ಎರಡು ಶತಮಾನದ ಹಿಂದೆ ನಡೆದ ಕೊರೆಂಗವ್ ಯುದ್ಧ ಕೇವಲ ಸೈನಿಕರ ವಿಜಯದ ಸಂಕೇತವಾಗಿರಲಿಲ್ಲ. ಶತಮಾನದ ಅನ್ಯಾಯ ಮತ್ತು ಅವಮಾನಗಳ ವಿರುದ್ಧ ಹೋರಾಡಿದ ಸಮಾನತೆ ಮತ್ತು ಸ್ವಾಭಿಮಾನದ ಪ್ರತಿಕಾರ ಎಂದು ಡಾಕ್ಟರ್ ಬಾಬು ಜಗಜೀವನ್ ರಾಮ್ ಆದಿ ಜಾಂಬವ ಅಭಿವೃದ್ಧಿ ಸೇವಾ ಟ್ರಸ್ಟ್ ಅಧ್ಯಕ್ಷ ಗುಬ್ಬಿ ಬಸವರಾಜ್ ತಿಳಿಸಿದರು.
ಗುಬ್ಬಿ ತಾಲೂಕಿನ ಚೇಳೂರು ಹೋಬಳಿ ಶೇಷೇನಹಳ್ಳಿ ಗ್ರಾಮದಲ್ಲಿ ನಡೆದ 208 ನೇ ಭೀಮ ಕೊರೆಂಗವ್ ವಿಜಯೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿ 1818 ಜನವರಿ 1 ರಂದು ನಡೆದ ಕೊರೆಂಗವ್ ಯುದ್ಧದ ಪರಿಣಾಮ ಎಂದಿಗೂ ಚಾಲ್ತಿಯಲ್ಲಿರಬೇಕು ಎಂದರು.
ತಾಲೂಕಿನ ಗಡಿ ಭಾಗದಲ್ಲಿ ಕಾರ್ಯಕ್ರಮ ಮಾಡಬೇಕೆಂಬ ಒತ್ತಾಸೆಯಿಂದ ಆಯೋಜನೆ ಮಾಡಿದ ಪರಿಣಾಮ ನೂರಾರು ಮಹಿಳೆಯರು ಆಗಮಿಸಿದ್ದೀರಿ. ಅದೇ ರೀತಿ ಹೆಚ್ಚು ಸ್ವಸಹಾಯ ಸಂಘಗಳು ರಚನೆಯಾಗಿ ಆರ್ಥಿಕ ಸ್ವಾವಲಂಬನೆ ಎಲ್ಲರಿಗೂ ಸಿಕ್ಕು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲಿ ಎಂದು ಕರೆ ನೀಡಿದರು.
ಡಾಕ್ಟರ್ ಬಾಬು ಜಗಜೀವನ್ ರಾಮ್ ಆದಿ ಜಾಂಬವ ಅಭಿವೃದ್ಧಿ ಸೇವಾ ಟ್ರಸ್ಟ್ ಉಪಾಧ್ಯಕ್ಷ ಹೊಸಕೆರೆ ಬಸವರಾಜ್ ಮಾತನಾಡಿ ಸಮುದಾಯದ ಜನರು ಅಂಬೇಡ್ಕರ್ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಕ್ಕಳ ಭವಿಷ್ಯ ರೂಪಿಸಲು ಉನ್ನತ ವ್ಯಾಸಂಗಕ್ಕೆ ಒತ್ತು ನೀಡಬೇಕು. ಈ ಹಿಂದೆ ಅನುಭವಿಸಿದ್ದ ಕಷ್ಟಕಾರ್ಪಣ್ಯ ದೂರ ಮಾಡಲು ಸಂಘಟಿತರಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಟ್ರಸ್ಟ್ ಮಹಿಳಾ ಪ್ರತಿನಿಧಿ ಶಿವಲಿಂಗಮ್ಮ ಮಾತನಾಡಿ ಜನಾಂಗದ ಅಭಿವೃದ್ಧಿಗೆ ಪೂರಕವಾಗಿ ಸ್ವಸಹಾಯ ಸಂಘಗಳು ರಚನೆಯಾಗಬೇಕು. ಪ್ರತಿ ತಾಲೂಕಿನಲ್ಲೂ ಒಕ್ಕೂಟ ರಚನೆಯಾಗಬೇಕು. ಆರ್ಥಿಕ ಸ್ಥಿತಿ ಉತ್ತಮ ಪಡಿಸಿಕೊಳ್ಳುವ ಜೊತೆಗೆ ನಮ್ಮ ಸಮುದಾಯ ಒಗ್ಗೂಡಿ ಮುಂದೆ ಸಾಗುವ ಕೆಲಸ ನಿರಂತರ ನಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯೆ ರೂಪ, ಪದಾಧಿಕಾರಿಗಳಾದ ಶಿವರಾಜು, ಮುದ್ದಣ್ಣ, ಗೋವಿಂದಪ್ಪ, ಜಯರಾಮಯ್ಯ, ಗಂಗಣ್ಣ, ರಂಗಸ್ವಾಮಯ್ಯ, ಪವಿತ್ರ, ಭಾಗ್ಯಮ್ಮ, ರೇಖಾ, ಸೇರಿದಂತೆ ಸ್ವಸಹಾಯ ಸಂಘದ ಸದಸ್ಯರು, ಗ್ರಾಮಸ್ಥರು ಇನ್ನಿತರರು ಹಾಜರಿದ್ದರು.





