ಮೆದುಳು ಕ್ಯಾನ್ಸರ್ ಚಿಕಿತ್ಸೆಗೆ ಸೂಕ್ತ ಚಿಕಿತ್ಸೆಗೆ ಆಧಾರ್ ಕಾರ್ಡ್ ಅಡ್ಡಿಯಾದ ಹಿನ್ನೆಲೆ ಸರ್ಕಾರದ ಉಚಿತ ಚಿಕಿತ್ಸೆಗೆ ದಾಖಲೆಗಳಿಲ್ಲದೆ ಪರದಾಡುತ್ತಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾದ ಬೆನ್ನಲೇ ಜಿಲ್ಲಾಡಳಿತ ಮಗುವಿನ ಮನೆಗೆ ಭೇಟಿ ನೀಡಿ ಆಧಾರ್ ಕಾರ್ಡ್ ಸರಿಪಡಿಕೊಡುವ ಕೆಲಸಕ್ಕೆ ಮುಂದಾಗಿದ್ದು ಒಂದೆಡೆಯಾದರೆ, ಗುಬ್ಬಿ ಜೆಎಂಎಫ್ ಸಿ ಕೋರ್ಟ್ ನ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕಿರಣ್.ಎಸ್.ಪಿ. ಅವರು ಬಾಲಕಿ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಗುಬ್ಬಿ ಸಮೀಪದ ಜಿ. ಹರಿವೇಸಂದ್ರ ಗ್ರಾಮಕ್ಕೆ ಭೇಟಿ ನೀಡಿದ ನ್ಯಾಯಾಧೀಶರು ಮಗುವಿನ ತಂದೆ ಮಂಜುನಾಥ್ ಬಳಿ ಚರ್ಚಿಸಿ ನೀವು ಈ ಮೊದಲೇ ತಾಲ್ಲೂಕು ಕಾನೂನು ಸೇವಾ ಸಮಿತಿಗೆ ಬಂದು ದೂರು ನೀಡಿದ್ದರೆ ನಾವೇ ಖುದ್ದು ಸಮಸ್ಯೆ ಬಗೆಹರಿಸಿ ಕೊಡುವ ಕೆಲಸ ಮಾಡುತ್ತಿದ್ದೆವು. ಮುಂದೆ ಏನಾದರೂ ಸಮಸ್ಯೆ ಆದರೆ ನಮ್ಮ ಗಮನಕ್ಕೆ ತನ್ನಿ ಎಂದು ತಿಳಿಸಿದ ಅವರು ಸ್ಥಳದಲ್ಲಿಯೇ ಗುಬ್ಬಿ ತಹಸೀಲ್ದಾರ್ ಗೆ ಕರೆ ಮಾಡಿ ಮಾಹಿತಿ ತಿಳಿದುಕೊಂಡರು.
ನಂತರ ಮಗುವಿನ ಆರೋಗ್ಯ ವಿಚಾರಿಸಿದ ಅವರು ಕುಟುಂಬಕ್ಕೆ ಹೆದರಬೇಡಿ ನಿಮ್ಮ ಮಗು ಆದಷ್ಟು ಬೇಗ ಚೇತರಿಸಿ ಕೊಳ್ಳಲಿದೆ ಎಂದು ಭರವಸೆ ನೀಡಿದ ಅವರು ಕರ್ನಾಟಕ ಉಪ ಲೋಕಾಯುಕ್ತ ಬಿ.ವೀರಪ್ಪನವರು ನಿಮ್ಮನ್ನ ಕಚೇರಿಗೆ ಬರಲು ತಿಳಿಸಿದ್ದು ಹೋಗಿ ಬರುವಂತೆ ತಿಳಿಸಿ ಕ್ಯಾನ್ಸರ್ ಪೀಡಿತ ಮಗುವಿನ ಕುಟುಂಬಕ್ಕೆ ಧೈರ್ಯ ತುಂಬಿ ನಿರ್ಗಮಿಸಿದರು.





