ಗುಬ್ಬಿ ತಾಲ್ಲೂಕಿನ ಜಿ. ಹರಿವೇಸಂದ್ರ ಗ್ರಾಮದಲ್ಲಿ ಮೆದುಳು ಕ್ಯಾನ್ಸರ್ ಗೆ ತುತ್ತಾದ ಯೋಗಿತಾ ಎಂಬ ಬಾಲಕಿ ಮನೆಗೆ ಭೇಟಿ ನೀಡಿದ ಶಾಸಕ ಎಸ್.ಆರ್.ಶ್ರೀನಿವಾಸ್ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಅನುದಾನ ಕೊಡಿಸುವ ಜೊತೆಗೆ ಆರೋಗ್ಯ ಸಚಿವರ ಬಳಿ ಮಾತನಾಡಿ ಚಿಕಿತ್ಸೆಗೆ ಅನುಕೂಲ ಮಾಡುವ ಭರವಸೆ ನೀಡಿದರು.
ಗುಬ್ಬಿ ಪಟ್ಟಣ ಸಮೀಪದ ಜಿ.ಹರಿವೇಸಂದ್ರ ಗ್ರಾಮದ ಮಂಜುನಾಥ್ ಎಂಬುವರ ಮಗಳು ಹತ್ತು ವರ್ಷದ ಯೋಗಿತಾ ಹಾಗೂ ಪೋಷಕರನ್ನು ಭೇಟಿ ನೀಡಿದ ಗುಬ್ಬಿ ಶಾಸಕ ಶಾಸಕರು ಮಗುವಿನ ಆರೋಗ್ಯ ವಿಚಾರಿಸಿ ನಂತರ ಕುಟುಂಬಸ್ಥರನ್ನು ಸಂತೈಸಿದರು. ಮಗುವಿನ ದುಸ್ಥಿತಿ ಕಂಡು ಮರುಗಿ, ಭಾವುಕಾರಾಗಿ ಹೆದರಬೇಡ ನಾನಿದ್ದೇನೆ. ನಿನಗೆ ಒಳ್ಳೆಯ ಚಿಕಿತ್ಸೆ ಕೊಡಿಸುವ ಕೆಲಸ ಮಾಡುತ್ತೇನೆ ಎಂದು ಮಗುವಿಗೆ ಭರವಸೆ ನೀಡಿದರು.
ಕಳೆದ ಒಂದು ತಿಂಗಳ ಹಿಂದೆ ಕ್ಯಾನ್ಸರ್ ಪೀಡಿತ ಮಗುವಿನ ಪರಿಸ್ಥಿತಿ ಮತ್ತು ಆಕೆಯ ಆಧಾರ್ ಕಾರ್ಡ್ ಸಮಸ್ಯೆ ಸೇರಿದಂತೆ ರೇಷನ್ ಕಾರ್ಡ್ ನಲ್ಲಿ ಬಾಲಕಿಯ ಹೆಸರು ಇಲ್ಲದಿರುವ ಬಗ್ಗೆ ಮಾಧ್ಯಮದಲ್ಲಿ ಸುದ್ದಿ ಪ್ರಚಾರ ಮಾಡಲಾಗಿತ್ತು. ಸುದ್ದಿಗೆ ಸ್ಪಂದಿಸಿದ ಜಿಲ್ಲಾಡಳಿತ ಮಗುವಿನ ಮನೆಗೆ ಧಾವಿಸಿ ಎರಡೇ ದಿನದಲ್ಲಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್ ಮೂಲಕ ಆಧಾರ್ ಮತ್ತು ರೇಷನ್ ಕಾರ್ಡ್ ವಿತರಣೆ ಮಾಡಿಸಿತ್ತು.
ಇದೆಲ್ಲವನ್ನು ಸರಿಪಡಿಸಿ ಜೊತೆಗೆ ಮಗುವಿನ ಸ್ಥಿತಿ ಕಂಡು ಸಹಾಯಕ್ಕೆ ಮುಂದಾದ ಗುಬ್ಬಿ ತಾಲ್ಲೂಕು ಆಡಳಿತ ಚಿಕಿತ್ಸೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ತಾವೇ ಸ್ವತಃ 1 ಲಕ್ಷ ಹಣವನ್ನು ಸಹಾಯವಾಗಿ ನೀಡಿ ಮಾನವೀಯತೆ ಮೆರೆದರು. ಮಗುವಿನ 6 ತಿಂಗಳ ಮೆಡಿಸನ್ ವೆಚ್ಚ 9 ಲಕ್ಷ ಹಣದ ಅವಶ್ಯಕತೆ ತಿಳಿದುಕೊಂಡ ಶಾಸಕರು ಅಷ್ಟೊಂದು ಹಣ ಎಲ್ಲಿಂದ ಭರಿಸುತ್ತಿಯಾ ಎಂದು ಕೇಳಿ ಮರುಗಿದರು. ಸ್ಥಳದಲ್ಲಿಯೇ ತಹಸೀಲ್ದಾರ್ ಗೆ ಮಗುವಿನ ಸಹಾಯಕ್ಕೆ ಅಧಿಕಾರಿ ವರ್ಗ ತಮ್ಮ ಕೈಲಾದ ಸಹಾಯಕ್ಕೆ ಮುಂದಾಗುವಂತೆ ತಿಳಿಸಿದರು.
ಗುಬ್ಬಿ ತಾಲೂಕಿನ 34 ಗ್ರಾಮ ಪಂಚಾಯಿತಿಗಳಲ್ಲಿ ಇರುವ ಪರಿಶಿಷ್ಟರ ಅನುದಾನ ಬಳಕೆ ಮಾಡಿಕೊಂಡು ಮಗುವಿನ ಚಿಕಿತ್ಸೆಗೆ ನೆರವಾಗುವಂತೆ ಸೂಚಿಸಿದ ಅವರು ವಾರಕ್ಕೆ ಒಮ್ಮೆ ಚಿಕಿತ್ಸೆಗೆ ಬೆಂಗಳೂರಿಗೆ ತೆರಳಲು ವಾಹನ ವ್ಯವಸ್ಥೆ ಮಾಡುವ ಜೊತೆಗೆ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರ ಜೊತೆ ಮಾತನಾಡಿ ಚಿಕಿತ್ಸೆಗೆ ಸ್ಪಂದಿಸುವ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಆರತಿ.ಬಿ, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ, ಚೇಳೂರು ಉಪ ತಹಶೀಲ್ದಾರ್ ಆರ್.ಜಿ.ನಾಗಭೂಷಣ್, ಕಂದಾಯ ನಿರೀಕ್ಷಕ ಗುರುಪ್ರಸಾದ್, ಕೆಎಂಎಫ್ ವ್ಯವಸ್ಥಾಪಕ ಗಿರೀಶ್ ಇನ್ನಿತರರು ಇದ್ದರು.





