ನಾಡು-ನುಡಿಯ ಬಗ್ಗೆ ಡಾ. ಕರೀಗೌಡ ಬೀಚನಹಳ್ಳಿ ಅವರ ಮನದ ಮಾತುಗಳು ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಮತ್ತೊಮ್ಮೆ ನೆನಪಿಸುತ್ತವೆ. ಅವರ ಸಾಹಿತ್ಯ ಕೃಷಿಯು ಭವಿಷ್ಯದಲ್ಲಿ ಇನ್ನಷ್ಟು ಕನ್ನಡ ಪ್ರೇಮಿಗಳನ್ನು ಸೃಷ್ಟಿಸಲಿ, ಕನ್ನಡ ಸಾಹಿತ್ಯದ ಬೆಳವಣಿಗೆಗೆ ದಾರಿದೀಪವಾಗಲಿ
ಕನ್ನಡದ ಅಪರೂಪದ ಸಾಹಿತಿಗಳಲ್ಲಿ ಒಬ್ಬರಾದ ಡಾ. ಕರೀಗೌಡ ಬೀಚನಹಳ್ಳಿ ಅವರು 17ನೇ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಬೀಚನಹಳ್ಳಿಯ ಡಾ. ಕರೀಗೌಡ ಅವರು ಈವರೆಗೂ 64ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇದೀಗ 17ನೇ ಜಿಲ್ಲಾ ಕನ್ನಡ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ದಿನ ಡಾಟ್ ಕಾಮ್ನ ವಿಶೇಷ ಸಂದರ್ಶನದಲ್ಲಿ ನಾಡು-ನುಡಿಯ ಕುರಿತು ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.
1) ತುಮಕೂರು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದೀರ. ಏನು ಅನ್ನಿಸುತ್ತಿದೆ?
ಡಾ. ಕರೀಗೌಡ ಬೀಚನಹಳ್ಳಿ: ಸಹಜವಾಗಿ ಸಂತೋಷ ಆಗುತ್ತೆ. ನಮ್ಮ ಜಿಲ್ಲೆಯ ಸಮ್ಮೇಳನದ ಅಧ್ಯಕ್ಷತೆ ವಹಿಸುತ್ತಿರುವುದು ಹೆಮ್ಮೆ ಅನಿಸುತ್ತಿದೆ. ತುಮಕೂರು ಜಿಲ್ಲೆ ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಸಾಂಸ್ಕೃತಿಕ ಶ್ರೀಮಂತಿಕೆಯ ಜಿಲ್ಲೆ. ನಾಡು, ನುಡಿ ಸೇವೆಗೆ ಇಲ್ಲಿನವರು ಮಹತ್ವದ ಕೊಡುಗೆ ನೀಡಿದ್ದಾರೆ. ಈ ನೆಲದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿರುವುದಕ್ಕೆ ಖುಷಿಯಿದೆ.
2) ಸಮ್ಮೇಳನಗಳು ಕನ್ನಡ ಕಟ್ಟುವ ಕೆಲಸ ಮಾಡುತ್ತಿವೆಯೇ?
ಡಾ. ಕರೀಗೌಡ ಬೀಚನಹಳ್ಳಿ: ಕನ್ನಡದ ಬಗೆಗಿನ ಪ್ರಜ್ಞೆ ನಮ್ಮ ನಿರೀಕ್ಷೆ ಮಟ್ಟದಲ್ಲಿ ಆಗಿದೆಯೆಂದು ಹೇಳುವುದಕ್ಕೆ ಆಗುವುದಿಲ್ಲ. ಆಗಿ ಹೋಗಿದ್ದರೆ ಇಷ್ಟೆಲ್ಲಾ ಚಳವಳಿ, ಹೋರಾಟ ಇರುತ್ತಿರಲಿಲ್ಲ. ಆದರೆ ಕನ್ನಡಕ್ಕೆ ಯಾಕೆ ಈ ಸಮಸ್ಯೆಯಿದೆ ಎಂದು ಯೋಚನೆ ಮಾಡಿದಾಗ ಗಡಿ ಸಮಸ್ಯೆಯಿದೆ, ಭಾಷಿಕರ ಸಮಸ್ಯೆಯಿದೆ. ಆದರೆ ಕೇರಳ, ತಮಿಳುನಾಡಿನಲ್ಲಿ ಭಾಷಿಕರ ಸಮಸ್ಯೆ ಇಲ್ಲ. ನಮ್ಮಲ್ಲಿ ಇನ್ನೂ ಆ ಸಮಸ್ಯೆಯಿದೆ. ಈ ಬಗ್ಗೆ ಅರಿವು ಮೂಡಿಸಲು, ಕನ್ನಡ ಪ್ರಜ್ಞೆ ಪಸರಿಸಲು ಸಾಹಿತ್ಯ ಸಮ್ಮೇಳನಗಳು ವೇದಿಕೆಯಾಗಲಿ. ಈ ಕಾರ್ಯ ನಿರಂತವಾಗಿ ಸಮ್ಮೇಳನಗಳಿಂದ ಆಗುತ್ತಿವೆ ಅನಿಸುತ್ತದೆ.
3) ಹಳೆಯ ಕತೆಗಾರರ ಕತೆಗಳನಷ್ಟೇ ಓದುತ್ತಿದ್ದಾರೆ. ಓದುಗರಲ್ಲಿ ಹೊಸ ಕತೆಗಾರರ ಕತೆಗಳ ಬಗ್ಗೆ ನಿರಾಸಕ್ತಿ ಯಾಕೆ?
ಡಾ. ಕರೀಗೌಡ ಬೀಚನಹಳ್ಳಿ: ಮೊದಲು ಒಂದು ಕೃತಿ ಪ್ರಕಟವಾದಾಗ ಆ ಕೃತಿಯನ್ನು ವಿಮರ್ಶೆ ಮಾಡುತಿದ್ಧರು. ಈಗ ಆ ವಿಮರ್ಶಕರು ಕಡಿಮೆಯಾಗಿದ್ದಾರೆ. ವಿಮರ್ಶೆಗಳು ಕಡಿಮೆಯಾಗಿವೆ. ಲೇಖಕರು ಬರೆಯುತ್ತಿದ್ದಾರೆ. ಹೊಸ ಕೃತಿಗಳು ಚರ್ಚೆಯಾಗುವಂತೆ ಮಾಧ್ಯಮಗಳು ನೋಡಿಕೊಳ್ಳುವ ಜವಾಬ್ದಾರಿಯೂ ಇದೆ. ಪ್ರಸ್ತುತ ಕಾದಂಬರಿ, ಕತೆ ಎಂದು ಅದೇ ಪ್ರಕಾರದಲ್ಲಿ ನೋಡಲು ಸಾಧ್ಯವಿಲ್ಲ. ಸಮಾಜದಲ್ಲಿ ಬದಲಾವಣೆ ಆದಂತೆ ಬರವಣಿಗೆಯಲ್ಲೂ ಪಲ್ಲಟಗೊಂಡಿದೆ.
4) ನಿಮ್ಮ ಸಾಹಿತ್ಯ ರಚನೆಗೆ ಪ್ರೇರಣೆ ಏನು?
ಡಾ. ಕರೀಗೌಡ ಬೀಚನಹಳ್ಳಿ: 16ನೇ ವಯಸ್ಸಿಗೆ ಬೆಂಗಳೂರಿಗೆ ಓದಲು ಹೋದಾಗ ಸಮಾಜವಾದಿ ಚಳವಳಿ, ಬೂಸ, ಗೋಕಾಕ್ ಚಳವಳಿಗೆ ಸೇರಿಕೊಂಡೆ. ಚಳವಳಿಗಳಿಂದ ಲಂಕೇಶ್, ತೇಜಸ್ವಿ, ಅನಂತಮೂರ್ತಿ ಅವರ ಸಂಪರ್ಕ ಸೇರಿದಂತೆ ಕುವೆಂಪು ಅವರ ವಿಚಾರಧಾರೆಯ ಪ್ರಭಾವಗಳೂ ನನ್ನನ್ನು ರೂಪಿಸಿವೆ. ನನ್ನ ಬರವಣಿಗೆಯಲ್ಲಿ ಹಳ್ಳಿಯ ಬದುಕೇ ಹೆಚ್ಚು ಮುನ್ನೆಲೆಗೆ ಬರುತ್ತದೆ. ಪ್ರತಿ ಪಾತ್ರಗಳು ಲೋಹಿಯಾ, ಲೆನಿನ್, ಮಾರ್ಕ್ಸ್, ಟಾಲ್ಸ್ಟಾಯ್ ವಿಚಾರಗಳನ್ನು ಪ್ರತಿನಿಧಿಸುತ್ತವೆ. ನನ್ನ ಕತೆಗಳು ಹಳ್ಳಿಯ ಅನುಭವದಿಂದಲೇ ರೂಪುಗೊಂಡವು. ಆದರೆ ಮುಂದಿನ ಪೀಳಿಗೆಗೆ ಆ ಅನುಭವ ಸಿಗುವುದು ಅನುಮಾನ. ಯಾಕೆಂದರೆ ನಮ್ಮ ಮಕ್ಕಳಿಗೇ ಅಂತ ಗ್ರಾಮೀಣ ಬದುಕಿನ ಅನುಭವವಿಲ್ಲ.
5) ಗಡಿನಾಡು ಕನ್ನಡಿಗರು ಮತ್ತು ಬಿಕ್ಕಟ್ಟುಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಡಾ. ಕರೀಗೌಡ ಬೀಚನಹಳ್ಳಿ: ಗಡಿ ಸಮಸ್ಯೆ ಇವತ್ತಿನದಲ್ಲ. ಭಾಷಾವಾರು ಪ್ರಾಂತ್ಯ ರೂಪುಗೊಂಡಾಗಿನಿಂದ ಸಮಸ್ಯೆಯಿದೆ. ಕರ್ನಾಟಕದಲ್ಲಿ ಹಲವು ಕನ್ನಡಗಳಿವೆ. ಅದು ಸಾಹಿತ್ಯ ಇತಿಹಾಸದಿಂದಲೂ ಗುರುತಿಸಬಹುದು. ಹಾಗೆ ತುಮಕೂರು ಜಿಲ್ಲೆಯಲ್ಲೂ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯಲ್ಲಿ ಕನ್ನಡ ಭಾಷೆಯಿದೆ. ಇದು ಕನ್ನಡದ ವೈಶಿಷ್ಟ್ಯವೂ ಹೌದು. ಗಡಿ ಭಾಗದಲ್ಲಿನ ಕನ್ನಡ ಶಾಲೆಗಳ ಬಲವರ್ಧನೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕು. ಹಲವು ಸುಧಾರಿತ ಕ್ರಮ ಕೈಗೊಳ್ಳಬೇಕು.
6) ಕನ್ನಡ ಶಾಲೆಗಳ ಸುಧಾರಣೆಗೆ ಸರ್ಕಾರಕ್ಕೆ ಸಲಹೆ ಏನು?
ಡಾ. ಕರೀಗೌಡ ಬೀಚನಹಳ್ಳಿ: ನೂರು ವರ್ಷ ತಲುಪಿರುವ ಸರ್ಕಾರಿ ಶಾಲೆಗಳು ಜೀರ್ಣಾವಸ್ಥೆಯಲ್ಲಿವೆ. ಅವುಗಳನ್ನು
ಜೀರ್ಣೋದ್ಧಾರ ಮಾಡಬೇಕು. ಕೆಲವು ಶಾಲೆಗಳಲ್ಲಿ ಮೇಷ್ಟ್ರುಗಳು ಇದ್ದರೆ ವಿದ್ಯಾರ್ಥಿಗಳಿರುವುದಿಲ್ಲ, ವಿದ್ಯಾರ್ಥಿಗಳಿದ್ದರೆ ಕಟ್ಟಡ ಇರಲ್ಲ. ಈ ಎಲ್ಲ ಗೊಂದಲ ವೈರುಧ್ಯಗಳ ನಡುವೆಯೂ ಶಿಕ್ಷಣ ನೀಡುತ್ತ ಬರಲಾಗಿದೆ. ಕರ್ನಾಟಕದಲ್ಲಿ ಮಾತೃಭಾಷೆಯೇ ಸಾರ್ವಭೌಮ. ಹಾಗಾಗಿ ಕನ್ನಡ ಶಾಲೆಗಳ ಬಲವರ್ಧನೆಗೆ ಹೆಚ್ಚಿನ ಗಮನ ಕೊಡಬೇಕು. ಪೂರ್ಣ ಪ್ರಮಾಣದ ಶಿಕ್ಷಕರನ್ನು ನೇಮಕ ಮಾಡಬೇಕು. ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತರಬೇಕು.
7) ಸಾಹಿತ್ಯ ಸಮ್ಮೇಳನದಲ್ಲಿ ಆಹಾರ ಸಂಸ್ಕೃತಿ ಬಗ್ಗೆ ಈ ಹಿಂದೆ ಚರ್ಚೆಯಾಗಿತ್ತು. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಡಾ. ಕರೀಗೌಡ ಬೀಚನಹಳ್ಳಿ: ಆಹಾರ ಎಂಬುದು ವ್ಯಕ್ತಿಯ ವೈಯಕ್ತಿಕ ವಿಚಾರ. ಅದನ್ನು ಪ್ರದರ್ಶನ ಮಾಡುವ ಅಗತ್ಯವಿಲ್ಲ. ಆಹಾರ ವಿಚಾರದಲ್ಲಿ ನಾನು ಯಾವುದೇ ಆಹಾರಕ್ಕೂ ವಿರೋಧವಿಲ್ಲ.
8) ಓದು ಮತ್ತು ಬರಣಿಗೆಯಲ್ಲಿ ತೊಡಗಿಸಿಕೊಳ್ಳುವ ಯುವಜನತೆಗೆ ನಿಮ್ಮ ಸಲಹೆ ಏನು?
ಡಾ. ಕರೀಗೌಡ ಬೀಚನಹಳ್ಳಿ: ಬರೆದ ತಕ್ಷಣ ಪ್ರಕಟವಾಗಬೇಕು ಎಂಬ ತುದಿಗಾಲಿನ ನಡಿಗೆ ಬೇಡ. ಬರೆದು ವಿಚಾರಗಳನ್ನು ಮಾಗಿಸಿ ಓದುಗರ ಮುಂದೆ ತರಬೇಕು. ಮುಖ್ಯವಾಗಿ ನಮ್ಮ ಪರಂಪರೆ ಸಾಹಿತ್ಯಗಳನ್ನು ಅಧ್ಯಯನ ಮಾಡಿ ಮನನ ಮಾಡಿಕೊಂಡು ಗತದ ಪಾಠ ಭವಿಷ್ಯದ ನೋಟವನ್ನು ಕಟ್ಟಬೇಕು. ಯುವ ಬರಹಗಾರರಿಗೆ ಮತ್ತು ಓದುಗರಿಗೆ ತಾಳ್ಮೆ ಬೇಕು. ನಿರಂತರ ಓದೇ ಉತ್ತಮ ಬರವಣಿಗೆಯ ಜೀವಾಳ ಇದನ್ನು ಅರ್ಥ ಮಾಡಿಕೊಳ್ಳಬೇಕು.
ಇದನ್ನೂ ಓದಿದ್ದೀರಾ? ಜನಾಂದೋಲನವಾಗುತ್ತಿರುವ ವಿಜಯಪುರದ ಪಿಪಿಪಿ ವಿರೋಧಿ ಹೋರಾಟ
ಈ ಸಂದರ್ಶನದಲ್ಲಿ ನಾಡು-ನುಡಿಯ ಬಗ್ಗೆ ಡಾ. ಕರೀಗೌಡ ಬೀಚನಹಳ್ಳಿ ಅವರ ಮನದ ಮಾತುಗಳು ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಮತ್ತೊಮ್ಮೆ ನೆನಪಿಸುತ್ತವೆ. ಅವರ ಸಾಹಿತ್ಯ ಕೃಷಿಯು ಭವಿಷ್ಯದಲ್ಲಿ ಇನ್ನಷ್ಟು ಕನ್ನಡ ಪ್ರೇಮಿಗಳನ್ನು ಸೃಷ್ಟಿಸಲಿ, ಕನ್ನಡ ಸಾಹಿತ್ಯದ ಬೆಳವಣಿಗೆಗೆ ದಾರಿದೀಪವಾಗಲಿ





