ರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ ಗುಬ್ಬಿ ಪಟ್ಟಣದ ವಿವೇಕಾನಂದ ಸ್ಪೋರ್ಟ್ಸ್ ಸ್ಕ್ವೇರ್ ಆಯೋಜಿಸಿದ್ದ ಗುಬ್ಬಿ ಮ್ಯಾರಥಾನ್ ವಾಕಥಾನ್-2026 ಕ್ರೀಡಾ ಕಾರ್ಯಕ್ರಮಕ್ಕೆ ಗೃಹಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಶಾಸಕ ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ಚಾಲನೆ ನೀಡಿದರು.
ಚಾಲನೆ ನೀಡಿದ ಗೃಹಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ ಇಂದಿನ ಯುವ ಪೀಳಿಗೆ ಹೆಚ್ಚು ಮಾದಕ ವ್ಯಸನಿಗಳಾಗುತ್ತಿದ್ದು ಇದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಯುವ ಜನರ ದಿನಾಚರಣೆಯನ್ನು ಈ ಮಾದಕ ಜಾಲಗಳನ್ನು ಮಟ್ಟ ಹಾಕುವ ಮೂಲಕ ಯುವಕರನ್ನು ರಕ್ಷಿಸಲು ಸರ್ಕಾರ ಕಟ್ಟುನಿಟ್ಟಿನ ಕಾನೂನು ಜಾರಿ ಮಾಡಿದೆ. ಈಗಾಗಲೇ ಬಹಳಷ್ಟು ದಂಧೆಕೋರರನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಕೋಟ್ಯಾಂತರ ರೂಗಳ ಮಾದಕ ವಸ್ತುಗಳನ್ನು ಸುಟ್ಟು ಹಾಕಲಾಗಿದೆ ಎಂದ ಅವರು ಅವರು ಪ್ರತಿವರ್ಷ ನಡೆಯುವ ರಾಜ್ಯ ಮಟ್ಟದ ಅಥ್ಲೆಟಿಕ್ ಈ ಬಾರಿ ತುಮಕೂರಿನಲ್ಲಿ ಇದೇ ತಿಂಗಳಲ್ಲಿ ಆಯೋಜನೆ ಮಾಡಲಾಗಿದೆ. ಎಲ್ಲರ ಸಹಕಾರ ಅಗತ್ಯವಿದೆ ಎಂದರು.
ಡಿಸಿ, ಎಸ್ಪಿ, ತಹಶೀಲ್ದಾರ್ ಕಾಲೆಳೆದ ಗೃಹಮಂತ್ರಿ
ಮ್ಯಾರಥಾನ್ ವಾಕಥಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗೃಹಮಂತ್ರಿ ಡಾ.ಜಿ.ಪರಮೇಶ್ವರ್ ಮಾತಿನ ಮಧ್ಯೆ ಜಿಲ್ಲಾಧಿಕಾರಿಗಳು ಟ್ರ್ಯಾಕ್ ಸೂಟ್ ಧರಿಸಿದ್ದಾರೆ. ಆದರೆ ಅದು ಶೋಗಾಗಿ ಎಂದು ಹಾಸ್ಯ ಚಟಾಕಿ ಹಾರಿಸಿ ಎಸ್ಪಿ ಅವರು ಟ್ರ್ಯಾಕ್ ಸೂಟ್ ಧರಿಸಿದರೆ ಓಡಬೇಕಾಗುತ್ತೆ ಎಂದು ಸಮವಸ್ತ್ರ ಧರಿಸಿ ಬಂದಿದ್ದಾರೆ. ತಹಶೀಲ್ದಾರ್ ಅವರು ಮದುವೆ ಮನೆಗೆ ಹೊರಡಲು ಸಜ್ಜಾಗಿದ್ದಾರೆ ಎಂದು ಹಾಸ್ಯವಾಗಿಯೇ ಕಾಲೆಳೆಯುವ ಚಟಾಕಿ ಹಾರಿಸಿ ನೆರೆದಿದ್ದ ಸಾರ್ವಜನಿಕರಲ್ಲಿ ನಗು ಭರಿಸಿದರು.
ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ ದೈಹಿಕ ಆರೋಗ್ಯಕ್ಕೆ ವ್ಯಾಯಾಮ ಅತ್ಯಗತ್ಯ. ದಿನ ಒಂದೆರೆಡು ಗಂಟೆ ವ್ಯಾಯಾಮ ಮಾಡುವುದು ಅಥವಾ ಯಾವುದಾದರೂ ಕ್ರೀಡೆಯಲ್ಲಿ ತೊಡಗುವುದು. ದೈಹಿಕ ಹಾಗೂ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಇಂದಿನ ಮ್ಯಾರಥಾನ್ ಓಟ ಪ್ರತಿ ವರ್ಷ ನಡೆಯುತ್ತಾ ನಿರಂತರ ಗುಬ್ಬಿ ಜನರ ಆರೋಗ್ಯ ಕಾಪಾಡಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭಾಕಲ್ಯಾಣ್, ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ತಹಸೀಲ್ದಾರ್ ಬಿ.ಆರತಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುಳಾದೇವಿ ಹಾಗೂ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರು, ವಿವೇಕಾನಂದ ಸ್ಪೋರ್ಟ್ಸ್ ಸ್ಕ್ವೇರ್ ಮುಖ್ಯಸ್ಥರು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.





