ಬಡವರ ಪಾಲಿಗೆ ಆರೋಗ್ಯ ಸೇವೆ ಇನ್ನೂ ಸವಾಲಾಗಿಯೇ ಉಳಿದಿದೆ. ತುರ್ತು ಸಂದರ್ಭಗಳಲ್ಲಿ ದಾಖಲೆಗಳ ಅಡಚಣೆ ಜೀವಕ್ಕೆ ಬೆಲೆ ಕಟ್ಟುವಂತಾಗಿದೆ. ಮಕ್ಕಳ ಆರೋಗ್ಯ, ವಿಶೇಷವಾಗಿ ಜೀವಕ್ಕೆ ಅಪಾಯವಾದ ರೋಗಗಳಲ್ಲಿ, ಯಾವುದೇ ತಾಂತ್ರಿಕ ತೊಂದರೆಗಳು ಅಡ್ಡಿಯಾಗಬಾರದು.
ಕಳೆದ ಐದು ತಿಂಗಳ ಹಿಂದೆ ಲವಲವಿಕೆಯಿಂದ ಕುಣಿದು ಕುಪ್ಪಳಿಸಿದ ಬಾಲಕಿ ಯೋಗಿತಾ ಇದ್ದಕ್ಕಿದ್ದಂತೆ ಜ್ವರಕ್ಕೆ ತುತ್ತಾದರು. ಈ ಜ್ವರ ಮೆದುಳಿನ ನರವ್ಯೂಹಕ್ಕೆ ಆಘಾತ ತಂದಿದೆ. ಕ್ಯಾನ್ಸರ್ ನಾಲ್ಕನೇ ಹಂತದಲ್ಲಿದ್ದ ಕಾರಣ ಈ ಹತ್ತು ವರ್ಷದ ಹೆಣ್ಣುಮಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಇಡೀ ಕುಟುಂಬ ಸತತ ಐದು ತಿಂಗಳಿಂದ ಆಸ್ಪತ್ರೆಗಳಿಗೆ ಅಲೆದಾಡಿದೆ. ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಲಕ್ಷಾಂತರ ಹಣ ವೆಚ್ಚ ಮಾಡಬೇಕಿದೆ. ಆದರೆ ಇವರ ದುರಾದೃಷ್ಟಕ್ಕೆ ಆಧಾರ್ ಕಾರ್ಡ್ ಕಾರಣವಾಗಿದ್ದು, ಮಗುವಿಗೆ ಸೂಕ್ತ ಉಚಿತ ಚಿಕಿತ್ಸೆ ಸಿಗದಂತಾಗಿದೆ.
ಗುಬ್ಬಿ ಸಮೀಪದ ಜಿ ಹರಿವೆಸಂದ್ರ ಗ್ರಾಮದ ಮಂಜುನಾಥ್ ಹಾಗೂ ನೇತ್ರಾವತಿ ದಂಪತಿಯ ಮುದ್ದಿನ ಮಗಳು ಯೋಗಿತಾ ತನ್ನ ಹತ್ತನೇ ವಯಸ್ಸಿಗೆ ಮಾರಕ ಕಾಯಿಲೆ ಆವರಿಸಿರುವುದು ಅರಿವಿಗೇ ಬಂದಿಲ್ಲ. ಕಳೆದ ಅಕ್ಟೋಬರ್ ಮಾಹೆಯಲ್ಲಿ ಏಕಾಏಕಿ ಜ್ವರಕ್ಕೆ ತುತ್ತಾದ ಯೋಗಿತಾಗೆ ಚಿಕಿತ್ಸೆ ಕೊಡಿಸಲಾಗಿದೆ. ಬಳಿಕ ಬಲಗೈ ಹಾಗೂ ಬಲಗಾಲು ಸ್ವಾಧೀನ ಕಳೆದುಕೊಳ್ಳಲು ಆರಂಭವಾಗಿದ್ದು, ಇದರಿಂದ ಆತಂಕಗೊಂಡ ಕುಟುಂಬಸ್ಥರು ಮಗುವನ್ನು ಗುಬ್ಬಿ, ತುಮಕೂರು ಆಸ್ಪತ್ರೆಗೆ ಹೊತ್ತುಕೊಂಡು ತಿರುಗಿದ್ದಾರೆ. ನಂತರ ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಗೆ ತೆರಳಿದಾಗ ಮೆದುಳು ಕ್ಯಾನ್ಸರ್ ನಾಲ್ಕನೇ ಹಂತದಲ್ಲಿರುವುದು ತಿಳಿದುಬಂದಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವಶ್ಯಕವಾಗಿರುವ ದಾಖಲೆ ಆಧಾರ್ ಕಾರ್ಡ್ ಸಮಸ್ಯೆ ತಂದೊಡ್ಡಿದೆ.
ಯೋಗಿತಾ ಹೆಸರು ಆಧಾರ್ ಕಾರ್ಡಿನಲ್ಲಿ ಕನ್ನಡ ಅಕ್ಷರಗಳ ಬದಲಿಗೆ ಇಂಗ್ಕಿಷ್ ಅಕ್ಷರಗಳಲ್ಲಿ ನಮೂದಾಗಿದೆ. ಇದು ದೊಡ್ಡ ಎಡವಟ್ಟು ತಂದೊಡ್ಡಿದ್ದು, ಮಗುವಿನ ಜೀವಕ್ಕೆ ಕಂಟಕವಾಗಿದೆ. ಆಧಾರ್ ಕಾರ್ಡ್ ತಿದ್ದುಪಡಿ ಮಾಡಲು ಈಗಾಗಲೇ ಹತ್ತು ಬಾರಿ ಪ್ರಯತ್ನಪಟ್ಟರೂ ರದ್ದುಗೊಳ್ಳುತ್ತಿದೆ. ಆದರೆ ಮಗುವಿನ ಆಧಾರ್ ಕಾರ್ಡ್ ಸರಿಯಾಗುತ್ತಿಲ್ಲ. ಬಿಪಿಎಲ್ ಕಾರ್ಡ್ನಲ್ಲೂ ಮಗುವಿನ ಹೆಸರು ಕೈಬಿಟ್ಟಿದೆ. ಇದೇ ಈ ಜೀವಕ್ಕೆ ಮಾರಕವಾಗಿದೆ. ಎಲ್ಲ ಆಸ್ಪತ್ರೆಯಲ್ಲೂ ಬಿಪಿಎಲ್ ಕಾರ್ಡ್ ಕೇಳುತ್ತಿದ್ದು, ಆಧಾರ್ ಕಾರ್ಡ್ ಸರಿಯಿಲ್ಲ ಎಂಬ ಉತ್ತರಕ್ಕೆ ಹಣ ಪಾವತಿಸುವಂತೆ ಮರು ಉತ್ತರ ಬಂದಿದೆ. ಈಗಾಗಲೇ ತಂದೆ ಮಂಜುನಾಥ್ ₹14 ಲಕ್ಷ ಸಾಲ ಮಾಡಿ ಯೋಗೀತಾಗೆ ಚಿಕಿತೆ ಕೊಡಿಸುವುದಕ್ಕಾಗಿ ಆಸ್ಪತ್ರೆಗಳಿಗೆ ಹೊತ್ತು ತಿರುಗುತ್ತಿದ್ದಾರೆ.
ಊರಿನಲ್ಲಿ ಎಲ್ಲ ಮಕ್ಕಳಂತೆ ಆಟವಾಡಿಕೊಂಡು ವಠಾರದಲ್ಲಿ ಮುದ್ದಾಗಿ ಕಾಣುತ್ತಿದ್ದ ಯೋಗಿತಾ ಇಂದು ಕುಟುಂಬದ ಆಶ್ರಯದಲ್ಲಿ ಮಲಗಿದಲ್ಲೇ ಮಲಗಿದ್ದಾಳೆ. ಸ್ವಾಧೀನವಿಲ್ಲದ ಮಗುವಿಗೆ ನಿತ್ಯ ತಂದೆತಾಯಿ ಸೇವೆ ಮಾಡುತ್ತಿದ್ದಾರೆ. ಮಗುವನ್ನು ಶತಾಯ ಗತಾಯ ಉಳಿಸಿಕೊಳ್ಳಲು ಮಂಜುನಾಥ್ ಸಾಲದ ಸುಳಿಯ ನಡುವೆಯೂ ಇರುವ ಅಲ್ಪ ಜಮೀನು ಮಾರಾಟ ಮಾಡುವ ಯೋಚನೆ ಮಾಡುತ್ತಿದ್ದಾರೆ. ಆಧಾರ್ ಕಾರ್ಡ್ನಲ್ಲಿ ಕನ್ನಡದ ಬದಲಾಗಿ ಎರಡೂ ಬಾರಿ ಇಂಗ್ಲಿಷ್ನಲ್ಲಿ ಹೆಸರು ನಮೂದಾಗಿರುವುದೇ ಇಡೀ ಕುಟುಂಬಕ್ಕೆ ಸಾಲದ ಹೊರೆಯಾಗಿದೆ. ಕಾರ್ಡ್ ಸರಿಯಾಗಿದ್ದಲ್ಲಿ ಇಂದು ಆ ಮಗುವಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿತ್ತು. ಸಾಲದ ಸುಳಿಯಿಂದ ಬಡಕುಟುಂಬ ಹೊರಗುಳಿಯುತ್ತಿತ್ತು ಎಂಬ ಮಾತು ಇಡೀ ಗ್ರಾಮದಲ್ಲೇ ಕೇಳಿಬಂದಿದೆ. ಈ ಸಮಸ್ಯೆಗೆ ಜಿಲ್ಲಾಡಳಿತ ಪರಿಹಾರ ಹುಡುಕಬೇಕಿದೆ. ಬೀದಿಗೆ ಬೀಳುವ ಬಡಕುಟುಂಬ ಉಳಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ. ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಿದರೆ ಕ್ಯಾನ್ಸರ್ ರೋಗಿ ಯೋಗಿತಾಗೆ ಚಿಕಿತ್ಸೆ ದೊರೆಯಲಿದೆ.
ಯೋಗಿತಾಳ ತಂದೆ ಮಂಜುನಾಥ್ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಐದು ತಿಂಗಳ ಹಿಂದೆ ಜ್ವರದಿಂದ ಬಳಲಿದ್ದ ನನ್ನ ಮಗಳು ಯೋಗಿತಾ ಒಂದು ವಾರದಲ್ಲಿ ಕೈಕಾಲು ಸ್ವಾಧೀನ ಕಳೆದುಕೊಂಡಳು. ಹೆಗ್ಗೆರೆ, ತುಮಕೂರು ಓಡಾಡಿ ನಂತರ ನಿಮ್ಹಾನ್ಸ್ ಆಸ್ಪತ್ರೆಗೆ ತೆರಳಿದಾಗ ನಾಲ್ಕನೇ ಹಂತದಲ್ಲಿದ್ದ ಮೆದುಳು ಕ್ಯಾನ್ಸರ್ ಬಗ್ಗೆ ತಿಳಿದಾಗ ನಮಗೆ ಆಘಾತ ತಂದಿತ್ತು. ಮಗು ಉಳಿಸಿಕೊಳ್ಳಲು ಮತ್ತಷ್ಟು ಆಸ್ಪತ್ರೆಗಳಿಗೆ ತೆರಳಿದಾಗ ಎಲ್ಲೆಡೆ ಕೇಳಿದ್ದು ಬಿಪಿಎಲ್ ಕಾರ್ಡ್ ಹಾಗೂ ಆಧಾರ್ ಕಾರ್ಡ್. ಈ ಕಾರ್ಡ್ಗಳಲ್ಲಿನ ಎಡವಟ್ಟು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ತಿದ್ದುಪಡಿ ಮಾಡಿಸಿದ್ದೆವು. ಹತ್ತು ಬಾರಿ ರದ್ದುಗೊಂಡಿದೆ. ಸಣ್ಣ ತಪ್ಪು ಈಗಾಗಲೇ 14 ಲಕ್ಷ ರೂಪಾಯಿಯ ಸಾಲದ ಸುಳಿಗೆ ಸಿಲುಕಿಸಿದೆ, ಬಿಪಿಎಲ್ ಮತ್ತು ಆಧಾರ್ ಕಾರ್ಡ್ ಎಲ್ಲರಿಗೂ ವರವಾದರೆ ನಮಗೆ ಶಾಪವಾಗಿವೆ” ಎಂದು ಮರುಕ ವ್ಯಕ್ತಪಡಿಸಿದರು.
ಯೋಗಿತಾಳ ತಾಯಿ ನೇತ್ರಾವತಿ ಮಾತನಾಡಿ, “ಆಡಿ ಕುಣಿದಾಡಿದ ಮಗಳ ದೇಹ ಇಂದು ಮಲಗಿದಲ್ಲೇ ಮಲಗಿದೆ. ಅಂಗಾಂಗಳು ಸ್ವಾಧೀನ ಕಳೆದುಕೊಂಡಿರುವ ನನ್ನ ಮಗುವಿಗೆ ನಿತ್ಯ ಆರೈಕೆ ಮಾಡುತ್ಲೇ ಇದ್ದೀವಿ. ಉತ್ತಮ ಚಿಕಿತ್ಸೆಗೆ ನಿರಂತರವಾಗಿ ಪರದಾಡುತ್ತಿದ್ದೇವೆ. ಆಧಾರ್ ಕಾರ್ಡ್ ಹೆಸರು ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಯಲ್ಲಿ ಬರುವಂತೆ ದಯವಿಟ್ಟು ಸಹಾಯ ಮಾಡಿ” ಎಂದು ಗೋಗರೆಯುತ್ತಿದೆ ತಾಯಿ ಹೃದಯ.

ಸಂತ್ರಸ್ತ ಕುಟುಂಬವು ಕಳೆದ ಐದು ತಿಂಗಳಿಂದ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುತ್ತಿದೆ. ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತಿದೆ. ಮಗುವಿನ ಜೀವ ಉಳಿಸಿಕೊಳ್ಳಬೇಕೆಂಬ ಆಸೆಯಿಂದ ಮನೆಮಠ, ಆಭರಣ, ಜಮೀನು ಎಲ್ಲವನ್ನೂ ಮಾರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಆದರೆ ಈ ದುಃಸ್ಥಿತಿಯಲ್ಲಿ ಸಹಾಯವಾಗಬೇಕಾದ ವ್ಯವಸ್ಥೆಯೇ ಅಡ್ಡಿಯಾಗುತ್ತಿದೆ. ಆಧಾರ್ ಕಾರ್ಡ್ ಸಂಬಂಧಿತ ತೊಂದರೆಗಳಿಂದ ಮಗುವಿಗೆ ದೊರಕಬೇಕಾದ ಉಚಿತ ಚಿಕಿತ್ಸೆಯು ಸಿಗದೆ, ಕುಟುಂಬ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ.
ಇದನ್ನೂ ಓದಿದ್ದೀರಾ? ಕಾರವಾರಕ್ಕೆ ಶೀಘ್ರವೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು: ಬಜೆಟ್ನಲ್ಲಿ ಘೋಷಣೆಯ ಭರವಸೆ ನೀಡಿದ ಸಿಎಂ
ಇದು ಕೇವಲ ಯೋಗಿತಾಳ ಕಥೆಯಲ್ಲ; ಇದು ನಮ್ಮ ಸಮಾಜದ ಆರೋಗ್ಯ ವ್ಯವಸ್ಥೆಯ ಕಣ್ಣಾಡಿ. ಬಡವರ ಪಾಲಿಗೆ ಆರೋಗ್ಯ ಸೇವೆ ಇನ್ನೂ ಸವಾಲಾಗಿಯೇ ಉಳಿದಿದೆ. ತುರ್ತು ಸಂದರ್ಭಗಳಲ್ಲಿ ದಾಖಲೆಗಳ ಅಡಚಣೆ ಜೀವಕ್ಕೆ ಬೆಲೆ ಕಟ್ಟುವಂತಾಗಿದೆ. ಮಕ್ಕಳ ಆರೋಗ್ಯ, ವಿಶೇಷವಾಗಿ ಜೀವಕ್ಕೆ ಅಪಾಯವಾದ ರೋಗಗಳಲ್ಲಿ, ಯಾವುದೇ ತಾಂತ್ರಿಕ ತೊಂದರೆಗಳು ಅಡ್ಡಿಯಾಗಬಾರದು. ಇಂತಹ ಮಕ್ಕಳ ಬದುಕು ಉಳಿಸಲು ಸರ್ಕಾರ, ಸಮಾಜ ಮತ್ತು ಸೇವಾ ಸಂಸ್ಥೆಗಳು ಒಂದಾಗಿ ಕೈಜೋಡಿಸಬೇಕಾದ ಅನಿವಾರ್ಯತೆ ಇದೆ. ಆರೋಗ್ಯ ಸೇವೆಗಳು ಎಲ್ಲರಿಗೂ ಸಮಾನವಾಗಿ, ಸುಲಭವಾಗಿ ಮತ್ತು ತಕ್ಷಣಕ್ಕೆ ಲಭ್ಯವಾಗುವಂತಾಗಬೇಕು. ಮಾನವೀಯತೆ ಯಾವುದೇ ದಾಖಲೆಗೂ ಮೀರಿ ನಿಲ್ಲುವಂತಾಗಬೇಕು.





