ತೋಟಗಳಲ್ಲಿನ ಪಂಪ್ ಸೆಟ್ ಗಳಿಗೆ ಅಳವಡಿಸಿದ್ದ ಕೇಬಲ್ ವೈರ್ ಗಳನ್ನು ಒಂದು ವರ್ಷದಲ್ಲಿ ಮೂರ್ನಾಲ್ಕು ಬಾರಿ ಕದ್ದು ಪರಾರಿಯಾಗಿದ್ದ ಕಳ್ಳರ ಗುಂಪು ಮತ್ತೆ ಅಂತಹದ್ದೇ ಕೃತ್ಯಕ್ಕೆ ಮುಂದಾಗಿ ಕಳೆದ ಗುರುವಾರ ರಾತ್ರಿ ಮತ್ತೊಮ್ಮೆ ತೋಟಗಳ 20 ಕಡೆಗಳಲ್ಲಿ ಪಂಪ್ ಸೆಟ್ ಕೇಬಲ್ ವೈರ್ ಗಳನ್ನು ಕಟ್ ಮಾಡಿ ಆತಂಕ ಮೂಡಿಸಿದ ಘಟನೆ ತಾಲ್ಲೂಕಿನ ನಿಟ್ಟೂರು ಹೋಬಳಿ ಎನ್.ನಂದಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಎನ್.ನಂದಿಹಳ್ಳಿ ಗ್ರಾಮದಲ್ಲಿ ನಡೆದಿರುವ ಈ ಘಟನೆ ಸ್ಥಳೀಯ ರೈತರಲ್ಲಿ ಅಚ್ಚರಿ ಹಾಗೂ ಆತಂಕ ಒಟ್ಟಿಗೆ ಸೃಷ್ಟಿಯಾಗಿದೆ. ಒಮ್ಮೆ ಕಳ್ಳತನ ಮಾಡಿದ ಕಳ್ಳರು ಅಷ್ಟಕ್ಕೇ ಸುಮ್ಮನಾಗದೆ ರುಚಿ ಕಂಡವರಂತೆ ಮತ್ತೊಮ್ಮೆ ಅದೇ ತೋಟಗಳ ಪಂಪ್ ಸೆಟ್ ಗಳಿಗೆ ಅಳವಡಿಸಿದ್ದ ಕೇಬಲ್ ವೈರ್ ಗಳನ್ನು ರಾತ್ರೋರಾತ್ರಿ ಕಳ್ಳತನ ಮಾಡಿ ಪರಾರಿಯಾಗಿರುವುದು ಗಾಬರಿ ಉಂಟು ಮಾಡಿದೆ.
ಒಂದು ವರ್ಷದ ಅವಧಿಯಲ್ಲಿ ಅನೇಕ ಬಾರಿ ಕೇಬಲ್ ವೈರ್ ಕಟ್ ಮಾಡಿ ಕಳ್ಳತನ ಮಾಡಿದ್ದರ ಬಗ್ಗೆ ಗುಬ್ಬಿ ಠಾಣೆಗೆ ದೂರು ನೀಡಿದ್ದರೂ ಕೂಡ ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ. ಕಳ್ಳರ ಕಾಟಕ್ಕೆ ಬೇಸತ್ತಿರುವ ನಾವುಗಳೇ ಖುದ್ದು ಕಾವಲು ಕಾಯುತ್ತೇವೆ ಎಂದು ಎನ್.ನಂದಿಹಳ್ಳಿ ರೈತರು ಬೇಸರ ವ್ಯಕ್ತಪಡಿಸಿದ್ದಾರೆ.





