ಇತಿಹಾಸ ಪ್ರಸಿದ್ಧ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿ (ಗುಬ್ಬಿಯಪ್ಪ) ಅವರ ಜಾತ್ರಾ ಮಹೋತ್ಸವದ ಅದ್ದೂರಿ ಆಚರಣೆಗೆ ಉಪವಿಭಾಗಾಧಿಕಾರಿಗಳು ಹಾಗೂ ದೇವಾಲಯದ ಆಡಳಿತಾಧಿಕಾರಿ ನಹೀದಾ ಜಮ್ ಜಮ್ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯನ್ನು ದೇವಾಲಯದ ದಾಸೋಹ ಸಭಾಂಗಣದಲ್ಲಿ ನಡೆಸಲಾಯಿತು.
ಸಭೆಯಲ್ಲಿ ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಹಾಗೂ ತಹಶೀಲ್ದಾರ್ ಆರತಿ.ಬಿ ಕಳೆದ ಬಾರಿ ನಡೆದ ಜಾತ್ರಾ ಮಹೋತ್ಸವದ ಸಾಧಕ ಬಾಧಕಗಳನ್ನು ಚರ್ಚಿಸಿ ಜಾತ್ರೆಯ ಸಂದರ್ಭದಲ್ಲಿ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಹದಿನೆಂಟು ಕೋಮಿನ ಮುಖಂಡರು, ವ್ಯವಸ್ಥಾಪನ ಸಮಿತಿ, ಜೀರ್ಣೋದ್ಧಾರ ಸಮಿತಿ, ದಾಸೋಹ ಸಮಿತಿ ಸೇರಿದಂತೆ ಹಲವು ಮುಖಂಡರ ಚರ್ಚೆ ನಡೆಸಿ ಎಲ್ಲಾ ಸಿದ್ಧತೆ ಬಗ್ಗೆ ಕೂಲಂಕುಷವಾಗಿ ಚರ್ಚಿಸಿದರು
ಬೆಸ್ಕಾಂ, ಆರೋಗ್ಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪ್ರತಿಬಾರಿಯೂ ಜಾತ್ರೆಯ ಸಂದರ್ಭದಲ್ಲಿ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಲಾಯಿತು. ಜಾತ್ರೆಯ ಸಂದರ್ಭದಲ್ಲಿ ಜಿಲ್ಲೆಯ ಮೂಲೆ ಮೂಲೆಯಿಂದ ಹಾಗೂ ಹೊರ ಜಿಲ್ಲೆಗಳಿಂದ ಭಕ್ತರು ಬರುವುದರಿಂದ ಕೆಎಸ್ಆರ್ ಟಿಸಿ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಸೂಚಿಸಲಾಯಿತು. ಜೊತೆಗೆ ಸಾವಿರಾರು ಜನ ಭಾಗವಹಿಸುವುದರಿಂದ ಪೊಲೀಸ್ ಇಲಾಖೆಯು ಸಹ ಸರಿಯಾದ ಭದ್ರತೆ ಒದಗಿಸಬೇಕುಎಂದು ತಿಳಿಸಲಾಯಿತು.
ಕಳೆದ ಜಾತ್ರೆಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ಸರಿಯಾಗಿ ನೇಮಿಸದೆ ಗುಂಪು ಗುಂಪಾಗಿಜನ ನಿಂತು ಜೇಬುಗಳ್ಳರಿಗೆ ದಾರಿಯಾಯಿತು ಎಂದ ಅವರು ಈ ವರ್ಷ ಸೂಕ್ತ ಬಂದೋಬಸ್ತ್ ಗೆ ಮುಂದಾಗುವ ಜೊತೆಗೆ ವ್ಯವಸ್ಥಿತ ರೀತಿಯಲ್ಲಿ ಸಿಬ್ಬಂದಿಗಳನ್ನು ನಿಯೋಜನೆ ಮಾಡುವಂತೆ ಸೂಚನೆ ನೀಡಿದರು.
ಕಳೆದ ಹೂವಿನ ವಾಹನ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಚರ್ಚೆಯಾದಂತೆ ಪೊಲೀಸ್ ಸಿಬ್ಬಂದಿ ನಿಯೋಜನೆ ಇದ್ದು ಸ್ವತಃ ಉಪವಿಭಾಗಾಧಿಕಾರಿಗಳೇ ಗುಂಪು ಗುಂಪಾಗಿ ನಿಂತಿದ್ದ ಬಗ್ಗೆ ಸಭೆಯಲ್ಲಿ ಚರ್ಚಿಸಿ ಸಿಬ್ಬಂದಿಯನ್ನು ನಿಯೋಜನೆ ಮಾಡಿರುವ ಪಟ್ಟಿಯನ್ನು ಮೂರ್ನಾಲ್ಕು ದಿನಗಳ ಮುಂಚೆಯೇ ತಹಶೀಲ್ದಾರ್ ಅವರಿಗೆ ನೀಡುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು.
ಸಭೆಯ ಬಳಿಕ ಮಾಧ್ಯಮ ವರದಿಗಾರರ ಜೊತೆಗೆ ಉಪ ವಿಭಾಗಾಧಿಕಾರಿ ದೇವಾಲಯದ ಆಡಳಿತಾಧಿಕಾರಿ ನಹೀದಾ ಜಮ್ ಜಮ್ ಮಾತನಾಡಿ ಇತಿಹಾಸ ಪ್ರಸಿದ್ಧ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿ ಅವರ ಜಾತ್ರಾ ಮಹೋತ್ಸವವು ಫೆ. 22 ರಂದು ಜಾತ್ರಾ ಮಹೋತ್ಸವ ಆರಂಭವಾಗಿ ಮಾ.15 ರಂದು ಜಾತ್ರಾ ಮಹೋತ್ಸವವು ಸಂಪನ್ನವಾಗಲಿದೆ. ಫೆ.26 ರಂದು ರಥೋತ್ಸವವು ನಡೆಯಲಿದ್ದು, ಮಾ.03 ರಂದು ಬೆಳ್ಳಿ ಪಲ್ಲಕ್ಕಿ ಉತ್ಸವ ಜರುಗಲಿದ್ದು, ಪಲ್ಲಕ್ಕಿ ಉತ್ಸವದಂದು ಅರ್ಜುನ್ ಜನ್ಯ ಅವರ ನೇತೃತ್ವದಲ್ಲಿ ಸಂಗೀತ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ. ಅಂದು ಹೆಚ್ಚಿನ ಸಂಖ್ಯೆಯಲ್ಲಿ ಭದ್ರತೆಗೆ ಸಿಬ್ಬಂದಿ ನಿಯೋಜನೆ ಹಾಗೂ ವಾಹನ ಪಾರ್ಕಿಂಗ್ ವ್ಯವಸ್ಥೆ ಸಂಬಂಧ ತಹಶೀಲ್ದಾರ್ ಜೊತೆ ಸರ್ಕಲ್ ಇನ್ಸ್ಪೆಕ್ಟರ್ ಚರ್ಚಿಸಿ ಸೂಕ್ತ ಭದ್ರತೆ ಕಲ್ಪಿಸಲು ಸೂಚನೆ ನೀಡಲಾಗಿದೆ. ದೇವಾಲಯದ ಆವರಣದಲ್ಲಿ ಸಹಾಯ ವಾಣಿ ನಿರ್ಮಿಸಿ ಹೊರಗಿನಿಂದ ಬರುವ ಭಕ್ತರಿಗೆ ಯಾವುದೇ ಸಮಸ್ಯೆ ಉಂಟಾದರೆ ವಾರ್ ರೂಮ್ ಗೆ ತೆರಳಿ ಸಮಸ್ಯೆ ಪರಿಹಾರ ಕಂಡುಕೊಳ್ಳಲು ಸೂಕ್ತ ಕ್ರಮ ವಹಿಸಲು ಸೂಚಿಸಿರುವುದಾಗಿ ತಿಳಿಸಿದರು.
ಈ ಪೂರ್ವಭಾವಿ ಸಭೆಯಲ್ಲಿ ತಹಶೀಲ್ದಾರ್ ಮತ್ತು ದೇವಾಲಯದ ಕಾರ್ಯನಿರ್ವಹಣೆ ಅಧಿಕಾರಿ ಆರತಿ.ಬಿ, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಮಣ್ಣ, ಪಟೇಲ್ ಕೆಂಪೇಗೌಡ, ಕುಮಾರ್, ತಾಲೂಕು ವೈದ್ಯಾಧಿಕಾರಿ ಡಾ.ಬಿಂದುಮಾಧವ, ದಾಸೋಹ ಸಮಿತಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಿ.ಆರ್ ಸುರೇಶ್, ಕಾರ್ಯದರ್ಶಿ ಜಿ.ಟಿ.ಸುರೇಶ್ ಸದಸ್ಯರಾದ ಚನ್ನಬಸವಪ್ರಸಾದ್, ಅನಿಲ್ ಕುಮಾರ್, ಪ್ರಭು, ವ್ಯವಸ್ಥಾಪನ ಸಮಿತಿ ಪದಾಧಿಕಾರಿಗಳಾದ ಮಂಜುನಾಥ್, ರೇಣುಕಾಪ್ರಸಾದ್, ರಾಘವೇಂದ್ರ, ಜೀರ್ಣೋದ್ಧಾರ ಸಮಿತಿಯ ಹರೀಶ್, ಕುಮಾರ್, ಯಜಮಾನ್ ಕುಮಾರ್, ಮುಖಂಡರಾದ ಜಿ.ಎಸ್.ವಿಜಯ ಕುಮಾರ್, ಸೋಮಶೇಖರಯ್ಯ, ನಿಜಲಿಂಗಪ್ಪ , ವಾಟಾಳ್ ನಾಗರಾಜ್, ಸದಾಶಿವ, ಜಿ.ಎನ್.ಬಸವರಾಜು , ಲಕ್ಷ್ಮೀನಾರಾಯಣ, ಅರ್ಜುನ್, ಅನಿಲ್ ಸೇರಿದಂತೆ ಹದಿನೆಂಟು ಕೋಮಿನ ಮುಖಂಡರು, ಭಕ್ತರು ಉಪಸ್ಥಿತರಿದ್ದರು.





