ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಗೋರ್ಲೆತ್ತು ಸಮೀಪ ಕ್ರಿಸ್ಮಸ್ ದಿನವೇ ಸಂಭವಿಸಿದ ಸ್ಲೀಪರ್ ಬಸ್ ಮತ್ತು ಲಾರಿ ನಡುವಿನ ಭೀಕರ ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕ್ರಿಸ್ಮಸ್ ರಜೆಗೆ ಸ್ವಗ್ರಾಮಕ್ಕೆ ಹೊರಟ ಪ್ರಯಾಣಿಕರು, ವಾಹನ ಸವಾರರು ಪರದಾಡುವಂತಾಗಿದ್ದು, ಬೆಳಗಿನ ಏಳು ಗಂಟೆ ಸುಮಾರಿಗೆ ವಾಹನಗಳ ನಿಧಾನ ಸಂಚಾರ ಆರಂಭವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಅಪಘಾತದಲ್ಲಿ ಐವರು ಸಜೀವ ದಹನವಾಗಿ ಸಾವನ್ನಪ್ಪಿದ್ದಾರೆ.
ಆಂದ್ರ ಪ್ರದೇಶದ ಬಸ್ ಬೆಂಕಿ ದುರಂತ ಮರೆಯಾಗುವ ಮುನ್ನವೇ ಇಂದು ಮುಂಜಾನೆ ಚಿತ್ರದುರ್ಗ ಜಿಲ್ಲೆಯ ಗೋರ್ಲೆತ್ತು ಸಮೀಪ ಬೆಳಗಿನ ಜಾವ ಮೂರು ಗಂಟೆ ಸಮಯದಲ್ಲಿ ಡಿವೈಡರ್ ದಾಟಿ ಬಂದ ಲಾರಿಯೊಂದು ಗೋಕರ್ಣಕ್ಕೆ ತೆರಳುವ ಸ್ಲೀಪರ್ ಬಸ್ ಗೆ ನೇರ ಡಿಕ್ಕಿ ಹೊಡೆದಿತ್ತು. ಎರಡೂ ವಾಹನಗಳಿಗೆ ಬೆಂಕಿ ಹತ್ತಿಕೊಂಡು ಲಾರಿ ಡ್ರೈವರ್ ಸೇರಿ 5 ಮಂದಿ ಸಾವನ್ನಪ್ಪಿದ್ದು, ಬೆಂಕಿಗಾಹುತಿಯಾಗಿದ್ದರು. ಇದರಿಂದಾಗಿ ಮುಂಬೈ ಕಡೆಗೆ ಹೋಗುವ ರಸ್ತೆಯಲ್ಲಿ ಬರೋಬ್ಬರಿ 30 ಕಿಲೋಮೀಟರ್ಗೂ ಹೆಚ್ಚು ದೂರ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನಗಳು ಸಾಲುಗಟ್ಟಿ ನಿಂತಿದ್ದವು. ಹತ್ತು ಗಂಟೆ ಸುಮಾರಿಗೆ ಸಂಚಾರ ಯತಾಸ್ಥಿತಿಗೆ ಬರಲು ಸಾಧ್ಯವಾಗಬಹುದು ಎಂದು ವಾಹನ ಸವಾರರೊಬ್ಬರು ಅಂದಾಜಿಸಿದರು.

ಸ್ಥಳಕ್ಕೆ ಆಗಮಿಸಿದ ಪೂರ್ವವಲಯ ಐಜಿಪಿ ಡಾ. ರವಿಕಾಂತೇಗೌಡ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, “ಬಸ್ಸಿನಲ್ಲಿ ನಾಲ್ಕು ಸುಟ್ಟ ದೇಹಗಳು ದೊರೆತಿದ್ದು, 25 ಜನ ಹೊರಗಡೆ ಪತ್ತೆಯಾಗಿದ್ದಾರೆ. ಮೂರು ಮಂದಿ ಕಾಣೆಯಾಗಿದ್ದಾರೆ. ಬಹುಶಃ ಅದೃಷ್ಟವಶಾತ್ ಬಸ್ ಇಳಿದು ಹೋಗಿರಬಹುದು, ಸುರಕ್ಷಿತವಾಗಿರಲಿ ಎನ್ನುವ ಆಶಾಭಾವನೆ ಇದೆ. ಎಫ್ಎಸ್ಎಲ್ ತಜ್ಞರು ಆಗಮಿಸಿದ್ದು, ತನಿಖೆ ಮುಂದುವರೆದಿದೆ” ಎಂದು ತಿಳಿಸಿದರು.
ಬಸ್ ಪ್ರಯಾಣಿಕರಲ್ಲಿ ಹೆಚ್ಚಿನವರು ಗೋಕರ್ಣದವರಾಗಿದ್ದು, ಬೆಂಗಳೂರಿನಿಂದ ಹೊರಟಿದ್ದ ಸೀಬರ್ಡ್ ಸ್ಲೀಪರ್ ಬಸ್, ಚಿತ್ರದುರ್ಗ, ಶಿವಮೊಗ್ಗ ಮತ್ತು ಹೊನ್ನಾವರ ಮಾರ್ಗವಾಗಿ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ತೆರಳುತ್ತಿತ್ತು. 32 ಆಸನ ಸಾಮರ್ಥ್ಯದ ಬಸ್ನಲ್ಲಿ 29 ಆಸನಗಳು ಕಾಯ್ದಿರಿಸಲಾಗಿದ್ದು, 25 ಪ್ರಯಾಣಿಕರು ಗೋಕರ್ಣಕ್ಕೆ, ಇಬ್ಬರು ಕುಮಟಾಕ್ಕೆ ಮತ್ತು ಇಬ್ಬರು ಶಿವಮೊಗ್ಗಕ್ಕೆ ಪ್ರಯಾಣಿಸುತ್ತಿದ್ದರು ಎಂದು ಮಾಹಿತಿ ತಿಳಿದು ಬಂದಿದೆ.
ತುಮಕೂರು ಜಿಲ್ಲೆಯ ಶಿರಾ ಬಳಿಯಿಂದಲೂ ಟ್ರಾಫಿಕ್ ದಟ್ಟಣೆ ಆರಂಭವಾಗಿದ್ದು, ಹೆದ್ದಾರಿಯ ಬಲ ಬದಿಯಲ್ಲಿ ವಾಹನಗಳು 30ಕಿಮೀ ಸಾಲುಗಟ್ಟಿ ನಿಂತಿವೆ. ಅಪಘಾತದ ತೀವ್ರತೆಯಿಂದಾಗಿ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಸ್ತಬ್ಧವಾಗಿದ್ದು, ಸ್ಥಳೀಯ ಪೊಲೀಸರು ಸಂಚಾರ ಮೊದಲಿನ ಸ್ಥಿತಿಗೆ ತರಲು ಹರಸಾಹಸ ಪಡುತ್ತಿದ್ದಾರೆ.
ಅಪಘಾತದ ಮಾಹಿತಿ ದೊರೆತ ತಕ್ಷಣ
ಘಟನಾ ಸ್ಥಳದಲ್ಲಿ ಪೋಲೀಸರು ಬೀಡು ಬಿಟ್ಟಿದ್ದು, ಚಿತ್ರದುರ್ಗ ಜಿಲ್ಲೆಯ ಎಸ್.ಪಿ. ರಂಜಿತ್ ಕುಮಾರ್ ಬಂಡಾರು, ಡಿವೈಎಸ್ಪಿ ಶಿವಕುಮಾರ್, ರೂರಲ್ ಇನ್ಸ್ಪೆಕ್ಟರ್ ಆನಂದ್, ಇನ್ಸ್ಪೆಕ್ಟರ್ ಗುಂಡಪ್ಪ, ಹಾಗೂ ತುಮಕೂರಿನ ಎಸ್.ಪಿ. ಅಶೋಕ್ ಸೇರಿ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬಂದು ರಕ್ಷಣಾ ಕಾರ್ಯಗಳನ್ನು ನಡೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಹಿಂದೂ ಧರ್ಮದಲ್ಲಿ ದಲಿತರ ಅವಮಾನ ಅಸ್ಪೃಶ್ಯತೆ ಕಾರಣಕ್ಕೆ ಮಾನ್ಯ ಕೊಲೆ: ವಕೀಲ ಬಿಎಂ ಹನುಮಂತಪ್ಪ
ಅಗ್ನಿಶಾಮಕ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸುವ ಕಾರ್ಯಾಚರಣೆ ನಡೆಸಿದರು. ಗಾಯಾಳುಗಳನ್ನು ಹಿರಿಯೂರು, ಶಿರಾಗೆ ಸಮೀಪದ ಆಸ್ಪತ್ರೆಗಳಿಗೆ ಹಾಗೂ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಘಟನೆಯಲ್ಲಿ ಸಾವನ್ನಪ್ಪಿದವರು ಬಹುಪಾಲು ಸುಟ್ಟು ಹೋಗಿದ್ದು, ಗುರುತುಗಳು ಡಿಎನ್ಎ ಪರೀಕ್ಷೆ ಮೂಲಕ ಇನ್ನಷ್ಟೇ ಪತ್ತೆಯಾಗಬೇಕಿದೆ.





