ಗುಬ್ಬಿ ತಾಲ್ಲೂಕಿನ ಕಡಬ ಗ್ರಾಮದಲ್ಲಿನ ಗ್ರಾಮ ಪಂಚಾಯಿತಿ ಕಚೇರಿ ಪಕ್ಕದಲ್ಲಿನ ಎಸ್ ಬಿಐ ಬ್ಯಾಂಕ್ ಗೆ ಸಂಬಂಧಿಸಿದ ಎಟಿಎಂ ಗೆ ತಡರಾತ್ರಿ ನುಗ್ಗಿದ ಖದೀಮರು ಗ್ಯಾಸ್ ಕಟರ್ ಬಳಸಿ ಲಕ್ಷಾಂತರ ರೂಗಳನ್ನು ದೋಚಿದ ಘಟನೆ ತಡರಾತ್ರಿ ನಡೆದಿದ್ದು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಗುಬ್ಬಿ ತಾಲೂಕಿನ ಮೈಸೂರು ಸಂಪರ್ಕದ ಮಾರ್ಗ ಮಧ್ಯೆಯ ಕಡಬ ಗ್ರಾಮ ಪ್ರಮುಖ ಹೋಬಳಿ ಕೇಂದ್ರವಾಗಿದ್ದು ವ್ಯಾಪಾರ ಕೇಂದ್ರ ಎನಿಸಿದೆ. ಬಸ್ ನಿಲ್ದಾಣ ಸಮೀಪ ಪೊಲೀಸ್ ಉಪ ಠಾಣೆಗೆ ಕೂಗಳತೆಯ ಎಸ್ ಬಿಐ ಎಟಿಎಂ ಗೆ ಕಟರ್ ಮೂಲಕ ಕನ್ನ ಹಾಕಿರುವ ಕಳ್ಳರು ಸುಮಾರು 13 ರಿಂದ 14 ಲಕ್ಷ ರೂಪಾಯಿ ಹಣ ದೋಚಿರುವ ಬಗ್ಗೆ ಸಾರ್ವಜನಿಕರಲ್ಲಿ ಚರ್ಚೆ ನಡೆದಿದೆ.
ವಿಚಾರ ತಿಳಿದ ಕೂಡಲೇ ಗುಬ್ಬಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಇನ್ನಿತರ ಸಾಕ್ಷಾಧಾರಕ್ಕೆ ಮುಂದಾಗಿದ್ದು ತುಮಕೂರು ಎಎಸ್ಪಿ ಪುರುಷೋತ್ತಮ್ ಸೇರಿದಂತೆ ತಿಪಟೂರು ಡಿವೈಎಸ್ಪಿ ಹಾಗೂ ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿ ಕಳ್ಳರ ಜಾಡು ಹಿಡಿಯಲು ವಿಶೇಷ ತಂಡ ರಚಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಗುಬ್ಬಿ ತಾಲೂಕಿನಾದ್ಯಂತ ಕಳ್ಳತನ ಪ್ರಕರಣಗಳು ಒಂದರ ಮೇಲೊಂದು ನಡೆದಿದೆ. ಕಳೆದ ಒಂದು ತಿಂಗಳ ಹಿಂದೆಯಷ್ಟೇ ಚೇಳೂರು ಗ್ರಾಮದಲ್ಲಿ ಹಾಡಹಗಲೇ ಜ್ಯುವೆಲರಿ ಶಾಪ್ ಗೆ ನುಗ್ಗಿ ದರೋಡೆ ಯತ್ನ ನಡೆದಿತ್ತು. ವಿಫಲ ಯತ್ನ ನಡೆಸಿದ್ದ ಕಳ್ಳರ ಎಡೆ ಮುರಿ ಕಟ್ಟುವು ಕೆಲಸ ನಡೆದಿತ್ತು. ಆದರೆ ಎಟಿಎಂ ಕಳ್ಳತನ ಪ್ರಮುಖ ಹೋಬಳಿ ಕೇಂದ್ರ ಕಡಬದಲ್ಲಿ ನಡೆದಿದ್ದು ತಾಲ್ಲೂಕಿನ ಜನತೆಯನ್ನು ಬೆಚ್ಚಿ ಬೀಳಿಸಿದೆ.





