ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿ ಬಿದರೆ ಗ್ರಾಮದ ಗೋಕಟ್ಟೆ (ಗಂಗಸ ಕಟ್ಟೆ) ಒತ್ತುವರಿ ಮಾಡಿ ಮಣ್ಣು ಸುರಿದು ರಸ್ತೆ ನಿರ್ಮಿಸಿಕೊಂಡ ಬಗ್ಗೆ ದೂರು ನೀಡಿದರೂ ಯಾವ ಅಧಿಕಾರಿಗಳು ಕ್ರಮ ಕೈಗೊಳ್ಳದ ಹಿನ್ನಲೆ ಬಿದರೆ ಗ್ರಾಮಸ್ಥರು ಬೈಕ್ ಮೂಲಕ ಗುಬ್ಬಿ ತಾಲ್ಲೂಕು ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನೂರಾರು ವರ್ಷಗಳಿಂದ ಜಾನುವಾರುಗಳಿಗೆ ಕುಡಿಯಲು ನೀರು ಒದಗಿಸಿದ್ದ ಗೋಕಟ್ಟೆ ಏಕಾಏಕಿ ಮುಚ್ಚಿ ರಸ್ತೆ ನಿರ್ಮಾಣ ಮಾಡಿದ್ದು ಸಂಬಂಧಪಟ್ಟ ಅಭಿವೃದ್ದಿ ಅಧಿಕಾರಿ ಪ್ರಭಾವಿಗಳ ಕೈಗೊಂಬೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಣ್ಣು ಸುರಿದಿರುವುದು ತೆರವು ಮಾಡಲು ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ತಹಶೀಲ್ದಾರ್ ಕಚೇರಿಗೆ ಮನವಿ ಮಾಡಿದ್ದೇವು. ಆದರೆ ಯಾವ ಅಧಿಕಾರಿಗಳು ಮಣ್ಣು ತೆರೆವು ಮಾಡಲು ಮುಂದಾಗಲಿಲ್ಲ. ಈ ನಿಟ್ಟಿನಲ್ಲಿ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳು ಭೇಟಿ ನೀಡಿ ಗ್ರಾಮಸ್ಥರ ಗೋ ಕಟ್ಟೆ ಉಳಿಸಿಕೊಡುವಂತೆ ಆಗ್ರಹಿಸಿ ಪಿಡಿಓ ವಿರುದ್ಧ ಘೋಷಣೆ ಕೂಗಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್.ವೆಂಕಟೇಗೌಡ ಮಾತನಾಡಿ ರೈತ ವಿರೋಧಿ ಕೆಲಸ ಮಾಡಿದ ಅಧಿಕಾರಿಗಳು ದನಕರುಗಳು ನೀರು ಕುಡಿಯುವ ಕಟ್ಟೆಯನ್ನೇ ನುಂಗಲು ಸಹಕಾರ ನೀಡಿದ್ದಾರೆ. ಕೆಲ ಪುಡಾರಿಗಳ ಪ್ರಭಾವದಿಂದ ಅಧಿಕಾರಿಗಳು ಕೈಗೊಂಬೆಯಂತೆ ವರ್ತಿಸಿದ್ದಾರೆ. ಸುಮಾರು ಆರು ನೂರು ವರ್ಷದ ಗಂಗಸಕಟ್ಟೆ ಜಾನುವಾರುಗಳಿಗೆ ನೀರು ಒದಗಿಸಿತ್ತು. ಅಂತಹ ಕಟ್ಟೆಗೆ ಮಣ್ಣು ಸುರಿದು ರಾತ್ರೋರಾತ್ರಿ ರಸ್ತೆ ನಿರ್ಮಿಸಿ ಕೆಲವರಿಗೆ ಮಾತ್ರ ಅನುವು ಮಾಡಲು ಸಾರ್ವಜನಿಕ ಅಸ್ತಿಯನ್ನೇ ಕಬಳಿಸಿದ್ದು ಸರಿಯಲ್ಲ. ಒಂದು ಏಕರೆಗೂ ದೊಡ್ಡದಾದ ಕಟ್ಟೆ ಕಬಳಿಕೆ ಆಗದಂತೆ ಎಚ್ಚರಿಕೆ ವಹಿಸಬೇಕಿದ್ದ ಅಧಿಕಾರಿಗಳು ಬೇಲಿಯೇ ಎದ್ದು ಹೊಲ ಮೇಯ್ದಂತೆ ಒತ್ತುವರಿಗೆ ಸಹಕಾರ ನೀಡಿದ್ದು ಸರಿಯಲ್ಲ. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಿದರೆ ಲೋಕೇಶ್ ಮಾತನಾಡಿ ಬಿದರೆ ಗ್ರಾಮ ಠಾಣಾ ವ್ಯಾಪ್ತಿಯ ಬೆಲೆ ಬಾಳುವ ಗೋಕಟ್ಟೆ ರಾತ್ರಿಯಲ್ಲಿ ರಸ್ತೆಯಾಗಿ ಮಾರ್ಪಾಡು ಆಗಿದ್ದು ಗ್ರಾಮಸ್ಥರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಅರ್ಜಿ ಸಲ್ಲಿಸಿದ್ದರೂ ಕ್ರಮ ಕೈಗೊಳ್ಳದ ಹಿನ್ನಲೆ ಬೈಕ್ ಏರಿ ಹತ್ತು ಕಿಮೀ ಪ್ರತಿಭಟನೆ ನಡೆಸಿ ಗುಬ್ಬಿ ತಾಲ್ಲೂಕು ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಬೆರಳೆಣಿಕೆ ಮಂದಿಯ ಕುಮ್ಮಕ್ಕಿನಿಂದ ಪಿಡಿಓ ಸ್ಥಳೀಯವಾಗಿ ಜನ ವಿರೋಧಿ ಕೆಲಸ ಮಾಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಪಿಡಿಓ ಅಮಾನತು ಗೊಳಿಸಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ತಾಪಂ ಇಓ ರಂಗನಾಥ್ ಪ್ರತಿಭಟನಾಕಾರರ ಜೊತೆ ಚರ್ಚಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಒತ್ತುವರಿ ತೆರವಿಗೆ ಅಗತ್ಯ ಕ್ರಮ ವಹಿಸುವ ಭರವಸೆ ನೀಡಿದರು. ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳಿಗೆ, ಸಂಸದರಿಗೆ ಹಾಗೂ ಶಾಸಕರಿಗೆ ಮನವಿ ಪತ್ರವನ್ನು ತಾಲ್ಲೂಕು ಆಡಳಿತ ಮೂಲಕ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ರೈತಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್, ಸ್ಥಳೀಯರಾದ ರಘುವೀರ್, ರಮೇಶ್, ತೇಜು, ಮೈಲಾರಿ, ಅನುಸೂಯಮ್ಮ, ಸಾವಿತ್ರಮ್ಮ ಸೇರಿದಂತೆ ರೈತಸಂಘದ ಕಾರ್ಯಕರ್ತರು ಇತರರು ಇದ್ದರು.





