ಕಲಿಕೆಗೆ ವಯಸ್ಸಿಲ್ಲ ಎಂಬ ಮಾತು ಅಕ್ಷರಶಃ ಸತ್ಯ. ಅದರಲ್ಲೂ ವಿಜ್ಞಾನ ಎಂಬುದು ಎಲ್ಲಾ ವಯೋಮಾನದವರು ಕಲಿಯಬೇಕಿದೆ. ಇಂತಹ ವಿಜ್ಞಾನ ವಿಷಯವನ್ನು ಗ್ರಾಮೀಣ ಭಾಗದ ಮಕ್ಕಳಿಗೆ ಉಚಿತವಾಗಿ ತಿಳಿಸುವ ಕೆಲಸ ಶಿಕ್ಷಕ ರವಿ ಹಾಗೂ ಸ್ಥಳೀಯ ಗ್ರಾಮಸ್ಥರು ನಡೆಸಿದ್ದು ಶ್ಲಾಘನೀಯ. ಮಕ್ಕಳ ಉಜ್ವಲ ಭವಿಷ್ಯಕ್ಕೆ ವಿಜ್ಞಾನ ಕಲಿಕೆ ಅತ್ಯಗತ್ಯ ಎಂದು ರೈತ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್ ತಿಳಿಸಿದರು.
ಗುಬ್ಬಿ ತಾಲ್ಲೂಕಿನ ಕೋಡಿತೋಟ ಗ್ರಾಮದಲ್ಲಿ ಹಳೆಗುಬ್ಬಿ ಗ್ರಾಮಸ್ಥರು ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಭೂಮಿ ಮೇಲಿನ ಎಲ್ಲಾ ವಿಚಾರದಲ್ಲೂ ವಿಜ್ಞಾನ ಪ್ರಮುಖ ಪಾತ್ರ ವಹಿಸುತ್ತದೆ. ಕುತೂಹಲ, ಸಂಶೋಧನೆ, ಸತ್ಯಾಸತ್ಯತೆ ಅರಿವು ಹಾಗೂ ವಿಜ್ಞಾನ ಪ್ರಯೋಗ ಎಲ್ಲಾ ವಿಚಾರದಲ್ಲೂ ಇರುವ ಹಿನ್ನಲೆ ವಿಜ್ಞಾನ ವಿಷಯ ಮಕ್ಕಳ ಕಲಿಕೆಗೆ ಬೇಕಿದೆ ಎಂದರು.
ಗ್ರಾಮೀಣ ಮಕ್ಕಳಿಗೆ ವಿಜ್ಞಾನ ಅರಿವು ಮೂಡಿಸಲು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಸಣ್ಣ ಗ್ರಾಮದಲ್ಲಿ ಆಯೋಜನೆ ಮಾಡಿದ ಶಿಕ್ಷಕ ರವಿ ಪ್ರತಿಭಾವಂತ. ಆದರೆ ಶಿಕ್ಷಣ ಇಲಾಖೆ ಇಂತಹ ಪ್ರತಿಭೆಯನ್ನು ಗುರುತಿಸಿಲ್ಲ. ಬದುಕು ಕಟ್ಟಿಕೊಳ್ಳಲು ಕೊನೆ ಪಕ್ಷ ಅತಿಥಿ ಶಿಕ್ಷಕ ಹುದ್ದೆ ನೀಡಬೇಕು ಎಂದು ಆಗ್ರಹಿಸಿದ ಅವರು ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ಸುತ್ತಾಡಿ ಮಕ್ಕಳಿಗೆ ಉಚಿತ ಶಿಕ್ಷಣ ಬೋಧನೆ ಮಾಡುತ್ತಿರುವ ರವಿ ಅವರಿಂದ ಮಕ್ಕಳು ಮತ್ತಷ್ಟು ಬೆಳೆಯುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಳೇಗುಬ್ಬಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಚನ್ನ ಸೋಮಯ್ಯ ಮಾತನಾಡಿ ಪರಿಸರ ವಿಜ್ಞಾನದೊಂದಿಗೆ ಮಾನವ ಅವಿನಾಭಾವ ಸಂಬಂಧ ಹೊಂದಿದ್ದಾನೆ. ಪರಿಸರವನ್ನು ರಕ್ಷಿಸಬೇಕು. ಹಾಗೆಯೇ ಆಹಾರ ಸರಪಣಿಯಲ್ಲಿಯ ಪ್ರತಿಯೊಂದು ಜೀವಿಯ ಕಾರ್ಯ ಹಾಗೂ ಅವುಗಳ ಮಹತ್ವದ ಕುರಿತು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾದ ಅಗತ್ಯವಿದೆ. ಇದು ವಿಜ್ಞಾನಕ್ಕೆ ಪೂರಕ ಎಂದ ಅವರು ಮಾನವನಿಗಾಗಿ ವಿಜ್ಞಾನದ ಮಹತ್ವ, ಅವುಗಳನ್ನು ಧನಾತ್ಮಕವಾಗಿ ಬಳಸಿಕೊಂಡಾಗ ಮಾತ್ರ ಒಳ್ಳೆಯ ಪ್ರಯೋಜನವಾಗುವುದು ಎಂದರು.
ಶಿಕ್ಷಕ ರವಿ ಮಾತನಾಡಿ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವು ಮೂಡಿಸುವ ಕೆಲಸ ವಿಜ್ಞಾನದಿಂದ ಆಗಬೇಕಿದೆ.
ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವವನ್ನು ಮೂಡಿಸಬೇಕು. ಹಾಗೆಯೇ
ಪ್ರಯೋಗಗಳ ಮೂಲಕ ಹೊಸ ಅವಿಷ್ಕಾರಗಳನ್ನು ಮಾಡಲು ವಿದ್ಯಾರ್ಥಿಗಳನ್ನು ಹುರಿದುಂಬಿಸಬೇಕು. ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಸಕ್ತ ಬೆಳವಣಿಗೆ ಮತ್ತು ಅಭಿವೃದ್ಧಿಯ ಮಹತ್ವದ ಬಗ್ಗೆ ಜಾಗೃತಿ ಮತ್ತು ವಿಜ್ಞಾನ, ತಂತ್ರಜ್ಞಾನ, ಗಣಿತ ಹಾಗೂ ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಪ್ರಯೋಗಗಳ ಮೂಲಕ ನಾವೀನ್ಯತೆಯನ್ನು ಮೂಡಿಸಲು ಪ್ರೇರಣೆ ಮಕ್ಕಳಿಗೆ ನೀಡಬೇಕು ಎಂದು ವಿಜ್ಞಾನ ದಿನಾಚರಣೆ ಮತ್ತು ಸಿ.ವಿ.ರಾಮನ್ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ರೈತಸಂಘದ ಉಪಾಧ್ಯಕ್ಷ ಗಂಗರೇವಯ್ಯ, ಸತ್ತಿಗಪ್ಪ, ಸ್ಥಳೀಯರಾದ ನಾಗಣ್ಣ, ಲಕ್ಷ್ಮಣ್, ರೇವಣ್ಣ, ನರಸಿಂಹಮೂರ್ತಿ, ಸಿದ್ಧಲಿಂಗಪ್ಪ, ಮಾರುತಿ, ಗಿರೀಶ್, ಭರತ್, ಮಂಜುನಾಥ್, ಮಹೇಶ್ ಇತರರು ಇದ್ದರು.





