ಚಿಕ್ಕನಾಯಕನಹಳ್ಳಿ ಪಟ್ಟಣದ ಸ್ತ್ರೀಶಕ್ತಿ-ಭವನದಲ್ಲಿ ಸಂಚಲನ-ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ, ಗಾಂಧಿ-ಕುವೆಂಪು-ಅಂಬೇಡ್ಕರ್ ಕುರಿತಾದ ವಿಚಾರಸಂಕಿರಣವನ್ನು ಆಯೋಜಿಸಲಾಗಿತ್ತು.
ಗಾಂಧಿ-ಕುವೆಂಪು-ಅಂಬೇಡ್ಕರ್ ಆಶಯಗಳ ಬುನಾದಿಯ ಮೇಲೆಸರ್ವೋದಯ ಹಾಗೂ ಸರ್ವಜನಾಂಗದ ಶಾಂತಿಯ ತೋಟ…. ಎಂಬ ಬಹುಜನ-ಸಮನ್ವಯದ ಆಶಯಗಳ ಹಿನ್ನೆಲೆಯ ವೈಚಾರಿಕ-ಕಾರ್ಯಕ್ರಮವನ್ನಾಗಿ ಈ ವಿಚಾರಸಂಕಿರಣವನ್ನು ರೂಪಿಸಲಾಗಿತ್ತು.
ರಾಷ್ಟ್ರಪಿತ ಆಶಯದ ಸರ್ವೋದಯ ಹಾಗೂ ರಾಷ್ಟ್ರಕವಿ ಆಶಯದ ಸರ್ವಜನಾಂಗದ ಶಾಂತಿಯ ತೋಟ’ ಹಾಗೂ ಅಂಬೇಡ್ಕರ್-ಸಾಮಾಜಿಕನ್ಯಾಯ ಮತ್ತು ಶಾಂತವೇರಿ ಗೋಪಾಲಗೌಡರ ನೈತಿಕ-ಎಚ್ಚರದ ಕಸುವನ್ನು ಮುನ್ನಡೆಸುವ ಪ್ರಯತ್ನವಾಗಿ ವಿಚಾರಸಂಕಿರಣ ರೂಪಣೆಗೊಂಡಿತ್ತು. ಸಾಮರಸ್ಯ ಮತ್ತು ಸಮಸಮಾಜದ ಹಕ್ಕುದಾರಿಕೆಯ ವಿಚಾರದ ರಥ ಮುಂದೆಳೆಯುವ ಪ್ರಯಾಸದ ಬಹುಜನ-ಸಮನ್ವಯತೆಯ ಕಾರ್ಯಕ್ರಮವಾಗಿ ಇದು ಯಶಸ್ವಿಯಾಯಿತು.

ಈಯೆಲ್ಲ ಧೀಮಂತರು ದೇಶಸಮಾಜಕ್ಕೆ ನೀಡಿದ ನೈತಿಕ-ಎಚ್ಚರ ಹಾಗೂ ಆತ್ಮಪ್ರಜ್ಞೆ, ಆತ್ಮಶೋಧ ಹಾಗೂ ಆತ್ಮಾಭಿಮಾನ ಸೇರಿದಂತೆ ಹಲವು ವಿಷಯಗಳ ಬಗ್ಗೆ, ವಿಚಾರವಾದಿ-ಚಿಂತಕರಾದ ಡಾ.ಕೆ ಪಿ ನಟರಾಜ, ನಟರಾಜ ಹೊನ್ನವಳ್ಳಿ, ಕುಂದೂರು ತಿಮ್ಮಯ್ಯ, ಡಾ.ರಘುಪತಿ, ಮಲ್ಲಿಕಾರ್ಜುನ ಭಟ್ಟರಹಳ್ಳಿ ಹಾಗೂ ಡಾ ಸಿ ಎಸ್ ರಂಗನಾಥ್’ರವರು ವಿಚಾರ-ಮಂಡಿಸಿದರು. ಕಾರ್ಯಕ್ರಮದಲ್ಲಿ, ಅಂಬೇಡ್ಕರ್-ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ಬಹುಜನ-ಸಮನ್ವಯತೆಯನ್ನು ವಿಸ್ತರಿಸಿ ಪರಾಮರ್ಶಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ವಿಚಾರಸಂಕಿರಣ ಯಶಸ್ವಿಯಾಯಿತು.
ವಿವಿಧತೆಯಲ್ಲಿ ಏಕತೆಯ ದೇಶವನ್ನು ಎದೆಯಲ್ಲಿ ಕಾಪಿಟ್ಟುಕೊಂಡಿರುವ ಬಹುಜನರು ಒಗ್ಗೂಡಿ ಒಂದೆಡೆ ಸೇರಿ ಜರುಗಿದ ಕಾರ್ಯಕ್ರಮವಿದು. ವಿಶೇಷವೆಂದರೆ, ಭೂತ ಮತ್ತು ಭವಿಷ್ಯವನ್ನು ವರ್ತಮಾನದ ಕನ್ನಡಿಯಲ್ಲಿ ಇಟ್ಟು ಪರಾಮರ್ಶಿಸಿಕೊಳ್ಳುವ ವೈಚಾರಿಕ ಸಾಧ್ಯತೆಗಳನ್ನು ಶೋಧಿಸುತ್ತಿರುವ ಸಂಚಲನ-ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆ, ಗ್ರಾಮಾಂತರ ಪ್ರದೇಶದಲ್ಲಿ ಹೀಗೆ ವೈಚಾರಿಕ ಮತ್ತು ಪ್ರಗತಿಪರ ನಿರಂತರತೆಯನ್ನು ಕ್ರಿಯಾಶೀಲಗೊಳಿಸುತ್ತಿರುವುದು.
‘ದಸಂಸ-ಅಂಬೇಡ್ಕರವಾದಿ’ ಹೋರಾಟದ ಹಿರಿಯ ಚೇತನ ಕುಂದೂರು ತಿಮ್ಮಯ್ಯನವರಿಗೆ ಸಂಚಲನ-ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ಭಾವಚಿತ್ರ ಅರ್ಪಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ,ಅಲೆಮಾರಿ ಬುಡಕಟ್ಟು ಮಹಾಸಭಾ ತಾಲ್ಲೂಕು-ಅಧ್ಯಕ್ಷ ರಂಗನಾಥ್, ತಾಲ್ಲೂಕು ಕೆಡಿಪಿ-ಸಭೆ ಸದಸ್ಯ ಶಂಕರ್ ಬರಕನಹಾಲ್, ಅಲೆಮಾರಿ ಹೋರಾಟಗಾರ ಹಂದಿಜೋಗಿ ರಾಜಪ್ಪ, ಕಲಾವಿದ ಸಿ ಹೆಚ್ ಗಂಗಾಧರ್, ನೂರುಲ್ಲಾ ಸಾಬ್, ಸಾಸಲು ಮಂಜುನಾಥಸ್ವಾಮಿ, ಇರ್ಫಾನ್, ರಮೇಶ್ ಯರೇಕಟ್ಟೆ, ಶ್ರೀನಿಧಿ, ಇಮ್ರಾನ್, ಅಪ್ಸರ್, ಉಪನ್ಯಾಸಕರಾದ ರವಿ, ನೀರಾವರಿ ಹೋರಾಟಗಾರ ಆಟೋಮಂಜು, ರಂಗಾಭ್ಯಾಸಿ ನಾಸೆರ್ ಸೈಯ್ದ್ ಹುಸೇನ್ ಸೇರಿದಂತೆ ಬಹಳಷ್ಟು ಬಹುಜನರು ಉಪಸ್ಥಿತರಿದ್ದರು.
ವರದಿ – ಸಂಚಲನಚಿಕ್ಕನಾಯಕನ ಸೀಮೆ’ಯಿಂದ





