ಸದನದಲ್ಲಿ ಚುಕ್ಕಿ ಪ್ರಶ್ನೆಗೆ ಉತ್ತರ ಸಿಗಲಿಲ್ಲ ಎಂದು ಶಾಸಕರು ಪ್ರಶ್ನಿಸಿದಾಗ ಸಭಾಪತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಕೂಡ ಶಾಸಕರ ಪ್ರಶ್ನೆಗೆ ಲಿಖಿತ ಉತ್ತರ ಎರಡು ಮೂರು ತಿಂಗಳ ನಂತರ ಉತ್ತರ ಬಂದಿದೆ. ತಕ್ಷಣ ಉತ್ತರ ಕೊಡಬೇಕು ಎಂದು ಶಾಸಕರು ಬಯಸಿದ್ದು ಒಳ್ಳೆಯ ಬೆಳವಣಿಗೆ. ಎಲ್ಲರಿಗೂ ಸಮಯಕ್ಕೆ ಉತ್ತರ ಸಿಗಲಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಅಭಿಪ್ರಾಯಪಟ್ಟರು.
ಗುಬ್ಬಿ ತಾಲ್ಲೂಕಿನ ಕಸಬ ಹೋಬಳಿ ನಡುವಲಪಾಳ್ಯ, ಬ್ಯಾಡಿಗೆರೆ ಹಾಗೂ ಜವರೇಗೌಡನಪಾಳ್ಯ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ರಸ್ತೆ ಅಭಿವೃದ್ಧಿಯ ಅಂದಾಜು 5 ಕೋಟಿ ರೂಗಳ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಸಭಾಪತಿಗಳು ಮುಖ್ಯಮಂತ್ರಿಗಳು ಸೇರಿದಂತೆ ಎಲ್ಲಾ ಸಚಿವರಿಗೆ ಸೂಚನೆ ನೀಡಿದ್ದು ಮುಂದಿನ ದಿನದಲ್ಲಿ ಸದನದ ಶಾಸಕರ ಪ್ರಶ್ನೆಗೆ ಶೀಘ್ರ ಉತ್ತರ ಕೊಡುವ ಕೆಲಸ ಆಗಲಿದೆ ಎಂದರು.
ಅಡುಗೆ ಅನಿಲ ಕೊರತೆ ದೇಶದೆಲ್ಲೆಡೆ ಕಾಣಸಿಕೊಂಡಿದೆ. ಇರಾನ್ ಇಸ್ರೇಲ್ ಯುದ್ಧ ನಮಗೆ ಎಲ್ ಪಿಜಿ ಗ್ಯಾಸ್ ಸೇರಿದಂತೆ ಪೆಟ್ರೋಲ್ ಡೀಸೆಲ್ ತೈಲೋತ್ಪನ್ನಗಳ ಅಭಾವ ಮುಂದಿನ ದಿನದಲ್ಲಿ ಕಾಡಲಿದೆ. ಸದ್ಯಕ್ಕೆ ಕೊರತೆ ದೊಡ್ಡಮಟ್ಟದಲ್ಲಿ ಕಂಡಿಲ್ಲ. ವಿಶ್ವ ಯುದ್ಧವಾಗಿ ಹೀಗೆಯೇ ಮುಂದುವರೆದಲ್ಲಿ ಎಲ್ಲಾ ದೇಶಗಳಿಗೂ ತೈಲ ಅಭಾವ ದುಷ್ಪರಿಣಾಮ ಕಾಣಲಿದೆ ಎಂದು ತಿಳಿಸಿದರು.
ಪೊಲೀಸ್ ಠಾಣೆಯಲ್ಲಿ ಓರ್ವ ವ್ಯಕ್ತಿ ಸಾವು ಯಾವ ಕಾರಣಕ್ಕೆ ತನಿಖೆಯಿಂದ ತಿಳಿಯಲಿದೆ. ಪೊಲೀಸರು ಮೊದಲಿನ ರೀತಿ ದಂಡನೆ ನೀಡುತ್ತಿಲ್ಲ. ವಿಚಾರಣೆ ವೇಳೆ ನಡೆದರೆ ಪೊಲೀಸರನ್ನು ದೂರುವುದು ಸಹಜ. ವಿಶೇಷ ತಂಡ ತನಿಖೆ ನಡೆಸಿ ನ್ಯಾಯ ಒದಗಿಸಿದ್ದಾರೆ ಎಂದ ಅವರು ಈ ದಿನ 5 ಕೋಟಿ ರೂಗಳ ರಸ್ತೆ ಅಭಿವೃದ್ಧಿ ಕೆಲಸಕ್ಕೆ ಚಾಲನೆ ಸಿಕ್ಕಿದೆ. ಕೆಲ ಗ್ರಾಮದಲ್ಲಿ ಬಾಕಿ ಇದ್ದ ಸಿಸಿರಸ್ತೆ ಕಾಮಗಾರಿ ಮಾಡಿ ಗ್ರಾಮ ಪೂರ್ತಿ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕೆ.ಆರ್.ವೆಂಕಟೇಶ್, ಬುಲೆಟ್ ಬಸವರಾಜು, ಸಿ.ಜಿ.ಲೋಕೇಶ್, ಸೋಮಶೇಖರ್, ರಾಮು, ಶಿವಣ್ಣ, ರಾಜಣ್ಣಗೌಡ, ನಾಗಣ್ಣ, ಎನ್.ಜಿ.ಬಸವರಾಜು, ರಮೇಶ್, ಹರೀಶ್, ಪವನ, ಜವರೇಗೌಡನಪಾಳ್ಯದ ನರಸಿಂಹಮೂರ್ತಿ, ಹರೀಶ್, ಗ್ರಾಮೀಣಾಭಿವೃದ್ಧಿ ಇಲಾಖೆಯ ಎಇಇ ಚಂದ್ರಶೇಖರ್, ಗುತ್ತಿಗೆದಾರರಾದ ರೇಣುಕಪ್ರಸಾದ್, ಕೇಬಲ್ ರಾಜು ಇತರರು ಇದ್ದರು.





