ಗುಣಮಟ್ಟ ಶಿಕ್ಷಣ ಇಲ್ಲದ ದೇಶಗಳು ಅಭಿವೃದ್ಧಿಯಲ್ಲಿ ಶೂನ್ಯ ಸಂಪಾದಿಸಿ ಇಂದಿಗೂ ಬಡ ರಾಷ್ಟ್ರಗಳ ಪಟ್ಟಿಯಲ್ಲಿವೆ. ಶಿಕ್ಷಣದ ಮೌಲ್ಯ ಕುಸಿಯದಂತೆ ಶಿಕ್ಷಣವನ್ನು ಸಮಾಜದ ತಾಯಿ ಬೇರು ಎಂಬ ಅಂಶ ಅರಿತು ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಪದವಿ ಪೂರ್ವ ಶಿಕ್ಷಣ ಉಪ ನಿರ್ದೇಶಕ ಡಾ. ಬಾಲಗುರುಮೂರ್ತಿ ತಿಳಿಸಿದರು.
ಪಟ್ಟಣದ ಎಸ್.ಆರ್.ಎ ಕಾಲೇಜಿನಲ್ಲಿ ಆಯೋಜಿಸಿದ್ದ ಕಾಲೇಜು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿ ಊಟ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಇಂಗ್ಲೀಷ್ ಬಳಕೆ ಪ್ರತಿಷ್ಠೆ ಎಂಬ ಮನಸ್ಥಿತಿಯಲ್ಲಿ ವಿಜ್ಞಾನ ಐಚ್ಛಿಕ ವಿಷಯ ಮಾತ್ರ ದೊಡ್ಡದು ಎನ್ನುವ ಭ್ರಮೆಯಲ್ಲಿದ್ದಾರೆ. ಇಂಗ್ಲೀಷ್ ಪ್ರತಿಷ್ಠೆಯನ್ನು ಬಂಡವಾಳ ಮಾಡಿಕೊಂಡ ಖಾಸಗಿ ಶಾಲಾಕಾಲೇಜು ಮಾನ್ಯತೆ ಪಡೆದುಕೊಳ್ಳುತ್ತಿದೆ ಎಂದು ವಿಷಾದಿಸಿದರು.
ಸಮಾಜದಲ್ಲಿ ಎಲ್ಲಾ ಚಳವಳಿ ಶಕ್ತಿಹೀನವಾಗಿ ಇಡೀ ವ್ಯವಸ್ಥೆ ಹದಗೆಟ್ಟಿದೆ. ಒಂದು ಕಾಲದಲ್ಲಿ ಅನುದಾನಿತ ಶಾಲಾ ಕಾಲೇಜು ಸರ್ಕಾರಿ ಶಾಲೆಯ ಒಂದು ಭಾಗವಾಗಿ ಒಳ್ಳೆಯ ದಾಖಲಾತಿ ಹೊಂದಿತ್ತು. ದಿನ ಕಳೆದಂತೆ ಫಲಿತಾಂಶ ಇಳಿಮುಖವಾಗಿದೆ. ಜಿಲ್ಲೆಯ ಫಲಿತಾಂಶದಲ್ಲಿ ಸರ್ಕಾರಿ ಕಾಲೇಜು ಶೇಕಡಾ 58 ಖಾಸಗಿ ಕಾಲೇಜು ಶೇಕಡಾ 68 ಗಳಿಸಿದೆ. ಮರಳಿ ಉತ್ತಮ ಫಲಿತಾಂಶ ತರುವ ಉದ್ದೇಶದಿಂದ ಪರೀಕ್ಷಾ ಮಿತ್ರ ಕಾರ್ಯಾಗಾರವನ್ನು ಎಂಟು ವಾರ ನಡೆಸಿ ವಿದ್ಯಾರ್ಥಿಗಳಲ್ಲಿ ಶಿಕ್ಷಣ ಮಹತ್ವ ಪಾಠ ಪ್ರವಚನ ಬಗ್ಗೆ ತಿಳಿಸಲಾಗಿದೆ ಎಂದ ಅವರು ಶಿಕ್ಷಣ ಖಾಸಗೀಕರಣ ಆದಂತೆ ವ್ಯಾಪಾರೀಕರಣ ಕೂಡಾ ಆಗಿದೆ. ಈ ನಿಟ್ಟಿನಲ್ಲಿ ಅನುದಾನಿತ ಕಾಲೇಜು ಮೇಲೆತ್ತುವ ಕೆಲಸ ನಡೆಸಿದ್ದೇವೆ. ಈ ಪೈಕಿ ವಿದ್ಯಾರ್ಥಿಗಳನ್ನು ಸಂಜೆಯವರೆಗೆ ಉಳಿಸಿಕೊಳ್ಳಲು ಮಧ್ಯಾಹ್ನದ ಬಿಸಿಯೂಟ ಕೂಡಾ ಒಂದು ಮಹತ್ವ ಅಂಶವಾಗಿದೆ. ಶ್ರೀಮತಿ ರಮಾಬಾಯಿ ಅಂಬೇಡ್ಕರ್ ಕಾಲೇಜಿನ ಪ್ರಾಚಾರ್ಯ ಸತೀಶ್ ಮತ್ತು ತಂಡ ನಡೆಸಿರುವುದು ಸಾರ್ಥಕ ಕೆಲಸ ಎಂದರು.
ಜ್ಞಾನಜ್ಯೋತಿ ರಾಷ್ಟ್ರೀಯ ವಿದ್ಯಾಲಯ ಶಿಕ್ಷಕ ಸಿ.ವಿ.ಎನ್.ಮೂರ್ತಿ ಮಾತನಾಡಿ ಸುಂದರ ವಾತಾವರಣದಲ್ಲಿ ಸಮಾಜಮುಖಿಯಾಗಿ ಬೆಳೆಯುವುದೇ ಶಿಕ್ಷಣ. ಶಾಲೆ, ಶಿಕ್ಷಕ ಹಾಗೂ ಪೋಷಕ ಮೂವರ ನಡುವಿನ ವ್ಯವಸ್ಥೆ ಶಿಕ್ಷಣಕ್ಕೆ ಅಡಿಪಾಯ ಹಾಕುತ್ತದೆ. ಸದ್ಭಾವ, ಸಂಸ್ಕಾರ, ಸಂವೇದನೆ ಶಿಕ್ಷಣದ ಪ್ರಮುಖ ಅಂಶ. ಈ ಅಂಶಗಳನ್ನು ಸಮಾಜಕ್ಕೆ ಸಮರ್ಪಣೆ ಮಾಡುವುದು ಕೂಡ ಶಿಕ್ಷಣದ ಮತ್ತೊಂದು ಅಂಶ ಎಂದ ಅವರು ಶಿಕ್ಷಕ ವೃತ್ತಿ ಗುರುತರ ಸ್ಥಾನ. ಸದಾಕಾಲ ಅಧ್ಯಯನ ಅಧ್ಯಾಪನ ನಡೆಸುವ ಶಿಕ್ಷಕ ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು. ಶಾಲೆಗೆ ಮೀಸಲಿದ್ದ ಬಿಸಿಯೂಟ ಕಾಲೇಜು ವಿದ್ಯಾರ್ಥಿಗಳಿಗೆ ವ್ಯವಸ್ಥೆ ಮಾಡಿದ್ದು ಸಾರ್ಥಕ ಚಿಂತನೆ ಎಂದರು.
ಅಬಕಾರಿ ನಿರೀಕ್ಷಕ ಶೇಖ್ ಇಮ್ರಾನ್ ಮಾತನಾಡಿ ಅಪೌಷ್ಟಿಕತೆ ಹೋಗಲಾಡಿಸುವ ಚಿಂತನೆಯಲ್ಲಿ ಬಿಸಿಯೂಟ ಯೋಜನೆ ಜಾರಿಗೆ ಬಂತು. ಕಾಲೇಜು ವಿದ್ಯಾರ್ಥಿಗಳಿಗೆ ಬಿಸಿಯೂಟ ಅದರಲ್ಲೂ ಖಾಸಗಿ ಕಾಲೇಜು ಯೋಚಿಸಿದ್ದು ಮೆಚ್ಚುವಂತಹದ್ದು. ಪ್ರಾಂಶುಪಾಲ ಸತೀಶ್ ಮತ್ತು ತಂಡ ಪೋಷಕರ ಜಾಗದಲ್ಲಿ ನಿಂತು ಆಲೋಚಿಸಿದ್ದು ಹಸಿದವರ ಬಗ್ಗೆ ಹಸಿದವರೇ ಬಲ್ಲರು ಎಂಬಂತಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷ ಡಿ.ಎಸ್.ಕುಮಾರಸ್ವಾಮಿ ಮಾತನಾಡಿ ಸಮಾಜಸೇವೆ ಮೊದಲ ಪಾಠವಾಗಿ ಗುರುಹಿರಿಯರಿಗೆ ಗೌರವ ನೀಡುವುದನ್ನು ಮಕ್ಕಳು ಕಲಿಯಬೇಕು. ಮೊಬೈಲ್ ಬಳಕೆ ಇಂದಿನ ಯುವಕರನ್ನು ಹಾಳು ಮಾಡುತ್ತಿದೆ. ಅದರಲ್ಲಿ ಆಸಕ್ತಿ ಓದಿಗೆ ಇದ್ದಿದ್ದರೆ ನಮ್ಮ ಸಮಾಜ ಸುಶಿಕ್ಷಿತ ದೇಶವಾಗಿ ಕಾಣುತ್ತಿತ್ತು. ಶಿಕ್ಷಣ ಪಡೆಯುವ ಛಲ ಮನಸ್ಸಿನಲ್ಲಿ ಬೆಳೆಸಿಕೊಳ್ಳಬೇಕು. ಬೆಳಿಗ್ಗೆ ತಿಂಡಿ ತಿಂದು ಬರುವ ಗ್ರಾಮೀಣ ಮಕ್ಕಳು ಮಧ್ಯಾಹ್ನದ ಹಸಿವಿಗೆ ಕಾಲೇಜು ಅರ್ಧಕ್ಕೆ ಮೊಟಕು ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಈ ಸಮಯ ಹಾಳು ಮಾಡಿಕೊಳ್ಳುವ ವಿದ್ಯಾರ್ಥಿಗಳನ್ನು ಹಿಡಿದು ಇಟ್ಟುಕೊಳ್ಳುವ ನಿಟ್ಟಿನಲ್ಲಿ ಮಧ್ಯಾಹ್ನ ಬಿಸಿಯೂಟ ಸಾರ್ಥಕ ಸೇವೆ ಎನಿಸಿದೆ. ಈ ಕಾರ್ಯಕ್ಕೆ ಲಯನ್ಸ್ ಕ್ಲಬ್ ಕೂಡಾ ಒಂದು ದಿನದ ಸೇವೆ ನೀಡಲಿದೆ. ನಾನು ವೈಯಕ್ತಿಕವಾಗಿ ಎರಡು ದಿನದ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಪಪಂ ಮಾಜಿ ಸದಸ್ಯ ಜಿ.ಆರ್.ಶಿವಕುಮಾರ್, ಕ್ರೀಡಾ ಪ್ರೋತ್ಸಾಹಕ ಸಿ.ಆರ್.ಶಂಕರ್ ಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಜಯಂತಿ ಮಾತನಾಡಿದರು.
ವೇದಿಕೆಯಲ್ಲಿ ನಿವೃತ್ತ ಶಿಕ್ಷಕ ಅಶ್ವಥ್, ಹೊದಲೂರು ಶ್ರೀ ಸಿದ್ಧರಾಮೇಶ್ವರ ವಿದ್ಯಾಸಂಸ್ಥೆ ಕಾರ್ಯದರ್ಶಿ ನಂದೀಶ್, ಅನುದಾನಿತ ಕಾಲೇಜುಗಳ ಅಸೋಸಿಯೇಷನ್ ಪರಮೇಶ್, ಮಣ್ಣಮ್ಮ ದೇವಾಲಯದ ಪ್ರಧಾನ ಅರ್ಚಕ ರಾಜಣ್ಣ, ನಿವೃತ್ತ ಉಪನ್ಯಾಸಕ ಮಹದೇವಯ್ಯ, ಪ್ರಾಂಶುಪಾಲ ಸಿ.ಜಿ.ಸತೀಶ್, ಉಪನ್ಯಾಸಕರಾದ ಮಂಜಣ್ಣ, ಮಮತಾ, ಮಂಜುನಾಥ್, ಶಿವಲಿಂಗಯ್ಯ, ನಾಗರಾಜು, ಶಿವನಂಜಯ್ಯ, ಮೋಹನಕುಮಾರಿ, ದೇವರಾಜು, ಜಯಮ್ಮ, ಲಯನ್ಸ್ ಸಂಸ್ಥೆಯ ಅಶೋಕ್ ಕುಮಾರ್, ಸಿದ್ದಪ್ಪ, ಕೀರ್ತಿರಾಜ್, ವಿವೇಕಾನಂದಾಚಾರ್ಯ ಇನ್ನಿತರರು ಇದ್ದರು.





