ಕಳೆದೆಲ್ಲಾ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಏನೇನು ಕೆಲಸ ಮಾಡಿದೆ ಎನ್ನುವುದು ಬುದ್ಧಿವಂತ ಮತದಾರರು ಗಮನಿಸಿದ್ದಾರೆ. ಕೆಲಸದ ಯಾವ ಸಾಕ್ಷಿಗುಡ್ಡೆ ಇಲ್ಲದ ಕಾರಣ ಪದವಿಗಾಗಿ ಅಲ್ಲ ಪರಿವರ್ತನೆಗಾಗಿ ಚುನಾವಣೆ ಎಂದು ಘೋಷಣೆಯಲ್ಲಿ ಮತಯಾಚನೆ ಆರಂಭಿಸಿದ್ದೇನೆ ಎಂದು ಆಗ್ನೇಯ ಪದವೀಧರ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ್ ತಿಳಿಸಿದರು.
ಗುಬ್ಬಿ ಪಟ್ಟಣದ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಗುಬ್ಬಿಯಪ್ಪನ ಆಶೀರ್ವಾದ ಪಡೆದು ಶಾಸಕ ಎಸ್.ಆರ್.ಶ್ರೀನಿವಾಸ್ ಮಾರ್ಗದರ್ಶನದಲ್ಲಿ ಮೂರು ದಿನಗಳ ಕಾಲ ತಾಲ್ಲೂಕಿನಲ್ಲಿ ಪ್ರಚಾರ ಕಾರ್ಯದ ಪ್ರವಾಸ ಹಮ್ಮಿಕೊಂಡಿದ್ದೇವೆ ಎಂದರು.
ಕಾಂಗ್ರೆಸ್ ಕಾರ್ಯಕರ್ತರ ಹುಮ್ಮಸ್ಸು ನನ್ನ ಗೆಲುವಿಗೆ ಸೋಪಾನವಾಗಿದೆ. ಪ್ರತಿ ಗ್ರಾಮದಲ್ಲೂ ಪದವೀಧರರನ್ನು ಹುಡುಕಿ ನೋಂದಣಿ ಮಾಡಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ಅವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಮೂರು ದಿನಗಳ ಕಾಲ ಎಲ್ಲಾ ಶಾಲಾ ಕಾಲೇಜು ಸೇರಿದಂತೆ ಇನ್ನಿತರ ಕ್ಷೇತ್ರದಲ್ಲಿನ ಪದವೀಧರ ಮತದಾರರನ್ನು ಭೇಟಿ ಮಾಡಿ ಮತಯಾಚನೆ ನಡೆಸುತ್ತೇವೆ ಎಂದ ಅವರು ಯುವನಿಧಿ ಗ್ಯಾರಂಟಿ ಯೋಜನೆ ಕೂಡಾ ಚುನಾವಣೆಯಲ್ಲಿ ನಮ್ಮ ಕೈ ಹಿಡಿಯಲಿದೆ. ಒಟ್ಟಾರೆ ಗ್ಯಾರಂಟಿ ಯೋಜನೆಗಳು ಸಹ ಪದವೀಧರ ಚುನಾವಣೆಯಲ್ಲಿ ಪ್ಲಸ್ ಆಗಲಿದೆ ಎಂದರು.
ಶಿಕ್ಷಕರ ಸಮಸ್ಯೆ ಜೊತೆಗೆ ಪದವೀಧರರ ನಿರುದ್ಯೋಗ ನಿವಾರಣೆಗೆ ನನ್ನ ಹೋರಾಟ ನಿರಂತರ ನಡೆಯಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸ್ವಯಂ ಉದ್ಯೋಗ ಯೋಜನೆಗಳು ಹಾಗೂ ಕೌಶಲ್ಯ ತರಬೇತಿ ಕೂಡಾ ನಮ್ಮ ಪದವೀಧರ ಯುವಕರಿಗೆ ತಲುಪಿಸುವ ಕೆಲಸ ಮಾಡುತ್ತೇವೆ ಎಂದ ಅವರು ಗುಬ್ಬಿ ತಾಲ್ಲೂಕಿನಲ್ಲಿ 800 ಮತದಾರರ ನೋಂದಣಿ ಆಗುತ್ತಿತ್ತು. ಆದರೆ ಈ ಬಾರಿ ನಾಲ್ಕು ಸಾವಿರಕ್ಕೂ ಅಧಿಕ ಮತಗಳ ನೋಂದಣಿಯಾಗಿದೆ. ಈ ಕಾರ್ಯ ಮಾಡಿದ ನಮ್ಮ ಕಾಂಗ್ರೆಸ್ ಕಾರ್ಯಕರ್ತರೇ ಶಶಿ ಹುಲಿಕುಂಟೆ ಯಾಕೆ ಬೇಕಿದೆ ಎಂಬುದು ರುಜುವಾತು ಮಾಡಿದ್ದಾರೆ ಎಂದು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್.ವೆಂಕಟೇಶ್, ಪಪಂ ಮಾಜಿ ಸದಸ್ಯ ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಯತೀಶ್, ನಗರ ಘಟಕ ಅಧ್ಯಕ್ಷ ವಾಸುಗೌಡ, ಮುಖಂಡರಾದ ಪಟೇಲ್ ದೇವರಾಜ್, ಜಿ.ಸಿ.ಶಿವಕುಮಾರ್, ಪಣಗಾರ್ ವೆಂಕಟೇಶ್, ಹೊಸಹಳ್ಳಿ ರವೀಶ್, ಜಿ.ಎಲ್.ರಂಗನಾಥ್, ಲಕ್ಕೇನಹಳ್ಳಿ ನರಸಿಯಪ್ಪ, ಮಲ್ಲಿಕಾರ್ಜುನ್, ಅನಿಲ್, ಸಚಿನ್, ಮಧು ಇನ್ನಿತರರು ಇದ್ದರು.





