ಎಸ್ ಐಆರ್ ನಿಂದ ಬಡವರು ಮತ್ತು ಮಹಿಳೆಯರ ಓಟಿನ ಹಕ್ಕುಗಳನ್ನು ಕಸಿಯಲಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಎಚ್. ವಿ. ವಾಸು ಆರೋಪಿಸಿದರು
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನಲ್ಲಿ ಆಯೋಜಿಸಿದ್ದ ಸಂವಿಧಾನ ಅರಿವು ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಎಸ್ ಐಆರ್ ನಿಂದ ಹೆಣ್ಣು ಮಕ್ಕಳು ಮತ್ತು ಬಡವರ ಓಟುಗಳನ್ನು ಹೆಚ್ಚು ಡಿಲೀಟ್ ಮಾಡಲಾಗುತ್ತಿದೆ. ಮತದಾರರ ಪಟ್ಟಿಗೆ ಪ್ರಜೆಗಳ ಹೆಸರು ಸೇರಿಸುವುದು ಸರ್ಕಾರದ ಕೆಲಸ. ಆದರೆ ಮತದಾರರ ಪಟ್ಟಿಯಿಂದ ಹೆಸರು ತೆಗೆಯುವುದು ಸರ್ಕಾರದ ಕೆಲಸ ಎಂದುಕೊಂಡಂತೆ ಕಾಣುತ್ತಿದೆ. ಎಸ್ಐಆರ್ ನಿಂದ ಡಿಲೀಟ್ ಆಗುತ್ತಿರುವ ಮತದಾರರ ಸಂಖ್ಯೆ ನೋಡಿದರೆ ಈ ರೀತಿ ಗೋಚರಿಸುತ್ತದೆ ಎಂದರು

ಮತದಾನ ಮೂಲಭೂತ ಹಕ್ಕು. ಅದರೆ ಸಂವಿಧಾನ ಜಾರಿಗೂ ಮುನ್ನ ಎಲ್ಲರಿಗೂ ಮತದಾನ ಮಾಡುವ ಅವಕಾಶ ಇರಲಿಲ್ಲ. ಸೀಮಿತ ವರ್ಗಗಳು ಮಾತ್ರ ಮತದಾನದ ಹಕ್ಕು ಪಡೆದಿದ್ದರು. ಈ ಮತದಾನದ ಹಕ್ಕು ಪಡೆಯಲು ಜಗತ್ತಿನ ಹಲವು ರಾಷ್ಟ್ರದಲ್ಲಿ ಹೋರಾಟಗಳು ನಡೆದಿವೆ. ಅದರೆ ಭಾರತದಲ್ಲಿ ಅಂತಹ ಪ್ರಸಂಗ ಉದ್ಭವಿಸಲಿಲ್ಲ. ಸಂವಿಧಾನ ಎಲ್ಲರಿಗೂ ಸಮಾನ ಮತದಾನದ ಹಕ್ಕು ನೀಡಿದೆ. ಆದರೆ ಈಗ ಸಂವಿಧಾನದ ಆಶಯದ ವಿರುದ್ಧ ಚುನಾವಣಾ ಆಯೋಗ ಕೆಲಸ ಮಾಡುತ್ತಿದೆ. ಇದರ ಬಗ್ಗೆ ಧ್ವನಿ ಎತ್ತಬೇಕು ಎಂದರು

ಅನಕ್ಷರಸ್ಥರೇ ಹೆಚ್ಚಾಗಿದ್ದ ಭಾರತದಲ್ಲಿ ದಾಖಲೆ ಒದಗಿಸುವುದೇ ಸಾವಲು ಆಗಿದೆ. ಮನೆಯಲ್ಲಿ ಕರೆಯುವುದು ಒಂದು ರೀತಿಯ ಹೆಸರಾದರೇ, ಶಾಲಾ ದಾಖಲೆಗಳಲ್ಲಿ ಒಂದು ರೀತಿಯ ದಾಖಲೆಗಳಿರುತ್ತವೆ. ಹಾಗಾಗಿ ಪ್ರಸ್ತುತ ಚುನಾವಣೆ ಆಯೋಗ ಎಸ್ ಐಆರ್ ಗೆ ರೂಪಿಸಿರುವ ಮಾನದಂಡಗಳಿಂದ ಮಹಿಳೆಯರು, ಬಡವರು ಮತದಾನದ ಹಕ್ಕು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಚುನಾವಣಾ ಆಯೋಗ ಈ ಮಟ್ಟಿನ ಧೖರ್ಯ ಮಾಡಲು ಕೇಂದ್ರ ಸರ್ಕಾರ ಚುನಾವಣಾ ಆಯುಕ್ತರು ಏನು ಮಾಡಿದರು ಅವರನ್ನು ಶಿಕ್ಷೆಗೆ ಒಳಪಡಿಸುವಂತಿಲ್ಲ ಎಂದು ತಂದಿರುವ ಕಾಯಿದೆಯಿಂದ ಎಸ್ ಐಆರ್ ಅಂತಹ ಹುಚ್ಚಾಟಗಳು ನಡೆಯುತ್ತಿವೆ ಎಂದರು.

ಎದ್ದೇಳು ಕರ್ನಾಟಕದ ಮಲ್ಲಿಗೆ ಸಿರಿಮನೆ ಮಾತನಾಡಿ ಎಸ್ ಐಆರ್ ನಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಮತ್ತು ಸಂವಿಧಾನದ ಬಗ್ಗೆ ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸಲು ಸಂವಿಧಾನ ರಕ್ಷಣಾ ಪಡೆ ಗಟ್ಟಿಯಾಗಿ ಕಟ್ಟಬೇಕು. ನಾವು ಸಂವಿಧಾನವನ್ನು ರಕ್ಷಿಸಿದರೆ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ. ಸಮಾಜದಲ್ಲಿ ಆಗುವ ಎಲ್ಲ ಅನ್ಯಾಯದ ಬಗ್ಗೆಯೂ ನಾಗರಿಕ ಸಮಾಜ ಮತ್ತು ಸಾಮಾಜಿಕ ಸಂಘಟನೆಗಳು ಹೋರಾಟ ನಡೆಸುತ್ತ ಬಂದಿವೆ. ಎಸ್ಐಆರ್ ನಿಂದ ಓಟಿನ ಹಕ್ಕನ್ನೆ ಕಸಿಯುವ ಹುನ್ನಾರ ನಡೆದಿದೆ. ಇದರ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ. ಸತೀಶ್, ಎದ್ದೇಳು ಕರ್ನಾಟಕದ ಜಿಲ್ಲಾ ಸಂಚಾಲಕಿ ಇಂದಿರಮ್ಮ, ರಾಮಕೃಷ್ಣಪ್ಪ ಸೇರಿದಂತೆ ಅನೇಕರು ಹಾಜರಿದ್ದರು.





