2024-25ನೇ ಸಾಲಿನ ಆಯವ್ಯಯ ಮಂಡನೆಗಾಗಿ ಗುಬ್ಬಿ ಪಟ್ಟಣ ಪಂಚಾಯತಿಯು ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳಿಂದ ಸಲಹೆ ಸೂಚನೆ ಕೋರಿತ್ತು. ಅದಕ್ಆಗಿ, ಬಜೆಟ್ ಪೂರ್ವಭಾವಿ ಸಭೆ ನಡೆಸಿದೆ. ಸಭೆಯಲ್ಲಿ ಹಲವಾರು ಮಂದಿ ಹತ್ತು ಹಲವು ವಿಷಯಗಳನ್ನು ಮಂಡಿಸಿದ್ದು, ಬಜೆಟ್ನಲ್ಲಿ ಅವುಗಳನ್ನು ಪರಿಗಣಿಸುವಂತೆ ಸಲಹೆ ನೀಡಿದ್ದಾರೆ.
ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಬಿ ಆರತಿ ಅವರ ನೇತೃತ್ವದಲ್ಲಿ ಸಭೆ ನಡೆದಿದೆ. ಸಭೆಯಲ್ಲಿ ಪಟ್ಟಣ ಪಂಚಾಯತಿ ಸದಸ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪತ್ರಕರ್ತರು ಹಾಗೂ ಸಾರ್ವಜನಿಕರು ಪಟ್ಟಣದ ಅಭಿವೃದ್ದಿ ಹಾಗೂ ನೆನೆಗುದಿಗೆ ಬಿದ್ದ ಸಮಸ್ಯೆಗಳು, ಮೂಲಭೂತ ಸೌಕರ್ಯ ಒದಗಿಸುವುದು ಸೇರಿದಂತೆ ತೆರಿಗೆ ಆದಾಯ ಹೆಚ್ಚಳಕ್ಕೆ ಸಲಹೆ ನೀಡಿದರು.
ಸಾರ್ವಜನಿಕ ಸ್ಮಶಾನಕ್ಕೆ ಭೂಮಿ ಮಂಜೂರು ಕುರಿತು ಚರ್ಚೆ ಆರಂಭಿಸಿ ಪರವಾನಗಿ ಇಲ್ಲದ ಅನಧಿಕೃತ ಕಟ್ಟಡಗಳು, ಉದ್ಯಮಗಳು, ಅಂಗಡಿಗಳ ಮೂಲಕ ದಂಡ ಶುಲ್ಕು ಹಾಗೂ ವಾರ್ಷಿಕ ತೆರಿಗೆ ನಿರ್ಣಯಕ್ಕೆ ಒತ್ತಾಯಿಸಿದರು. ಸ್ಮಶಾನ ಭೂಮಿ ಬಗ್ಗೆ ಪಟ್ಟಣಕ್ಕೆ ಸಮೀಪದಲ್ಲಿ ನೀಡಲು ಎರಡು ಸ್ಥಳ ಆಯ್ಕೆ ಮಾಡಿದ್ದು, ಶೀಘ್ರ ದಾಖಲೆ ಸಿದ್ದಗೊಳ್ಳಲಿರುವ ಬಗ್ಗೆ ತಹಶೀಲ್ದಾರ್ ವಿವರಿಸಿದರು.
ಆದಾಯ ಹೆಚ್ಚಳಕ್ಕೆ ಮೊದಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲೇಔಟ್ಗಳಿಗೆ ನಮ್ಮಿಂದ ಸವಲತ್ತು ನೀಡಬಾರದು. ಅಲ್ಲಿ ನಮಗೆ ತೆರಿಗೆ ಸಂಗ್ರಹವಾಗದ ಕಾರಣ ಮೂಲ ಸೌಕರ್ಯಗಳನ್ನು ನೀಡುವಂತಿಲ್ಲ. ಈಗಾಗಲೇ ಹೇರೂರು, ಅಮ್ಮನಘಟ್ಟ ಗ್ರಾಮ ಪಂಚಾಯಿತಿಯಲ್ಲಿ ತೆರಿಗೆ ನೀಡುವ ಮನೆಗಳಿಗೆ ಪಟ್ಟಣ ಪಂಚಾಯಿತಿ ಸವಲತ್ತು ನೀಡಲಾಗಿದೆ ಎಂಬ ಆರೋಪ ಸಭೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರೇ ಚರ್ಚಿಸಿದರು.
ಕೆಎಂಎಫ್ ಪಶು ಆಹಾರ ಘಟಕದಲ್ಲಿ ನಿಯಮಾನುಸಾರ ತೆರಿಗೆ ಸಂಗ್ರಹಕ್ಕೆ ಒತ್ತಾಯಿಸಿದರು. ಇದೇ ಮಾದರಿ ಸಣ್ಣ ಕೈಗಾರಿಕೆಗಳು, ಮಧ್ಯಮ ಕೈಗಾರಿಕೆಗಳಲ್ಲಿ ಹಾಗೂ ಖಾಸಗಿ ಆಸ್ಪತ್ರೆಗಳು, ಖಾಸಗಿ ಶಾಲೆಗಳಿಂದ ತೆರಿಗೆ ಸಂಗ್ರಹ ಹಾಗೂ ಅಕ್ರಮವನ್ನು ದಂಡ ಸಹಿತ ಸಕ್ರಮ ಮಾಡಲು ಚರ್ಚೆ ನಡೆಸಿದರು.
ಬೀದಿ ಬದಿಯ ವ್ಯಾಪಾರಿಗಳಿಗೆ ಒಂದೆಡೆ ಸೂರು ಒದಗಿಸಿ ಮೂಲ ಸವಲತ್ತು ನೀಡಿ ಇಂತಿಷ್ಟು ಬಾಡಿಗೆ ವಸೂಲಿ ಮಾಡಬಹುದು. ಫುಟ್ ಪಾತ್ನಲ್ಲಿ ತಲೆ ಎತ್ತಿರುವ ವ್ಯಾಪಾರಿಗಳಿಗೆ ಇಂತಹ ಸ್ಥಳ ಒದಗಿಸಿ ವ್ಯವಹಾರಕ್ಕೆ ಅನುವು ಮಾಡಬೇಕು. ಪಾದಚಾರಿಗಳಿಗೆ ಸುಗಮ ಸಂಚಾರಕ್ಕೆ ವ್ಯವಸ್ಥೆ ಆಗಬೇಕೆಂಬ ಚರ್ಚೆಗೆ ಸಹಮತ ವ್ಯಕ್ತಪಡಿಸಿದ ಅಧಿಕಾರಿಗಳು ಬಸ್ ನಿಲ್ದಾಣದ ಹಿಂಬದಿ ಏಕ ಶೆಡ್ ಅಂಗಡಿ ನಿರ್ಮಾಣವನ್ನು ವ್ಯವಸ್ಥಿತವಾಗಿ ಮಾಡುವ ಬಗ್ಗೆ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಸಂವಿಧಾನ ಜಾಗೃತಿ ಜಾಥಾ ಕುರಿತು ಸಭೆ ನಡೆಸಿ ಇದೇ ತಿಂಗಳ 8 ರಂದು ಪಟ್ಟಣಕ್ಕೆ ಬರುವ ಜಾಥಾವನ್ನು ಅದ್ದೂರಿಯಾಗಿ ಸ್ವಾಗತಿಸಿ ಗ್ರಾಮ ಪಂಚಾಯಿತಿಗಳತ್ತ ಕಳುಹಿಸಲು ಪಟ್ಟಣದಲ್ಲಿ ಮೆರವಣಿಗೆ ನಿರ್ಣಯ ಮಾಡಿದರು. ಶಾಸಕರು ಉದ್ಘಾಟಿಸಿ ಜಾಥಾಕ್ಕೆ ಚಾಲನೆ ನೀಡಲಿದ್ದು, ಎಲ್ಲ ಜನ ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಆಗಮಿಸಲಿದ್ದಾರೆಂದು ತಿಲೀಸಿದ್ದು, ಕಾರ್ಯಕ್ರಮ ಸುಸೂತ್ರ ಆಚರಣೆ ಕುರಿತು ಸಲಹೆ ಪಡೆದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ನಗರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಮರೀಚಿಕೆ
ಸಭೆಯಲ್ಲಿ ಪ.ಪಂ ಸದಸ್ಯರುಗಳಾದ ಮಹಮದ್ ಸಾದಿಕ್, ಕುಮಾರ್, ರೇಣುಕಾ ಪ್ರಸಾದ್, ರಂಗಸ್ವಾಮಿ, ಶೋಕತ್ ಆಲಿ, ಮಹಾಲಕ್ಷ್ಮಿ, ಮಂಗಳಮ್ಮ, ಮಮತಾ, ಶ್ವೇತಾ, ರಾಜೇಶ್ವರಿ, ಮುಖಂಡರುಗಳಾ ಸಿ ಆರ್ ಶಂಕರ್ ಕುಮಾರ್, ಜಿ ಎಸ್ ಮಂಜುನಾಥ್, ಜಿ ಆರ್ ರಮೇಶ್, ಶಿವಪ್ಪ, ಜಿ ಆರ್ ಪ್ರಕಾಶ್, ಕರುನಾಡ ವಿಜಯಸೇನೆಯ ವಿನಯ್, ಮಧು, ಪ.ಪಂ ಮುಖ್ಯಾಧಿಕಾರಿ ಮಂಜುಳಾದೇವಿ ಸೇರಿದಂತೆ ಇತರ ಇಲಾಖಾಧಿಕಾರಿಗಳು ಇದ್ದರು.




