ನೀಲಗಿರಿ ತೋಪಿನಲ್ಲಿ ಕಾಣಿಸಿಕೊಂಡ ಬೆಂಕಿ ಗಾಳಿ ರಭಸಕ್ಕೆ ಪಕ್ಕದ ತೋಟಕ್ಕೆ ಹರಡಿ ಬೆಂಕಿಯ ಕೆನ್ನಾಲಿಗೆಗೆ ತೆಂಗಿನಮರಗಳು ಹೊತ್ತಿ ಉರಿದ ಘಟನೆ ತಾಲ್ಲೂಕಿನ ನಿಟ್ಟೂರು ಹೋಬಳಿ ಎನ್.ನಂದಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ನಂದಿಹಳ್ಳಿ ಗ್ರಾಮದ ರೈತ ಮಹಿಳೆ ಕಮಲಮ್ಮ ಅವರ ತೋಟದಲ್ಲಿದ್ದ 30 ತೆಂಗಿನಮರಗಳು, 30 ಅಡಿಕೆಮರಗಳು ಹಾಗೂ 60 ಬಾಳೆಗಿಡಗಳು ಭಸ್ಮವಾಗಿ ಕಮಲಮ್ಮ ಕಂಗಾಲಾಗಿ ತಮ್ಮ ಅಳಲು ತೋಡಿಕೊಂಡರು.
ರಾಜಣ್ಣ ಎಂಬುವವರಿಗೆ ಸೇರಿದ ನೀಲಗಿರಿ ತೋಪಿನಲ್ಲಿ ಒಣಗಿ ಬಿದ್ದಿದ್ದ ತರಗೆಲೆಗಳ ಮೇಲೆ ಕಿಡಿಕೇಡಿಗಳು ಎಸೆದ ಬೀಡಿ ಸಿಗರೇಟು ಕಿಡಿಗೆ ಬೆಂಕಿ ಹರಡಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಚರ್ಚೆ ಮಾಡಿದ್ದಾರೆ. ಆದರೆ ರೈತ ಮಹಿಳೆಯ ತೋಟ ಬೆಂಕಿಗೆ ಆಹುತಿಯಾಗಿದೆ. ಲಕ್ಷಾಂತರ ರೂಗಳ ನಷ್ಟ ಅನುಭವಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತ ಮಹಿಳೆಗೆ ಪರಿಹಾರ ಒದಗಿಸುವ ಕೆಲಸ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.





