ಕರ್ನಾಟಕ ರಾಜ್ಯ ಕ್ರೀಡಾ ಕ್ಷೇತ್ರದಲ್ಲೂ ತನ್ನ ಛಾಪು ಮೂಡಿಸುತ್ತಿದೆ. ಐಟಿ ರಾಜಧಾನಿ ಬೆಂಗಳೂರು ನಗರ ಕ್ರೀಡಾ ರಾಜಧಾನಿಯಾಗಿ ಬದಲಾಗುತ್ತಿದೆ ಎಂದು ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ತುಮಕೂರಿನಲ್ಲಿ ನಡೆದ ಕರ್ನಾಟಕ ಕ್ರೀಡಾಕೂಟ 2025-26ರ ಸಮರೂಪ ಸಮಾರಂಭದಲ್ಲಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಸೋಲು ಅಂದರೆ ವೈಫಲ್ಯವಲ್ಲ. ಅದು ಕಲಿಕೆಗೆ ಇನ್ನೊಂದು ಮೆಟ್ಟಿಲು. ಸೋಲು ಅನುಭವ ಒದಗಿಸುತ್ತದೆ. ಮುಂದಿನ ಗುರಿಯನ್ನು ಬಲಪಡಿಸುತ್ತದೆ ಎಂದು ರಾಜ್ಯಪಾಲರು ಹೇಳಿದರು.
ಕ್ರೀಡಾಪಟುಗಳು ನಿರಂತರವಾಗಿ ಅಭ್ಯಾಸ ಮಾಡಿ ನಿಮ್ಮ ಆರೋಗ್ಯ ಮತ್ತು ಪಾತ್ರ ಎರಡನ್ನೂ ಕಾಪಾಡಿಕೊಳ್ಳಿ. ಕಠಿಣ ಪರಿಶ್ರಮಕ್ಕೆ ಪರ್ಯಾಯವಿಲ್ಲ. ಶಿಸ್ತು ಯಶಸ್ಸಿನ ಮಂತ್ರವಾಗಿದೆ ಎಂದು ರಾಜ್ಯಪಾಲರು ತಿಳಿಸಿದರು.

ಕ್ರೀಡಾಪಟುಗಳ ಯಶಸ್ಸಿನ ಹಿಂದೆ ತರಬೇತುದಾರರ ಪರಿಶ್ರಮ ಹೆಚ್ಚು ಇರುತ್ತದೆ. ಕೋಚ್ಗಳು ಕ್ರೀಡಾ ತಂತ್ರಗಳನ್ನು ಕಲಿಸುವುದಲ್ಲದೆ ಆಟಗಾರರ ವ್ಯಕ್ತಿತ್ವವನ್ನು ನಿರ್ಮಿಸುತ್ತಾರೆ. ಅವರ ಕಠಿಣ ಪರಿಶ್ರಮ, ತಾಳ್ಮೆ ಮತ್ತು ಮಾರ್ಗದರ್ಶನ ಆಟಗಾರರನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಿದರು.
ಕರ್ನಾಟಕ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಕ್ರೀಡಾಪಟುಗಳು, ಭವಿಷ್ಯದಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವ ವಿಶ್ವಾಸವಿದೆ ಎಂದರು.
ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ಮಾತನಾಡಿ, ಈ ಸಲದ ಕರ್ನಾಟಕ ಕ್ರೀಡಾಕೂಟ ಅತ್ಯಂತ ಯಶಸ್ವಿಯಾಗಿದೆ ಎಂದು ಹೇಳಿದರು.

ತುಮಕೂರಿಗೆ ಇಂತಹ ದೊಡ್ಡ ಕ್ರೀಡಾಕೂಟ ಆಯೋಜಿಸುವ ಶಕ್ತಿ ಮತ್ತು ಸಾಮರ್ಥ ಇದೆ ಎಂಬುದು ರಾಜ್ಯಕ್ಕೆ ತಿಳಿಯಿತು. ಇದು ಹೆಮ್ಮೆಯ ವಿಷಯ ಎಂದು ಪರಮೇಶ್ವರರ ಹೇಳಿದರು.
ಕರ್ನಾಟಕ ಒಲಿಂಪಿಕ್ಸ್ ಅಧ್ಯಕ್ಷ ಕೆ. ಗೋವಿಂದರಾಜು ಮಾತನಾಡಿ, ತುಮಕೂರಿನಲ್ಲಿ ಈಜುಕೊಳ, ಹಾಕಿ ಕ್ರೀಡಾಂಗಣ ನಿರ್ಮಿಸಲು ಮುಖ್ಯಮಂತ್ರಿಗಳು 6 ಕೋಟಿ ರೂ. ಕೊಡುವುದಾಗಿ ಭರವಸೆ ನೀಡಿದ್ದಾರೆ. ಈ ಹಣವನ್ನ ಹೆಚ್ಚಿಸಲು ಮತ್ತೊಮ್ಮೆ ಮುಖ್ಯಮಂತ್ರಿ ಬಳಿ ಮನವಿ ಮಾಡುವುದಾಗಿ ಹೇಳಿದರು.
ಸಮಾರಂಭದ ಕೊನೆಯಲ್ಲಿ ರಾಜ್ಯಪಾಲರು, ವಿವಿಧ ಕ್ರೀಡೆಯಲ್ಲಿ ವಿಜೇತರಿಗೆ ಪದಕ ವಿತರಿಸಿದರು.
ಸಮಾರಂಭದಲ್ಲಿ ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್, ಕರ್ನಾಟಕ ಒಲಿಂಪಿಕ್ಸ್ ಅಧ್ಯಕ್ಷ ಡಾ. ಕೆ. ಗೋವಿಂದರಾಜು, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಎಸ್ಪಿ ಕೆ.ವಿ. ಅಶೋಕ್ ಉಪಸ್ಥಿತರಿದ್ದರು.





