ಮೀಸಲಾತಿ ಜಾರಿಗೆ ನಿರಂತರ ಹೋರಾಟ ಮಾಡಿದ ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಜಾರಿ ಮಾಡುವಲ್ಲಿ ಸರ್ಕಾರ ವಿಳಂಬನೀತಿ ಅನುಸರಿಸುತ್ತಿದೆ. ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದ ಮಾದಿಗ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಒಳ ಮೀಸಲಾತಿ ಜಾರಿ ಕೂಡಲೇ ಮಾಡಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ಮಾದಾರ ಮಹಾಸಭಾ, ಮಾದಿಗ ಸಮುದಾಯದ ಮುಖಂಡರು ಹಾಗೂ ದಲಿತಪರ ಸಂಘಟನೆಗಳು ಒಗ್ಗೂಡಿ ತಾಲ್ಲೂಕು ಕಚೇರಿ ಮುಂದೆ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಮುಂದೆ ಪ್ರತಿಭಟನೆ ನಡೆಸಿದರು.
ಪ್ರವಾಸಿ ಮಂದಿರದಿಂದ ತಮಟೆ ವಾದ್ಯದೊಂದಿಗೆ ಮೆರವಣಿಗೆಯಲ್ಲಿ ತಾಲ್ಲೂಕು ಕಚೇರಿ ತಲುಪಿದ ಪ್ರತಿಭಟನಾಕಾರರು ಸರ್ಕಾರದ ವಿಳಂಬ ಖಂಡಿಸಿ ಘೋಷಣೆ ಕೂಗಿ ನಂತರ ಜಿಲ್ಲಾ ಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವ ಪ್ರಿಯಾಂಕಾ ಖರ್ಗೆ, ಎಚ್.ಸಿ.ಮಹದೇವಪ್ಪ ವಿರುದ್ಧ ಘೋಷಣೆ ಕೂಗಿದರು.
ಜಿಪಂ ಮಾಜಿ ಸದಸ್ಯ ಜಿ.ಎಚ್.ಜಗನ್ನಾಥ್ ಮಾತನಾಡಿ ಮೂರು ದಶಕದ ಕಾಲ ಮೀಸಲಾತಿ ಹೋರಾಟ ನಡೆಸಿದ್ದು ಮಾದಿಗ ಸಮುದಾಯ. ಹೋರಾಟದ ಫಲ ಮಾತ್ರ ಛಲವಾದಿ ಸೇರಿದಂತೆ ಕೊರಮ, ಕೊರಚ, ಲಂಬಾಣಿ ಹೀಗೆ ಅನೇಕ ಜನಾಂಗ ಪಡೆದಿದೆ. ಆದರೆ ಈ ಮೀಸಲಾತಿಗೆ ಬಹುಸಂಖ್ಯೆಯ ಮಾದಿಗ ಸಮುದಾಯಕ್ಕೆ ಹೆಚ್ಚು ಒಳ ಮೀಸಲಾತಿ ನೀಡುವಂತೆ ಸರ್ಕಾರ ನೇಮಿಸಿದ ಆಯೋಗವೇ ತಿಳಿಸಿದೆ. ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ನೀಡುವಲ್ಲಿ ಜಾಣತನ ಪ್ರದರ್ಶನ ಮಾಡುತ್ತಿದೆ. ಮೀಸಲಾತಿ ದೊರಕಿದರೆ ನಮ್ಮವರು ಸರ್ಕಾರಿ ಹುದ್ದೆ ಪಡೆಯುತ್ತಾರೆ. ಸಮಾಜದಲ್ಲಿ ಬೆಳೆಯುತ್ತಾರೆ ಎಂದು ನಮ್ಮ ದಲಿತ ಮತ್ತೊಂದು ಸಮುದಾಯ ಛಲವಾದಿ ಜನಾಂಗವೇ ನಮಗೆ ಅಡ್ಡಿಯಾಗಿವೆ. ಬೇರೆ ಯಾವ ಜನಾಂಗ ನಮ್ಮನ್ನು ತಿಳಿಯುತ್ತಿಲ್ಲ. ನಮ್ಮ ದಲಿತರೇ ನಮ್ಮ ಏಳಿಗೆ ಸಹಿಸುತ್ತಿಲ್ಲ. ಸರ್ಕಾರದಲ್ಲಿ ನಮ್ಮ ಸಮುದಾಯದ ಮಂತ್ರಿಗಳಿಗೆ ಪ್ರಭಾವಿ ಖಾತೆ ಇಲ್ಲ. ಅನುದಾನ ನೀಡುವಲ್ಲಿ ಸಹ ನಮ್ಮ ಜನಾಂಗದ ಮುನಿಯಪ್ಪ, ತಿಮ್ಮಾಪುರ ಅವರನ್ನು ಕೇವಲವಾಗಿ ನೋಡಲಾಗಿದೆ ಎಂದು ಕಿಡಿಕಾರಿದರು.
ಮಾದಾರ ಮಹಾಸಭಾ ತಾಲ್ಲೂಕು ಅಧ್ಯಕ್ಷ ಕೊಡಿಯಲ ಮಹದೇವು ಮಾತನಾಡಿ ಮಾದಿಗ ಸಮುದಾಯ ಶತಮಾನಗಳಿಂದ ತುಳಿತಕ್ಕೆ ಬಲಿಯಾದ ಶೋಷಿತ ಸಮಾಜ. ದಲಿತರಲ್ಲಿ ನಮ್ಮಗಳನ್ನೇ ತುಳಿಯುವ ಕೆಲಸ ನಿರಂತರ ನಡೆದುಬಂದಿದೆ. ಆದರೆ ಎಚ್ಚೆತ್ತ ಮಾದಿಗ ಸಮಾಜ ಶಿಕ್ಷಣ ಸಂಘಟನೆ ಮೂಲಕ ಹೋರಾಟವನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಅಲ್ಲಲ್ಲೇ ಬೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮಗಳ ಬೆಳೆವಣೆಗೆಯನ್ನು ನಮ್ಮ ದಲಿತ ಮತ್ತೊಂದು ಸಮುದಾಯ ಸಹಿಸುತ್ತಿಲ್ಲ. ಇವರ ತಂತ್ರಕ್ಕೆ ಸರ್ಕಾರ ಕೂಡ ಜೊತೆ ಕಾಣಿಸಿಕೊಳ್ಳುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾದಿಗ ಸಮುದಾಯವನ್ನು ಕಡೆಗಣಿಸಿದರೆ ಮುಂದಿನ ಎಲ್ಲಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ. ಒಳ ಮೀಸಲಾತಿ ನಮ್ಮ ಹಕ್ಕು. ಬಹುಸಂಖ್ಯೆಯ ಮಾದಿಗರು ಎಲ್ಲಾ ಕ್ಷೇತ್ರದಲ್ಲಿ ಹಿಂದುಳಿದಿದ್ದಾರೆ. ಮುಖ್ಯವಾಹಿನಿಗೆ ಬರಲು ನಮ್ಮ ಹಕ್ಕೊತ್ತಾಯ ಮಾಡುತ್ತಿದ್ದೇವೆ. ಇದೇ ತಿಂಗಳ 12 ರಂದು ಬೆಂಗಳೂರಿನಲ್ಲಿ ನಡೆಯುವ ಬೃಹತ್ ಹೋರಾಟಕ್ಕೆ ತಾಲ್ಲೂಕಿನ ಎಲ್ಲಾ ಮಾದಿಗ ಸಮುದಾಯ ಅಲ್ಲಿಗೆ ತೆರಳಿದೆ ಎಂದರು.
ಮುಖಂಡ ಜಿ.ವಿ.ಮಂಜುನಾಥ್ ಮಾತನಾಡಿ ಮೀಸಲಾತಿ ಎಂಬ ಹಸುವನ್ನು ಕಷ್ಟಪಟ್ಟು ಮೇವು ತಿನ್ನಿಸಿ ದಷ್ಟಪುಷ್ಟವಾಗಿ ಬೆಳೆಸಿದ ಮಾದಿಗ ಸಮುದಾಯಕ್ಕೆ ಹಸುವಿನ ಸುಂದರ ಮುಖ ಮಾತ್ರ ನೀಡಿ, ಹಿಂಬದಿ ಕಾಣದಂತೆ ಹಾಲು ಕರೆದ ಮತ್ತೊಂದು ಸಮುದಾಯ ಸಮಾಜದಲ್ಲಿ ದಷ್ಟಪುಷ್ಟವಾಗಿ ಬೆಳೆದಿದ್ದಾರೆ. ಈಗ ನಮಗೆ ಉಳಿದ ಅವಕಾಶ ಮುಖಕ್ಕೆ ಗುದ್ದಿದರೆ ಹಾಲು ಕರೆಯುವವರನ್ನು ಹಸು ಒದೆಯುತ್ತದೆ ಎಂದು ಕತೆಯ ಮೂಲಕ ಜನಾಂಗವನ್ನು ಎಚ್ಚರಿಸಿದರು.
ಮುಖಂಡ ಚೇಳೂರು ಶಿವನಂಜಪ್ಪ ಮಾತನಾಡಿ ಕೊರಟಗೆರೆ ಕ್ಷೇತ್ರದಲ್ಲಿ 69 ಸಾವಿರ ಮಾದಿಗ ಸಮುದಾಯವಿದ್ದು ಪರಮೇಶ್ವರ್ ಅವರು ಗೆದ್ದಿದ್ದಾರೆ. ನಮ್ಮ ಮತಗಳಿಂದ ಗೆದ್ದು ಈಗ ನಮ್ಮ ವಿರುದ್ಧ ತಂತ್ರ ರೂಪಿಸುವುದು ಸರಿಯಲ್ಲ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಅಧ್ಯಕ್ಷರಾಗಿದ್ದ ಪರಮೇಶ್ವರ್ ಅವರು ಮಾತಿನಂತೆ ನಡೆದಿಲ್ಲ. ಸಿದ್ದರಾಮಯ್ಯ ಅವರು ಅವರಂತೆ ನಾಟಕ ಆಡದೆ ಇನ್ನೆರೆಡು ದಿನದಲ್ಲಿ ಒಳಮೀಸಲಾತಿ ಜಾರಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ದಲಿತ ಕ್ರಾಂತಿ ಗೀತೆ ಹಾಡಲಾಯಿತು. ಮುಖಂಡರಾದ ನಿಟ್ಟೂರು ರಂಗಸ್ವಾಮಿ, ಕಡಬ ಶಂಕರ್, ಪಾಂಡುರಂಗಯ್ಯ, ಶ್ರೀಧರ್, ವಿದ್ಯಾಸಾಗರ್, ಈಶ್ವರಯ್ಯ, ನಟರಾಜು, ಲಕ್ಷ್ಮೀಪತಿ, ಮನೋಹರ್, ಬಸವರಾಜ್, ನರಸಿಯಪ್ಪ, ದಲಿತ್ ಗಂಗಣ್ಣ ಇತರರು ಇದ್ದರು.





