ತೋಟದ ಸಾಲಿನಲ್ಲಿ ಮೇಕೆಗಳನ್ನು ಮೇಯಿಸುತ್ತಿದ್ದ ವೇಳೆ ಹಠಾತ್ ದಾಳಿ ಮಾಡಿದ ಚಿರತೆ ಎರಡು ಮೇಕೆಗಳನ್ನು ಬಲಿ ತೆಗೆದುಕೊಂಡಿದೆ. ಮೇಕೆ ಕಾಯುತ್ತಿದ್ದ ಕುರಿಗಾಯಿ ಮಹಿಳೆ ಮೇಲೆರಗುವ ಮುನ್ನ ಸ್ಥಳದಿಂದ ಓಡಿಹೋಗಿ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರದ ಘಟನೆ ತಾಲ್ಲೂಕಿನ ಕಸಬ ಹೋಬಳಿ ಕಿಟ್ಟದಕುಪ್ಪೆ ಗ್ರಾಮದಲ್ಲಿ ನಡೆದಿದೆ.
ಸ್ಥಳೀಯ ತಿಮ್ಮಕ್ಕ ಎಂಬ ಮಹಿಳೆ ತನ್ನ ಮೇಕೆ ಹಾಗೂ ಕುರಿಗಳನ್ನು ಮೇಯಿಸುವುದಕ್ಕಾಗಿ ತೋಟಕ್ಕೆ ಹೋದಾಗ ಹಾದ್ ಹಾಡುಹಗಲೇ ತೋಟದ ಅಂಚಿನ ಬೇಲಿ ಸಾಲಿನಿಂದ ಪ್ರತ್ಯಕ್ಷವಾದ ಚಿರತೆಯೊಂದು ಎರಡು ಮೇಕೆಯನ್ನು ಎಳೆದೊಯ್ದು ಅರೆಬರೆ ತಿಂದಿದೆ.
ಮಹಿಳೆಯು ತಕ್ಷಣ ಎಚ್ಚೆತ್ತು ಸ್ಥಳದಿಂದ ಓಡಿ ಹೋಗದಿದ್ದರೆ ಆಕೆಯ ಬಲಿ ಪಡೆಯುವ ಸಾಧ್ಯತೆ ಇತ್ತು. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಚಿರತೆಗಳ ಹಾವಳಿ ಕಿಟ್ಟದಕುಪ್ಪೆ ಭಾಗದಲ್ಲಿ ಮಿತಿಮೀರಿದ್ದು, ಈಗ ಗ್ರಾಮದೊಳಗೆ ಕಾಣಿಸಿಕೊಳ್ಳುತ್ತಿದೆ. ಕೂಡಲೇ ಅರಣ್ಯ ಇಲಾಖೆ ಚಿರತೆ ಹಾವಳಿಗೆ ಕಡಿವಾಣ ಹಾಕಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.





