ಬೇಸಿಗೆ ಕಾಲದಲ್ಲಿ ವಿದ್ಯುತ್ ಕಡಿತ ರೈತರ ಕೃಷಿ ಚಟುವಟಿಕೆಗೆ ಸಾಕಷ್ಟು ಸಮಸ್ಯೆ ತಂದಿದೆ. ಈ ಬಗ್ಗೆ ಹಲವು ಬಾರಿ ಬೆಸ್ಕಾಂ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ ರೈತ ಸಂಘ ಬೃಹತ್ ಪ್ರತಿಭಟನೆಯ ಎಚ್ಚರಿಕೆ ನೀಡಿತ್ತು. ಈ ಹಿನ್ನಲೆ ವಿದ್ಯುತ್ ಸಮಸ್ಯೆ, ಸರಬರಾಜು ತೊಡಕು, ತಾಂತ್ರಿಕ ಸಮಸ್ಯೆ ಜೊತೆಗೆ ಸೂಕ್ತ ಪರಿಹಾರಕ್ಕೆ ಒಂದು ನಿರ್ಧಾರ ಕೈಗೊಳ್ಳಲು ಬೆಸ್ಕಾಂ ಅಧಿಕಾರಿಗಳು ರೈತ ಸಂಘದ ಪದಾಧಿಕಾರಿಗಳ ಜೊತೆ ಸುದೀರ್ಘ ಸಭೆ ನಡೆಸಿದರು.
ಗುಬ್ಬಿ ಪಟ್ಟಣದ ಬೆಸ್ಕಾಂ ಕಚೇರಿಯಲ್ಲಿ ನಡೆದ ಸಭೆ ತಾಲ್ಲೂಕಿನಲ್ಲಿ ತ್ರೀ ಫೇಸ್ ಕರೆಂಟ್ ನೀಡುವಲ್ಲಿ ಬೆಸ್ಕಾಂ ವಿಫಲವಾಗಿದೆ ಎಂದು ರೈತರು ಪ್ರಶ್ನೆಗಳ ಸುರಿಮಳೆಗೈದರು. ಹಳೇ ಕಂಬ ಮತ್ತು ತಂತಿ ಬದಲಾವಣೆಗೆ ನಾಲ್ಕು ವರ್ಷಗಳಿಂದ ಬೇಡಿಕೆ ಇಟ್ಟರೂ ಇಲಾಖೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದೆ. ಒಟ್ಟಾರೆ ರೈತರಿಗೆ ತ್ರೀ ಫೇಸ್ ಕರೆಂಟ್ 7 ಗಂಟೆಗಳ ಕಾಲ ನೀಡಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಆಗ್ರಹಿಸಿದರು.
ಓವರ್ ಲೋಡ್ ಎಂಬ ಮಾತು ನಿರಂತರ ಕೇಳುತ್ತೇವೆ. ಕರೆಂಟ್ ಲೋಡ್ ಒತ್ತಡ ತಪ್ಪಿಸಲು ತಾಲ್ಲೂಕಿಗೆ ಮಂಜೂರಾದ 73 ಲಿಂಕ್ ಲೈನ್ ಕಾಮಗಾರಿ, ವಿಳಂಬವಾಗಿರುವ ಸರಬರಾಜು ಉಪ ಸ್ಥಾವರ ನಿರ್ಮಾಣ ಹಾಗೂ ಪಟ್ಟಣದಲ್ಲಿನ 20 ಎಂವಿ ಪರಿವರ್ತಕ ಅಳವಡಿಕೆ ಕೂಡಲೇ ಮಾಡಿಸಿದ್ದಲ್ಲಿ ಓವರ್ ಲೋಡ್ ಸಮಸ್ಯೆ ಕಡಿಮೆ ಆಗುತ್ತದೆ. ಆದರೆ ಈ ಕೆಲಸಗಳನ್ನು ಮಾಡುವಲ್ಲಿ ಅಧಿಕಾರಿಗಳು ಜಾಣ ಕುರುಡು ಪ್ರದರ್ಶನ ಮಾಡುತ್ತಾರೆ ಎಂದು ರೈತಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್.ವೆಂಕಟೇಗೌಡ ದೂರಿದರು.
ನಿಟ್ಟೂರಿನಲ್ಲಿರುವ ನೂರು ಟಿಸಿ ಮೇಲ್ದರ್ಜೆಗೇರಿಸಿ 160 ಟಿಸಿ ಅಳವಡಿಕೆ ಮಾಡಕೊಡಬೇಕಿದೆ. ಇದರಿಂದ ನಿಟ್ಟೂರು ಭಾಗದ ರೈತರಲ್ಲಿ ಕೃಷಿ ಕೆಲಸ ನೆಮ್ಮದಿ ಕೊಡುತ್ತದೆ. ಸುಟ್ಟು ಹೋದ ಟಿಸಿ 24 ಗಂಟೆಯೊಳಗೆ ಬದಲಿಸಿ ಕೊಡಬೇಕು ಎಂಬುದು ನಮ್ಮ ಮೊದಲ ಬೇಡಿಕೆ. ಸೌರಶಕ್ತಿ ಪಿಎಂ ಕುಸಂಬಿ ಯೋಜನೆಯಲ್ಲಿ ಹಣ ಕಟ್ಟಿದ 1200 ರೈತರಿಗೆ ಸೋಲಾರ್ ಪ್ಯಾನೆಲ್ ಗಳನ್ನು ಸಂಬಂಧಪಟ್ಟ ಕಂಪೆನಿಯಿಂದ ಕೊಡಿಸಬೇಕು ಎಂದು ರೈತ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್ ಒತ್ತಾಯಿಸಿದರು.
ರೈತರ ಸಮಸ್ಯೆ ಆಲಿಸಿದ ಬೆಸ್ಕಾಂ ಇಇ ಪ್ರಕಾಶ್ ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚುತ್ತದೆ. ಗುಬ್ಬಿ ತಾಲ್ಲೂಕಿಗೆ 120 ಮೆಗಾ ವ್ಯಾಟ್ ವಿದ್ಯುತ್ ಎಲ್ಲಾ ರೀತಿಯಲ್ಲಿ ಬಳಸುವುದು ಕಷ್ಟವಾಗಿದೆ. ಈ ಜೊತೆ ರೈಲ್ವೆ ಇಲಾಖೆ ಕೆಲಸಕ್ಕೂ ವಿದ್ಯುತ್ ನೀಡಿದ್ದು, ಎಲ್ಲಾ ಸಮಸ್ಯೆಗೆ ಮಾರ್ಚ್ ತಿಂಗಳೊಳಗೆ ಸೂಕ್ತ ಪರಿಹಾರ ಕಂಡುಹಿಡಿದು 7 ಗಂಟೆ ತ್ರೀ ಫೇಸ್ ಕರೆಂಟ್ ನೀಡುವುದಾಗಿ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಸಮಸ್ಯೆಗಳ ಕುರಿತ ಅರ್ಜಿಯನ್ನು ರೈತಸಂಘ ನೀಡಿದರು.
ಸಭೆಯಲ್ಲಿ ಬೆಸ್ಕಾಂ ಅಧಿಕಾರಿಗಳಾದ ಜಲದೇಶ್, ರಾಜೇಶ್, ಕೆಪಿಟಿಸಿಎಲ್ ಅಧಿಕಾರಿ ಸ್ವಾಮಿ, ರೈತಸಂಘದ ಮಂಜುನಾಥ್, ಸತ್ತಿಗಪ್ಪ, ಗಂಗರೇವಣ್ಣ, ಮೋಹನ್, ಯತೀಶ್, ಮಹದೇವಣ್ಣ ಬಸವರಾಜು, ಕೃಷ್ಣಯ್ಯಶೆಟ್ಟಿ ಇನ್ನಿತರರು ಇದ್ದರು.





