ಗ್ರಾಮ ಪಂಚಾಯಿತಿ ಹಂತದಲ್ಲಿ ಮಕ್ಕಳಿಗಾಗಿ ವಿಶೇಷ ಗ್ರಾಮಸಭೆ ಹಮ್ಮಿಕೊಂಡಿರುವುದು ಪ್ರಜಾಸತ್ತಾತ್ಮಕ ಸೌಲಭ್ಯಗಳನ್ನು, ಹಕ್ಕುಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗಿದೆ ಎಂದು ಎಂ.ಎಚ್.ಪಟ್ಟಣ ಗ್ರಾಪಂ ಪಿಡಿಒ ಕೆ.ಎಂ.ಶೇಖರ್ ತಿಳಿಸಿದರು.
ತಾಲ್ಲೂಕಿನ ಕಸಬ ಹೋಬಳಿ ಎಂ.ಎಚ್.ಪಟ್ಟಣ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಸರ್ ಸಂಸ್ಥೆ, ಗ್ರಾಮ ವಿಕಾಸ,ಅಮ್ಮನ ಮಡಿಲು ಪ್ರಕೃತಿ ಸಂಸ್ಥೆ, ಅನಲೆ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ವಿಶೇಷ ಗ್ರಾಮ ಸಭೆ ಉದ್ದೇಶಿಸಿ ಮಾತನಾಡಿ ಗ್ರಾಮಸಭೆ ಮಕ್ಕಳ ಹಕ್ಕು ಪ್ರತಿಪಾದಿಸುವ ಪ್ರಜಾಪ್ರಭುತ್ವ ತಿಳುವಳಿಕೆಗೆ ನೆರವಾಗಿದೆ ಎಂದರು.
ಶಿಕ್ಷಕರು ವಿದ್ಯಾರ್ಥಿನಿಯರ ಬಗ್ಗೆ ಕಾಳಜಿ ಹೊಂದಿರುವಂತೆ ಊರಿನ ಪ್ರಮುಖರು, ಜನಪ್ರತಿನಿಧಿಗಳು, ಪೋಷಕರು ಮತ್ತು ಸಮುದಾಯ ಮಕ್ಕಳ ಹಕ್ಕು ಚ್ಯುತಿ, ಮಕ್ಕಳ ಮೇಲಿನ ದೌರ್ಜನ್ಯ, ಮಾನವ ಕಳ್ಳ ಸಾಗಾಣಿಕೆ ಪ್ರಕರಣಗಳು ಹೀಗೆ ಅನೇಕ ಸಮಾಜಘಾತುಕ ಕೃತ್ಯಗಳ ಬಗ್ಗೆ ಗ್ರಾಮೀಣ ಭಾಗದಲ್ಲೂ ಎಚ್ಚರಿಕೆ ವಹಿಸುವ ಅವಶ್ಯವಿದೆ. ಜೊತೆಗೆ ಮನೆಯಲ್ಲಿ ಪಾಲಕರು ತಮ್ಮ ಮಕ್ಕಳ ಮೇಲೆ ನಿಗಾ ವಹಿಸಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಹಾಗೂ ವಕೀಲ ಕೆ.ಎಸ್.ರಾಘವೇಂದ್ರ ಮಾತನಾಡಿ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಕ್ಕಳ ಹಕ್ಕುಗಳಲ್ಲಿ ಒಂದಾದ ಭಾಗವಹಿಸುವಿಕೆಯ ಹಕ್ಕನ್ನು ಪ್ರೋತ್ಸಾಹಿಸುವುದಕ್ಕಾಗಿ ಹಾಗೂ ಮಕ್ಕಳ ಮೂಲ ಸೌಕರ್ಯ, ರಕ್ಷಣೆಯ ಕುರಿತ ವಿಚಾರಗಳನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜತೆ ಸೇರಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಸಲುವಾಗಿ ಮಕ್ಕಳ ಹಕ್ಕುಗಳ ಸಭೆ ನಡೆಸಲಾಗುತ್ತಿದೆ. ಮಕ್ಕಳಿಗಾಗಿಯೇ ಸರ್ಕಾರದಿಂದ ವಿಶೇಷ ಸೌಲಭ್ಯಗಳಿದ್ದು ಅವುಗಳನ್ನು ಬಳಸಿಕೊಳ್ಳಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಮೋಹನ್ ಕುಮಾರ್ ಮಾತನಾಡಿ ಪ್ರೌಢಶಾಲೆಯಲ್ಲಿ ಹದಿಹರೆಯದ ಮಕ್ಕಳಿದ್ದು, ಶಿಕ್ಷಕರು ಅವರಿಗೆ ಪೋಕ್ಸೊ ಬಗ್ಗೆ ತಿಳಿಸಬೇಕು. ಮೊಬೈಲ್ ಗೀಳಿನಿಂದ ವಿದ್ಯಾರ್ಥಿಗಳ ವ್ಯಾಸಂಗ ಕುಂಠಿತವಾಗುತ್ತಿದೆ. ದೃಶ್ಯ ಮಾಧ್ಯಮಗಳು ದೃಶ್ಯಗಳನ್ನು ವೈಭವೀಕರಿಸದಂತೆ ತಡೆಯಲು ಕಟ್ಟುನಿಟ್ಟಿನ ಕಾನೂನು ಬರಬೇಕಿದೆ. ಈ ಜೊತೆಗೆ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಕ್ಕಳು ತಮ್ಮ ಅವಶ್ಯಕತೆ ಹಾಗೂ ಸಮಸ್ಯೆ ಬಗ್ಗೆ ಲಿಖಿತ ಅರ್ಜಿ ಸಲ್ಲಿಸಿ ಚರ್ಚಿಸಿದರು.
ವೇದಿಕೆಯಲ್ಲಿ ಗ್ರಾಪಂ ಸದಸ್ಯರಾದ ಪದ್ಮ, ರಾಮಕ್ಕ, ಸಾವಯವ ಕೃಷಿಕ ಮಹೇಶ್, ಸುಧಾ ಸೇರಿದಂತೆ ಶಾಲಾ ಮಕ್ಕಳು, ಶಿಕ್ಷಕರು, ಗ್ರಾಪಂ ಎಲ್ಲಾ ಸಿಬ್ಬಂದಿಗಳು ಭಾಗವಹಿಸಿದ್ದರು.





