ಸುರಿಗೇನಹಳ್ಳಿ ಬಳಿಯ ಸುಮಾರು 80 ಎಕರೆ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿ ಪರಿಣಾಮ ಮರಗಿಡಗಳು ಹೊತ್ತಿ ಉರಿದು ಅಲ್ಲಿ ನೆಲಸಿದ್ದ ಸಾವಿರಾರು ಪಕ್ಷಿ ಸಂಕುಲ ಕಂಗಾಲಾದ ಘಟನೆ ಪರಿಸರ ಪ್ರೇಮಿಗಳಲ್ಲಿ ಬೇಸರ ತಂದಿದೆ.
ಬೇಸಿಗೆ ಆರಂಭದ ಈ ಕಾಲದಲ್ಲಿ ಅರಣ್ಯಕ್ಕೆ ಬೆಂಕಿ ತಾಗದಂತೆ ಕಾಪಾಡಬೇಕಿದೆ. ಕಿಡಿಗೇಡಿಗಳ ಕೃತ್ಯ ಬೆಂಕಿಗೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಇದೇ ಅರಣ್ಯ ಪ್ರದೇಶಕ್ಕೆ ಅನೇಕ ಬಾರಿ ಬೆಂಕಿ ಕಾಣಿಸಿಕೊಂಡು ವನ್ಯ ಸಂಪತ್ತು ನಾಶವಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಸ್ಥಳೀಯರು ದೂರುತ್ತಿದ್ದಾರೆ. ಸುಮಾರು 80 ಎಕರೆ ಅರಣ್ಯ ಪ್ರದೇಶ ಹೊಂದಿರುವ ಸುರಿಗೇನಹಳ್ಳಿ ಗುಡ್ಡದಲ್ಲಿ ಇತಿಹಾಸ ಪ್ರಸಿದ್ಧ ಗುಡ್ಡದ ರಂಗನಾಥಸ್ವಾಮಿ ದೇವಾಲಯವಿದೆ. ಜೊತೆಗೆ ಸುಂದರವಾದ ಹಸಿರು ವನಸಿರಿ ದೇವಾಲಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿಸಿದೆ.
ಸಾವಿರಾರು ಪಕ್ಷಿ ಸಂಕುಲ ಬೀಡು ಬಿಟ್ಟ ಅರಣ್ಯದಲ್ಲಿ ಕಂಡ ಬೆಂಕಿ ಹಸಿ ಮರಗಿಡಗಳನ್ನು ಆಹುತಿ ಪಡೆದಿದೆ. ಗೂಡು ಕಟ್ಟಿ ತನ್ನ ಮರಿಗಳೊಟ್ಟಿಗೆ ಇದ್ದ ಹಕ್ಕಿಗಳ ಆಕ್ರಂದನ ಮುಗಿಲು ಮುಟ್ಟಿದ್ದು ಪರಿಸರ ಪ್ರೇಮಿಗಳಲ್ಲಿ ಬೇಸರ ಮೂಡಿಸಿದೆ.





