ಗುಬ್ಬಿ ತಾಲ್ಲೂಕಿನ ನಿಟ್ಟೂರು ಗ್ರಾಮದ ಎನ್.ಪಿ.ಸುಮುಖ್ ರಾಷ್ಟ್ರೀಯ ಆರ್ಚರಿ ಕ್ರೀಡಾಕೂಟದಲ್ಲಿ 19 ವರ್ಷದೊಳಗಿನ ವಿಭಾಗದಲ್ಲಿ ರಜತ ಪದಕ ಹಾಗೂ 17 ವರ್ಷದೊಳಗಿನ ವಿಭಾಗದಲ್ಲಿ ಕಂಚಿನ ಪದಕ ಗಳಿಸಿ ಗುಬ್ಬಿ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.
ನಿಟ್ಟೂರಿನ ಮೈಸೂರು ರಸ್ತೆಯಲ್ಲಿನ ಬಾಲಾಜಿ ಪೈಂಟ್ಸ್ ಅಂಡ್ ಹಾರ್ಡವೇರ್ ಮಾಲೀಕರಾದ ಎನ್.ಆರ್.ಪ್ರಶಾಂತ್ ಹಾಗೂ ರೇವತಿ ದಂಪತಿಯ ಸುಪುತ್ರನಾದ ಎನ್.ಪಿ.ಸಾಯಿ ಸುಮುಖ್ ಈಚೆಗೆ ಮಹಾರಾಷ್ಟ್ರದ ಆಲಿಬಾಗ್ ನಗರದಲ್ಲಿ ನಡೆದ ರಾಷ್ಟ್ರೀಯ ಒಳಾಂಗಣ ಆರ್ಚರಿ (ಬಿಲ್ಲುಗಾರಿಕೆ) ಸ್ಪರ್ಧೆಯಲ್ಲಿ ರಜತ ಮತ್ತು ಕಂಚು ಪದಕ ಗೆದ್ದಿದ್ದು ಈ ಹಿಂದೆ ರಾಜ್ಯ ಮಟ್ಟದಲ್ಲಿ ಚಿನ್ನದ ಪದಕ ಹಾಗೂ ಪೂನಾದಲ್ಲಿ ನಡೆದ ಸಿಬಿಎಸ್ಸಿ ಬೋರ್ಡ್ ಕ್ರೀಡಾಕೂಟದಲ್ಲಿ ರಜತ ಪದಕ ಗಳಿಸಿದ್ದು ಹೆಮ್ಮೆ ತಂದಿದೆ ಎನ್ನುತ್ತಾರೆ ನಿಟ್ಟೂರಿನ ಗ್ರಾಮಸ್ಥರು.
ಪ್ರಸ್ತುತ ದಾವಣಗೆರೆ ಪಿಎಸ್ಎಸ್ಇಆರ್ ಬೋರ್ಡಿಂಗ್ ಸ್ಕೂಲ್ ನಲ್ಲಿ ಒಂಬತ್ತನೇ ತರಗತಿ ಓದುತ್ತಿರುವ ಸಾಯಿ ಸುಮುಖ್ 14 ನೇ ವಯಸ್ಸಿನಲ್ಲಿಯೇ ಆರ್ಚರಿ ಬಿಲ್ಲು ವಿದ್ಯೆಯಲ್ಲಿ ವಯಸ್ಸು ಮೀರಿದ ಸಾಧನೆ ತೋರಿದ್ದಾನೆ. ತರಬೇತುದಾರ ಅನಿಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನ್ಯಾಷನಲ್ ಪದಕ ಗಳಿಸಿದ್ದು ಹೆಮ್ಮೆ ತಂದಿದೆ. ದೇಶದ ನಾನಾ ಭಾಗಗಳಿಂದ ನೂರಾರು ಮಂದಿ ಸ್ಪರ್ಧಿಗಳ ಮಧ್ಯೆ ಎರಡನೇ ಹಾಗೂ ಮೂರನೇ ಸ್ಥಾನ ಗಳಿಸುವುದು ಸುಲಭವಲ್ಲ. ಕಳೆದೆರಡು ವರ್ಷದಲ್ಲಿ ಈ ಮಟ್ಟದ ಸಾಧನೆ ಮುಂದಿನ ಭವಿಷ್ಯ ರೂಪಿಸುತ್ತಿದೆ ಎಂದು ಸಾಯಿ ಸುಮುಖನ ತಂದೆ ಎನ್.ಆರ್.ಪ್ರಶಾಂತ್, ತಾಯಿ ರೇವತಿ ತಮ್ಮ ಸಂತೋಷ ಹಂಚಿಕೊಂಡರು.





