾರಿ ರೆನಿಟಾ ಮಥಾಯಿಸ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ತುಮಕೂರು ತಾಲೂಕಿನ ಹೆಬ್ಬೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (EMPRI) ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕ ೧ ಮತ್ತು ೨ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೆಬ್ಬೂರು ಸಹಯೋಗದೊಂದಿಗೆ ಕಾಲೇಜಿನ ಸಭಾಂಗಣದಲ್ಲಿ ರಾ.ಸೇ.ಯೋ ಸ್ವಯಂ ಸೇವಕರಿಗೆ ಬುಧವಾರ ಆಯೋಜಿಸಿದ್ದ ಪರಿಸರ ಶಿಕ್ಷಣ ಕಾರ್ಯಾಗಾರದಲ್ಲಿ ಮಾತನಾಡಿದ ಅವರು,
ಪ್ಲಾಸ್ಟಿಕ್ ಪುನರ್ಬಳಕೆ ಆಗಬೇಕು. ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ತಡೆಯಬೇಕು. ಪ್ಲಾಸ್ಟಿಕ್ ಎಂಬ ಮಹಾ ಮಾರಿ ಭೂಮಿ ಒಡಲನ್ನು ಮಾತ್ರ ಸೇರುತ್ತಿಲ್ಲ, ಮನುಷ್ಯರ ಒಡಲನ್ನೂ ಸೇರುತ್ತಿದೆ. ಹಾಗಾಗಿ ಪ್ಲಾಸ್ಟಿಕ್ ನಿಯಂತ್ರಣಕ್ಕೆ ಅಗತ್ಯ ಕ್ರಮಗಳು ಅವಶ್ಯ ಎಂದರು.
ಐಶಾರಾಮಿ ಜೀವನದಿಂದ ಪರಿಸರ ಮಾಲೀನ್ಯ ಉಂಟಾಗುತ್ತಿದೆ. ಅದರಿಂದ ವಿಮುಕ್ತರಾಗಿ ಸರಳತೆ ರೂಢಿಸಿಕೊಂಡಾಗ ಪರಿಸರ ಸ್ನೇಹಿಯಾಗಿ ಬದುಕಬಹುದು. ಪರಿಸರ ಉಳಿಸಲು ನಮ್ಮ ಸಂಸ್ಥೆ ಸದಾ ಕೆಲಸ ಮಾಡುತ್ತಾ ಬಂದಿದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ಚಂದನ್ ಡಿ.ಎನ್ ಅವರು ಮಾತನಾಡಿ, ಪರಿಸರ ಸಂರಕ್ಷಣೆ ಇಂದು ಭಾಷಣಗಳಲ್ಲಿ ಮಾತ್ರ ವಿಜೃಂಭಿಸುತ್ತಿದೆ. ರಾಜಕಾರಣಿಗಳು ತಮ್ಮ ಪ್ರಣಾಳಿಕೆಗಳಲ್ಲೂ ಪರಿಸರ ಪೂರಕ ಕಾನೂನುಗಳನ್ನು ತರುವ ಅಂಶಗಳನ್ನು ಸೇರಿಸಬೇಕು. ಜತೆಗೆ ಜನರ ಆರೋಗ್ಯದ ಖಾತ್ರಿಯ ಭರವಸೆಯನ್ನು ನೀಡಬೇಕು. ಈ ಬಗ್ಗೆ ವಿದ್ಯಾರ್ಥಿಗಳು ಚಿಂತನೆ ಮಾಡಬೇಕು ಎಂದು ಅವರು ಕಿವಿಮಾತು ಹೇಳಿದರು.
ಶ್ರೀಮಂತರಿಂದ ಅತೀ ಹೆಚ್ಚು ಪರಿಸರ ಮಾಲೀನ್ಯವಾಗುತ್ತಿದೆ. ಸರ್ಕಾರ ಅವರಿಂದಲೇ ಹೆಚ್ಚಿನ ತೆರಿಗೆ ಪಡೆಯಬೇಕು ಎಂದು ಹೇಳಿದರು.
ಕಾಲೇಜು ಪ್ರಾಂಶುಪಾಲರಾದ ಪ್ರೊ.ಡಿ.ಕೃಷ್ಣ ಮಾತನಾಡಿ, ಹವಾಮಾನ ವೈಪರೀತ್ಯದಿಂದ ಹಿಮಗಡ್ಡೆಗಳು ಕರಗಿ ಸಮುದ್ರ ಮಟ್ಟ ಏರುತ್ತಿದೆ. ಹಲವು ಮಹಾನಗರಗಳು ಮುಳುಗುವ ಭೀತಿ ಎದುರಾಗಿದೆ. ಆದ್ದರಿಂದ ನಾವು ಪರಿಸರವನ್ನು ಉಳಿಸಿಕೊಳ್ಳುವ ಅನಿವಾರ್ಯತೆಯಲ್ಲಿದ್ದೇವೆ ಎಂದು ಹೇಳಿದರು.
ಈ ವೇಳೆ ಸಂಪನ್ಮೂಲ ವ್ಯಕ್ತಿ ಹರೀಶ್ ಕಮ್ಮನಕೋಟೆ, ರಾ.ಸೇ.ಯೋ ಕಾರ್ಯಕ್ರಮ ಅಧಿಕಾರಿಗಳಾದ ಮಧುಸೂಧನ.ಕೆ.ಪಿ, ಡಾ.ಗೋಂವಿದರಾಜು ಹಾಜರಿದ್ದರು.





