ತುಮಕೂರು ಜಿಲ್ಲೆ ಗುಬ್ಬಿ ಪಟ್ಟಣದ ಅಭಿವೃದ್ದಿ ಯೋಜನೆ, ಇರುವ ಸಮಸ್ಯೆ ಹಾಗೂ ಯೋಜನೆಗಳಿಗೆ ಅವಶ್ಯ ಅನುದಾನ ಮಂಜೂರು ಮತ್ತು ಮೀಸಲಿಡುವ ಬಗ್ಗೆ ಪಟ್ಟಣ ಪಂಚಾಯಿತಿ ಸದಸ್ಯರು ಸಾಮಾನ್ಯ ಸಭೆ ಚರ್ಚಿಸಿದರು.
ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡ ಶಾಸಕ ಎಸ್.ಆರ್.ಶ್ರೀನಿವಾಸ್ ಅವರಿಗೆ ಪ.ಪಂ ಸದಸ್ಯರು ಬೆಳ್ಳಿಗದೆ ನೀಡಿ ಸನ್ಮಾನಿಸಿ ಗೌರವಿಸಿದರು. ನಂತರ ನಡೆದ ಸಾಮಾನ್ಯ ಸಭೆಯಲ್ಲಿ ಹಲವು ತಿಂಗಳ ಬಿಲ್ಗಳು ಹಾಗೂ ಮಂಜೂರಾತಿಗೆ ಚರ್ಚೆ ನಡೆಸಿ ಸಮ್ಮತಿ ನೀಡಲಾಯಿತು.
ಸಭೆಯಲ್ಲಿ ಮಂಡನೆಯಾಗಿ ಮಂಜೂರು ಮಾಡಬೇಕಾದ ಸಾರ್ವಜನಿಕ ಕೆಲಸಗಳ ಪಟ್ಟಿಯನ್ನು ಪಟ್ಟಣ ಪಂಚಾಯಿತಿ ಸದಸ್ಯರು ಮನವಿ ಸಲ್ಲಿಸಿದರು. ಒಳಚರಂಡಿ ಪೂರ್ಣಗೊಳಿಸುವುದು, ಕುಡಿಯುವ ನೀರು ಒದಗಿಸುವ ಹೇರೂರು ಕೆರೆ ಸಾಮರ್ಥ್ಯ ಹೆಚ್ಚಿಸುವುದು, ಬಸ್ ನಿಲ್ದಾಣ ನವೀಕರಣ, ಸರ್ಕಾರಿ ಕಾಲೇಜು ಮೈದಾನದಲ್ಲಿ ಸ್ಟೇಡಿಯಂ ಹಾಗೂ ಕಾಂಪೌಂಡ್ ನಿರ್ಮಾಣ, ಎಂ.ಜಿ ರಸ್ತೆ ಅಭಿವೃದ್ದಿ, ಹೈಟೆಕ್ ಪಾರ್ಕ್ ನಿರ್ಮಾಣ ಹೀಗೆ ಹಲವು ಕೆಲಸದ ಬಗ್ಗೆ ಕೂಲಂಕುಷ ಚರ್ಚೆ ನಡೆಸಿದರು.
ಹೇಮಾವತಿ ನೀರು ಕುಡಿಯುವ ಸಲುವಾಗಿ ಹೇರೂರು ಕೆರೆಗೆ ಶೀಘ್ರದಲ್ಲಿ ಹರಿಯಲಿದೆ. ಈ ಬಗ್ಗೆ ಸಚಿವರ ಜೊತೆ ಮಾತನಾಡಿದ್ದೇನೆ. ಜೊತೆಗೆ ಬಸ್ ನಿಲ್ದಾಣ ನವೀಕರಣ ಮಾಡಲು ಸಹ ಈಗಾಗಲೇ ಚರ್ಚಿಸಿದ್ದೇನೆ ಎಂದ ಶಾಸಕರು, ಮನವಿ ಪತ್ರ ಆಲಿಸಿ ಕೇಶಿಪ್ ರಸ್ತೆ ಹಾದು ಹೋಗುವ ಎಂಜಿ ರಸ್ತೆಗೆ ಡಿವೇಡರ್ ಅಳವಡಿಕೆ ಬಗ್ಗೆ ಸಂಬಂಧಪಟ್ಟ ಸಚಿವರ ಬಳಿ ಮಾತನಾಡುವ ಬಗ್ಗೆ ಭರವಸೆ ನೀಡಿದರು.
ಕುಡಿಯುವ ನೀರು ಸರಬರಾಜು ಮಾಡುವಲ್ಲಿ ಎಚ್ಚರಿಕೆ ಇರಬೇಕು. ಬೇಸಿಗೆ ಕಾಲದಲ್ಲಿ ಪಂಪ್ ಮೋಟಾರ್ ದುರಸ್ಥಿ ಹಾಗೂ ಓವರ್ ಹೆಡ್ ಟ್ಯಾಂಕ್ ದುರಸ್ಥಿ ಕೂಡಲೇ ಮಾಡಿಸಲು ಸೂಚಿಸಿದರು. ವಿದ್ಯಾರ್ಥಿ ವೇತನ ನೀಡಲು ಬಂದ ಅರ್ಜಿಗಳಲ್ಲಿ ಮಾನದಂಡ ಅನುಸರಿಸಿ ಬಡ ಮಕ್ಕಳಿಗೆ ವೇತನ ನೀಡಿ, ಅಲ್ಲಿನ ಸಿರಿವಂತರ ಮಕ್ಕಳ ಬಗ್ಗೆ ಮರು ಪರಿಶೀಲನೆ ಮಾಡಲು ಸೂಚಿಸಿದರು.
ಸಭೆಯಲ್ಲಿ ಪ.ಪಂ ಆಡಳಿತಾಧಿಕಾರಿ ತಹಸೀಲ್ದಾರ್ ಬಿ.ಆರತಿ, ಮುಖ್ಯಾಧಿಕಾರಿ ಮಂಜುಳಾದೇವಿ, ಇಂಜಿನಿಯರ್ ಬಿಂದುಸಾರ ಸೇರಿದಂತೆ ಎಲ್ಲಾ ಪ.ಪಂ ಸದಸ್ಯರು ಹಾಜರಿದ್ದರು.




