ರಾಜ್ಯದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರ ಬೆನ್ನೆಲುಬಾದ ಹಾಗೂ ಅವರ ವಿರುದ್ಧ ಯಾರಾದರೂ ಧ್ವನಿ ಎತ್ತಿದರೆ ಸಿದ್ದರಾಮಯ್ಯ ಅವರ ಪರ ಮಾತನಾಡುತ್ತಿದ್ದ ಏಕೈಕ ಸಚಿವ ಕೆ ಎನ್ ರಾಜಣ್ಣರನ್ನು ಸಚಿವ ಸಂಪುಟದಿಂದ ಕೈಬಿಟ್ಟಿರುವುದು ಖಂಡನೀಯ. ಈ ಕೂಡಲೇ ಅವರನ್ನು ಸಚಿವ ಸಂಪುಟಕ್ಕೆ ಮರು ಸೇರ್ಪಡೆ ಮಾಡಿಕೊಳ್ಳಬೇಕೆಂದು ತುಮಕೂರು ಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ ಎನ್ ಮೂರ್ತಿ ಒತ್ತಾಯಿಸಿದರು.
ತುಮಕೂರಿನ ಶಿರಾ ತಾಲೂಕಿನಲ್ಲಿ ದಲಿತ, ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಕ್ರಿಯಾ ಸಮಿತಿ ಹಾಗೂ ಕೆಎನ್ಆರ್ ಮತ್ತು ಆರ್ಆರ್ ಅಭಿಮಾನಿಗಳ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಕೆ.ಎನ್.ರಾಜಣ್ಣ ಅವರು ಜಾತ್ಯತೀತ ನಾಯಕರು. ಅದಕ್ಕೆ ಸಾಕ್ಷಿ ಇಲ್ಲಿ ಸೇರಿರುವ ಸಾವಿರಾರು ಮಂದಿ ರಾಜಣ್ಣ ಅಭಿಮಾನಿಗಳು. ಸಿದ್ದರಾಮಯ್ಯ ಅವರು ಹೈಕಮಾಂಡ್ ಮೇಲೆ ಒತ್ತಡ ತರುವ ಶಕ್ತಿ ಹೊಂದಿದ್ದು ಮುಂದಿನ ಸಚಿವ ಸಂಪುಟದ ಪುನರ್ವಿಂಗಡಣೆಯಲ್ಲಿ ರಾಜಣ್ಣ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು” ಎಂದು ಒತ್ತಾಯಿಸಿದರು.





ಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ ಎಸ್ ರವಿ ಮಾತನಾಡಿ, “ರಾಜ್ಯದ ಅತ್ಯಂತ ಪ್ರಭಾವಿ ಸಚಿವರಾದ ರಾಜಣ್ಣ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಅನೇಕ ಬದಲಾವಣೆ ತಂದು ಸಹಕಾರಿ ರತ್ನರಾಗಿರುವ ಅವರನ್ನು ಸಚಿವ ಸಂಪುಟಕ್ಕೆ ಪುನಃ ಸೇರ್ಪಡೆ ಮಾಡಿಕೊಳ್ಳಬೇಕು. ಇದು ಸಾವಿರಾರು ಅಭಿಮಾನಿಗಳ ಮನವಿ” ಎಂದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಜಯ್ ಕುಮಾರ್ ಮಾತನಾಡಿ, “ಜಿಲ್ಲೆಯಲ್ಲಿ ಬಡವರ ಪರವಾಗಿ ಕೆಲಸ ಮಾಡುತ್ತಿದ್ದ ಏಕೈಕ ವ್ಯಕ್ತಿ ಕೆ.ಎನ್.ರಾಜಣ್ಣ ಅವರು. ಇವರು ನೇರನುಡಿ ವ್ಯಕ್ತಿಯಾಗಿದ್ದು ಯಾರೇ ತಪ್ಪು ಮಾಡಿದ್ದರೂ ನೇರವಾಗಿ ಹೇಳುತ್ತಾರೆ. ಆದರೆ ಕೆಲವರು ಅದನ್ನೇ ಅಸ್ತ್ರ ಮಾಡಿಕೊಂಡು ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಿದ್ದಾರೆ. ನಾವು ಯಾವತ್ತೂ ರಾಜಣ್ಣ ಪರವಾಗಿದ್ದೇವೆ. ಆದ್ದರಿಂದ ನಾವೆಲ್ಲರೂ ಅವರಿಗೆ ಸಚಿವ ಸ್ಥಾನ ನೀಡುವವರೆಗೂ ಹೋರಾಟ ಮಾಡುತ್ತೇವೆ” ಎಂದರು.
ಇದನ್ನೂ ಓದಿ: ತುಮಕೂರು | ಜಾತಿ ವಿನಾಶಕ್ಕೆ ಮೀಸಲಾತಿಯೇ ಅಡಿಗಲ್ಲು: ಡಾ. ಯತೀಂದ್ರ ಸಿದ್ದರಾಮಯ್ಯ
ರಾಜ್ಯದ ಅಹಿಂದ ಮುಖಂಡರು, ಡಿಸಿಸಿ ಬ್ಯಾಂಕ್ ಅಧ್ಯಕ್ಷರು, ಮಾಜಿ ಸಹಕಾರ ಸಚಿವರು ಆದ ಕೆ.ಎನ್ ರಾಜಣ್ಣ ಅವರನ್ನು ಸಚಿವ ಸಂಪುಟಕ್ಕೆ ಪುನಃ ಸೇರ್ಪಡೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಕೆ.ಎನ್.ಆರ್. ಅಭಿಮಾನಿ ಬಳಗದಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷರು ಹಾಗೂ ಮಾಜಿ ನಗರಸಭಾ ಸದಸ್ಯರಾದ ರವಿಶಂಕರ್ ಹೇಳಿದರು.
ಪ್ರತಿಭಟನೆಯಲ್ಲಿ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಚಂಗಾವರ ಮಾರಣ್ಣ, ಜಿಲ್ಲಾ ಜಾತ್ಯಾತೀತ ಯವ ವೇದಿಕೆ ಅಧ್ಯಕ್ಷರಾದ ಡ್ಯಾಗೇರಹಳ್ಳಿ ವಿರೂಪಾಕ್ಷ, ಮಾಜಿ ತಾ.ಪಂ. ಅಧ್ಯಕ್ಷರಾದ ಬುಕ್ಕಾಪಟ್ಟಣ ಮಂಜುನಾಥ್, ಸಿಂಗದಳ್ಳಿ ರಾಜಕುಮಾರ್, ಮುಕುಂದಪ್ಪ, ಮುಖಂಡರಾದ ಜೆ.ಎನ್.ರಾಜಸಿಂಹ, ಹುಳಿಗೆರೆ ಡಾ ಗುಡ್ಡಣ್ಣ, ಗಂಗಾಧರ್ ಕುಂಬಾರಹಳ್ಳಿ, ಶಿವು ಜಾನಕಲ್ಲು, ರಾಜಣ್ಣ ವಿನಾಯಕ ಚಿರತಹಳ್ಳಿ, ಎಂಸಿ ರಾಘವೇಂದ್ರ ಗೌಡ, ಮಾಜಿ ತಾ.ಪಂ. ಸದಸ್ಯ ಸಿ.ದಾಸಪ್ಪ, ಶ್ರೀನಿವಾಸ್, ನಾರಾಯಣಗೌಡ, ಲಕ್ಷ್ಮೀನಾರಾಯಣ, ಧರಣಿ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
೨೧ಶಿರಾ೧: ಶಿರಾ ನಗರದಲ್ಲಿ ಮಂಗಳವಾರ ಶಿರಾ ತಾಲೂಕು ದಲಿತ, ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಕ್ರಿಯಾ ಸಮಿತಿ ಹಾಗೂ ಕೆ.ಎನ್.ಆರ್ ಮತ್ತು ಆರ್.ಆರ್. ಅಭಿಮಾನಿಗಳ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.





