ತೆಂಗಿನಮರವೇರಿ ಕುಳಿತಿದ್ದ ಚಿರತೆಯೊಂದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿ ಮಾಡಿದ್ದ ಘಟನೆ ತಾಲ್ಲೂಕಿನ ನಿಟ್ಟೂರು ಬಳಿಯ ಹಾರನಹಳ್ಳಿಯಲ್ಲಿ ನಡೆದಿದೆ.
ಆಹಾರ ಹರಸಿ ಹಾರನಹಳ್ಳಿ ಗ್ರಾಮದತ್ತ ಧಾವಿಸಿದ್ದ ಚಿರತೆಯೊಂದು ಸುತ್ತಾಡಿ ತೆಂಗಿನಮರವೇರಿ ವಿಶ್ರಮಿಸುತ್ತಿತ್ತು. ತೋಟದ ಮಾಲೀಕ ಬಂದಾಗ ತೆಂಗಿನಮರದಲ್ಲಿ ಕೇಳಿದ ಶಬ್ದಕ್ಕೆ ತೆಂಗಿನ ಮರದತ್ತ ಕಣ್ಣು ಹಾಯಿಸಿದಾಗ ಚಿರತೆ ಕಂಡಿದೆ.

ಚಿರತೆ ಕಂಡೊಡನೆ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ಹಾಕಿದರು. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಬರುವಷ್ಟರಲ್ಲಿ ಗ್ರಾಮಸ್ಥರನ್ನು ಕಂಡಿದ್ದ ಚಿರತೆ ಸ್ಥಳದಿಂದ ಕಾಲ್ಕಿತ್ತಿತ್ತು.
ಗ್ರಾಮದ ಸಮೀಪ ಕಂಡ ಚಿರತೆಯಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಸದ್ಯ ಗ್ರಾಮದ ಎರಡು ಕಡೆ ಬೋನ್ ಅಳವಡಿಸಲಾಗಿದೆ. ಆದರೂ ಭಯದಲ್ಲಿರುವ ಸ್ಥಳೀಯರು ಕತ್ತಲಾದ ಬಳಿಕ ಮನೆಯಿಂದ ಆಚೆ ಬರಲು ಹಿಂಜರಿದಿದ್ದಾರೆ. ಕೃಷಿ ಚಟುವಟಿಕೆಗೆ ಹೋಗುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.





