ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿ ಬೆಳೆಸಬೇಕಾದ ರಾಜ್ಯ ಸರ್ಕಾರ ಅಧಿಕಾರಶಾಹಿಗಳ ಜೊತೆ ಶಾಮೀಲಾಗಿ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ಆಡಳಿತಶಾಹಿಗಳಿಗೆ ಅಧಿಕಾರ ನೀಡಲು ಮುಂದಾಗಿರುವುದು ಖಂಡನೀಯ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಗುಬ್ಬಿ ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗ್ರಾಮ ಪಂಚಾಯಿತಿಗಳ ಚುನಾವಣೆಯನ್ನು ಕೊನೆಗೂ ಮುಂದೂಡಿರುವ ರಾಜ್ಯ ಸರ್ಕಾರ ಪಂಚಾಯತಿ ಕಾಯಿದೆ 8 ನೇ ಪ್ರಕರಣದ 2ಬಿ2 ಬಳಸಿ ಆಡಳಿತ ಅಧಿಕಾರಿಗಳ ನೇಮಕ ಮಾಡಿ ಆಡಳಿತಶಾಹಿಗಳಿಗೆ ಅಧಿಕಾರಿ ನೀಡಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯ ಅದೇ 8 ನೇ ಪ್ರಕರಣದಲ್ಲಿನ ಉಪ ಪ್ರಕರಣ 1 ರಲ್ಲಿ ಜನಾಧಿಕಾರಕ್ಕೆ ಆದ್ಯತೆ ನೀಡಿ ಈಗಿರುವ ಚುನಾಯಿತ ಪ್ರತಿನಿಧಿಗಳ ಆಡಳಿತವನ್ನೇ ಮುಂದುವರೆಸಲು ಅವಕಾಶ ಇದ್ದರೂ ಕಾಯಿದೆ ದುರುಪಯೋಗ ಪಡಿಸಿಕೊಳ್ಳುವುದರ ಜೊತೆಗೆ ಈಗಿರುವ ಆಡಳಿತವನ್ನು ಮುಂದುವರಿಸಲು ಕಾಯ್ದೆಯಲ್ಲಿರುವ ಅವಕಾಶವನ್ನು ಕೈ ಬಿಟ್ಟು ಅಧಿಕಾರ ಶಾಹಿಗಳ ಪರ ಸರ್ಕಾರ ನಿಂತಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.
ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಉಳಿಸಲು ನಮ್ಮ ಮಹಾ ಒಕ್ಕೂಟ ಮುಂದಾಗಿದ್ದು ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ಉಪಮುಖ್ಯಮಂತ್ರಿಗಳಿಗೆ , ಕಾನೂನು ಸಚಿವರು ಹಾಗೂ ಪಂಚಾಯತ್ ರಾಜ್ ಸಚಿವರಿಗೆ ಮನವಿ ಸಲ್ಲಿಸಿದ್ದು ಕಾಯ್ದೆಯಲ್ಲಿನ ಅವಕಾಶವನ್ನು ಬಳಸಿ ಮುಂದಿನ 6 ತಿಂಗಳು ಯಥಾಸ್ಥಿತಿ ಮುಂದುವರೆಯುವ ಜೊತೆಗೆ ಚುನಾವಣೆ ನಡೆಸಲು ಮುಂದಾಗಬೇಕು ಎಂದು ಮನವಿ ಮಾಡಿದ್ದೇವೆ. ಈ ಹಕ್ಕನ್ನು ಅಗ್ರಹಿಸಿ ಇದೇ ತಿಂಗಳ 27 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಜನಾಧಿಕಾರ ಸಮಾವೇಶ ಮಾಡಲು ನಿರ್ಧಾರ ಮಾಡಲಾಗಿದೆ ಎಂದರು.
ಇನ್ನು ಈ ಸಮಾವೇಶಕ್ಕೆ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳ ಸದಸ್ಯರು ಸೇರಿದಂತೆ ಅಧ್ಯಕ್ಷರುಗಳು ಒಟ್ಟಾಗಿ ಸಮಾವೇಶದಲ್ಲಿ ಪಾಲ್ಗೊಂಡು ಒಗಟ್ಟು ಪ್ರದರ್ಶಿಸಿ ಪ್ರಜಾಪ್ರಭುತ್ವದ ಉಳಿವಿಗಾಗಿ ಕೈ ಜೋಡಿಸಬೇಕಾಗಿದೆ. ನಮ್ಮ ಹಕ್ಕು ಉಳಿಸಿಕೊಳ್ಳಲು ಸರ್ಕಾರ ಗಮನ ಸೆಳೆಯುವ ಹೋರಾಟ ದಿಟ್ಟತನವಾಗಿ ನಡೆಸಲು ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರು ಭಾಗವಹಿಸಬೇಕು ಎಂದು ಮನವಿ ಮಾಡಿದರು.





