ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಹುರುಳಗೆರೆ ಗ್ರಾಮದ ಎಚ್.ಎನ್.ಗಿರೀಶ್ ಅವರು ಕನ್ನಡದಲ್ಲಿ ‘ಗುಬ್ಬಿ ತಾಲ್ಲೂಕಿನ ಶಾಸನಗಳು : ಸಾಂಸ್ಕೃತಿಕ ಅಧ್ಯಯನ’ ಎಂಬ ವಿಷಯ ಮಂಡನೆಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಪಿಎಚ್ ಡಿ ಪದವಿ ನೀಡಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಸಿ.ಎಸ್.ಪುರ ಹುರುಳಗೆರೆ ಗ್ರಾಮದ ನಿವೃತ್ತ ಶಿಕ್ಷಕ ಎಸ್.ನಂಜೇಗೌಡ ಹಾಗೂ ಜಿಪಂ ಮಾಜಿ ಸದಸ್ಯೆ ರತ್ನಮ್ಮ ಅವರ ಪುತ್ರ ಗಿರೀಶ್ ಪ್ರಸ್ತುತ ರಾಜ್ಯ ಮುಕ್ತ ವಿವಿಯಲ್ಲಿ ಪ್ರಾದೇಶಿಕ ಕೇಂದ್ರದ ಪ್ರಾದೇಶಿಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೈಸೂರಿನ ರಾಜ್ಯ ಮುಕ್ತ ವಿವಿಯ ಕನ್ನಡ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ಪ್ರಾಧ್ಯಾಪಕ ಪ್ರೊ.ಡಿ.ನಾಗಣ್ಣ ಅವರ ಮಾರ್ಗದರ್ಶನದಲ್ಲಿ ಕನ್ನಡ ವಿಷಯವಾಗಿ ತಾಲ್ಲೂಕಿನ ಶಾಸನಗಳು ಮತ್ತು ಇಲ್ಲಿನ ಸಾಂಸ್ಕೃತಿಕ ಅಧ್ಯಯನ ಬಗ್ಗೆ ಪ್ರಬಂಧ ಮಂಡನೆ ಮಾಡಿದ್ದರು.
ಸ್ಥಳೀಯವಾಗಿ ತಾಲ್ಲೂಕಿನ ಇತಿಹಾಸ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಶಾಸನಗಳ ಅಧ್ಯಯನ ನಡೆಸಿ ನಮ್ಮ ಗ್ರಾಮೀಣ ಸೊಗಡಿನ ಸಾಂಸ್ಕೃತಿಕ ವೈಭವವನ್ನು ಸಂಶೋಧಿಸಿ ಸಿದ್ದ ಪಡಿಸಿದ ಮಹಾಪ್ರಬಂಧಕ್ಕೆ ಮೈಸೂರಿನ ರಾಜ್ಯ ಮುಕ್ತ ವಿವಿ ಗೌರವ ಡಾಕ್ಟರೇಟ್ ಪದವಿಯನ್ನು ರಾಜ್ಯಪಾಲರ ಮೂಲಕ ಪಡೆದಿದ್ದು ಸಂತಸ ತಂದಿದೆ ಎಂದು ಡಾ.ಎಚ್.ಎನ್.ಗಿರೀಶ್ ತಿಳಿಸಿದರು.





