ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೀಡಿದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಿನ್ನಲೆ ಕರೆ ನೀಡಿದ್ದ ಗುಬ್ಬಿ ಬಂದ್ ಭಾಗಶಃ ಯಶಸ್ವಿ ಕಂಡಿದೆ.
ಪಟ್ಟಣದಲ್ಲಿ ಜಮಾಯಿಸಿದ ಕಾರ್ಮಿಕ ಸಂಘಟನೆ, ರೈತ ಸಂಘ, ಅಂಗನವಾಡಿ ನೌಕರರ ಸಂಘ, ಬಿಸಿಯೂಟ ತಯಾರಕ ಸಂಘ, ಪ್ರಾಂತ ರೈತ ಸಂಘ ಸೇರಿದಂತೆ ಅನೇಕ ಸಂಘಟನೆಗಳ ಕಾರ್ಯಕರ್ತರು ಬೆಳಿಗ್ಗೆಯಿಂದಲೇ ಪಟ್ಟಣದಲ್ಲಿ ಕರೆ ನೀಡಿ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚಲು ಮನವಿ ಮಾಡಿದ್ದರು. ಈ ಹಿನ್ನಲೆ ಭಾಗಶಃ ಬಂದ್ ಕಂಡು ಬಂದಿತು. ಶಾಲಾಕಾಲೇಜುಗಳು, ಸರ್ಕಾರಿ ಕಚೇರಿಗಳು, ಬ್ಯಾಂಕ್ ಗಳು, ಬಸ್ಸುಗಳು ಎಂದಿನಂತೆ ಕೆಲಸ ಕಾರ್ಯ ನಿರ್ವಿಹಿಸಿದವು.
ಪಟ್ಟಣದ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದಿಂದ ಎಲ್ಲಾ ಸಂಘಟನೆಯ ಕಾರ್ಯಕರ್ತರು ಮೆರವಣಿಗೆ ಮೂಲಕ ಗುಬ್ಬಿ ವೀರಣ್ಣ ಸರ್ಕಲ್ ಬಳಸಿ ಬಸ್ ನಿಲ್ದಾಣ ತಲುಪಿ ಮಾನವ ಸರಪಣಿ ರಚಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಾನಾಕಾರರನ್ನುದ್ದೇಶಿಸಿ ಸಿಐಟಿಯು ಜಿಲ್ಲಾ ಸಂಚಾಲಕ ಲೋಕೇಶ್ ಮಾತನಾಡಿ ಕಾರ್ಮಿಕ ವಿರೋಧಿ ನಾಲ್ಕು ಸಂಹಿತೆಯನ್ನು ರದ್ದು ಮಾಡಲು ಕೇಂದ್ರ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಎಲ್ಲಾ ಸಂಹಿತೆ, ಕಾನೂನು ಕಾಯಿದೆ ಕಾರ್ಪೊರೇಟರ್ ಕಂಪೆನಿಗಳ ಪರವಾಗಿದೆ. ಬಂಡವಾಳಶಾಹಿಯ ಪರ ಕೇಂದ್ರ ಸರ್ಕಾರ ನಿಂತಿದೆ. ಅವರಿಂದ ಆಗುವ ಕಾರ್ಮಿಕ ಶೋಷಣೆ ಬಗ್ಗೆ ಕಿಂಚಿತ್ತೂ ಕಾಳಜಿ ತೋರುತ್ತಿಲ್ಲ ಎಂದು ಕಿಡಿಕಾರಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ ರೈತ ವಿರೋಧಿ ಎನಿಸಿದ ಕೇಂದ್ರ ಸರ್ಕಾರ ರೈತ ಪರ ಯಾವ ನಿಲುವು ತಾಳಿಲ್ಲ. ಕೇವಲ ಬಂಡವಾಳಗಾರರ ಪರ ಕಾನೂನು ಕಾಯಿದೆ ಮಾಡುತ್ತಾ ರೈತರನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಕೃಷಿ ಭೂಮಿ ಕೈಗಾರಿಕಾ ವಲಯ ಆಗುತ್ತಿದೆ. ರೈತ ಹಾಗೂ ಕಾರ್ಮಿಕ ವಿರೋಧಿ ಕಾಯಿದೆ ಜಾರಿ ಮಾಡದಂತೆ ವರ್ಷ ಪೂರ್ತಿ ಹೋರಾಟ ಮಾಡಿದ ನಂತರ ರದ್ದು ಮಾಡುವ ಮಾತು ಹೇಳಿ ಈಗ ದಿನದೂಡುತ್ತ ಕಾಲಹರಣ ಮಾಡುತ್ತಿದೆ ಎಂದು ದೂರಿದ ಅವರು ಜನ ವಿರೋಧಿ ವಿದ್ಯುತ್ ಕಾಯಿದೆ ಜಾರಿಗೆ ರೈತ ಸಂಘ ಕೂಡಾ ವಿರೋಧಿಸುತ್ತದೆ. ಕೃಷಿ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಕೆ ಮಾಡುವ ಮೂಲಕ ಕೃಷಿ ಕ್ಷೇತ್ರವನ್ನು ಮಾಯಾ ಮಾಡುವ ಹುನ್ನಾರಕ್ಕೆ ನಮ್ಮ ಧಿಕ್ಕಾರವಿದೆ ಎಂದರು.

ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಸರೋಜಾ ಮಾತನಾಡಿ ಅಂಗನವಾಡಿ ನೌಕರರನ್ನು ಸರ್ಕಾರದ ಎಲ್ಲಾ ಕೆಲಸಕ್ಕೆ ಬಳಸಲಾಗುತ್ತಿದೆ. ಕನಿಷ್ಠ ವೇತನ ನೀಡಿ ಚುನಾವಣಾ ಕೆಲಸವನ್ನು ವರ್ಷವಿಡೀ ಮಾಡಿಸಲಾಗುತ್ತಿದೆ. ಬಿಎಲ್ಓ ಕೆಲಸ ಕಷ್ಟಕರವಾಗಿದೆ. ಹಳ್ಳಿಗಾಡಿನಲ್ಲಿ ನೆಟ್ ವರ್ಕ್ ಇಲ್ಲದೆ ಪರದಾಡಿದ್ದೇವೆ. ಈ ಜೊತೆಗೆ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಪೂರ್ವ ಶಿಕ್ಷಣ ನಡೆಸುತ್ತಿರುವುದು ಸರಿಯಲ್ಲ. ಅಂಗನವಾಡಿ ಕೇಂದ್ರದಲ್ಲಿ ಎಲ್ ಕೆಜಿ ಆರಂಭಿಸಿ ಹಾಗೆಯೇ ಮೊಟ್ಟೆ ಖರೀದಿಗೆ ನೀಡುವ ಹಣ ಕಡಿಮೆಯಾಗಿದೆ. ನಮ್ಮ ಕೈಯಿಂದ ಒಂದು ರೂಪಾಯಿ ಹೆಚ್ಚುವರಿ ನೀಡುತ್ತಿದ್ದೇವೆ. ಮೊಟ್ಟೆ ಖರೀದಿಸಿದ್ದ ಹಣ ಕೂಡಾ ಆರು ತಿಂಗಳ ನಂತರ ಬರುತ್ತಿದೆ ಎಂದು ಸಮಸ್ಯೆಗಳ ಪಟ್ಟಿ ಓದಿದರು.
ಇದೇ ಸಂದರ್ಭದಲ್ಲಿ ಬೆಸ್ಕಾಂ ಎಇಇ ಜಲದೇಶ್ ಅವರಿಗೆ ಮನವಿ ಸಲ್ಲಿಸಿ ಬೇಸಿಗೆಯಲ್ಲಿ ಕರೆಂಟ್ ಸಮಸ್ಯೆ ಬಗ್ಗೆ ಚರ್ಚೆ ನಡೆಸಿದರು. ತಾಂತ್ರಿಕ ಸಮಸ್ಯೆ ಬಗ್ಗೆ ಅಧಿಕಾರಿಗಳು ಸಮಜಾಯಿಷಿ ನೀಡುತ್ತಿದ್ದಾಗ ರೈತರು ಆಕ್ರೋಶ ಹೊರ ಹಾಕಿ ಮೂರು ತಿಂಗಳು ವಿದ್ಯುತ್ ಸಮಸ್ಯೆ ಮಾಡುತ್ತೀರಿ. ನಮ್ಮ ಬೆಳೆಗಳು ಒಣಗಿ ನಿಲ್ಲುತ್ತವೆ. ಹಳೇ ಕಂಬಗಳು ತಂತಿಗಳನ್ನು ಬದಲಿಸಿ ಎಂದು ರೈತ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್ ಕ್ಲಾಸ್ ತೆಗೆದುಕೊಂಡರು.
ಸ್ಥಳಕ್ಕೆ ಆಗಮಿಸಿದ ಗ್ರೇಡ್ 2 ತಹಶೀಲ್ದಾರ್ ಶಶಿಕಲಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ರೈತಸಂಘದ ತಾಲ್ಲೂಕು ಅಧ್ಯಕ್ಷ ವೆಂಕಟೇಗೌಡ, ಮಹದೇವಣ್ಣ, ಸತ್ತಿಗಪ್ಪ, ನರಸಿಂಹಮೂರ್ತಿ, ದೇವೇಗೌಡ, ಕನ್ನಿಗಪ್ಪ, ಗಂಗರೇವಣ್ಣ, ಕುಮಾರಸ್ವಾಮಿ, ಬಸವರಾಜು, ಯತೀಶ್, ಚನ್ನಬಸವಣ್ಣ, ಪ್ರಾಂತ ರೈತ ಸಂಘದ ಅಧ್ಯಕ್ಷ ದೊಡ್ಡನಂಜಯ್ಯ ಸೇರಿದಂತೆ ಬಿಸಿಯೂಟ ತಯಾರಕ ಸಂಘ, ಮುನಿಸಿಪಲ್ ಕಾರ್ಮಿಕರ ಸಂಘ, ಅಂಗನವಾಡಿ ನೌಕರರ ಸಂಘ, ರೈತಸಂಘದ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ನೆರೆದಿದ್ದರು.





