ಮಧುಗಿರಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸ್ನಾತಕ –ಸ್ನಾತಕೋತ್ತರ ವಿದ್ಯಾರ್ಥಿಗಳು ಬೆಂಗಳೂರಿನ ರಾಜಾಜಿನಗರ ದಲ್ಲಿರುವ ಕರ್ನಾಟಕ ಸರ್ಕಾರದ ಸಾರ್ವಜನಿಕ ವಲಯದ ಸಂಸ್ಥೆಯಾದ ಕರ್ನಾಟಕ ಸಾಬೂನು ಮತ್ತು ಡಿಟರ್ಜೆಟ್ಸ್ ಲಿಮಿಟೆಡ್ (ಕೆ ಎಸ್ ಡಿ ಎಲ್) ಗೆ ಕೈಗಾರಿಕ ಭೇಟಿ ನೀಡಿದರು.
ಕೆ ಎಸ್ ಡಿ ಎಲ್ ನ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಶಾಂತ್.ಪಿ.ಕೆ. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಸಂಸ್ಥೆಯು ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಅಗ್ರಮಾನ್ಯ ಸ್ಥಾನ ಪಡೆದಿದ್ದು, ಸಾಬೂನು ಡಿಟರ್ಜೆಂಟ್ಸ್ ಮತ್ತು ವೈಯುಕ್ತಿಕ ಬಳಕೆಯ ಉತ್ಪನ್ನಗಳನ್ನು ತಯಾರಿಸುತ್ತಿದ್ದು, ಸರ್ ಎಂ. ವಿಶ್ವೇಶ್ವರಯ್ಯ ಹಾಗೂ ಕೃಷ್ಣರಾಜ ಒಡೆಯರ್ ಮಾರ್ಗದರ್ಶನದಲ್ಲಿ ಅಭಿವೃದ್ದಿಯಾಯಿತು, ಪ್ರಸ್ತುತ ಸಾಬೂನು,ಚಂದನ ಎಣ್ಣೆ, ಡಿಟರ್ಜೆಂಟ್ಸ್, ಟಾಲ್ಕಂ ಪೌಡರ್ , ಹ್ಯಾಂಡ್ ವಾಶ್ ಹಾಗೂ ಅಗರ ಬತ್ತಿ ಮುಂತಾದ ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಿದ್ದು, ಮೈಸೂರು ಸ್ಯಾಂಡಲ್ ಸಾಬೂನಿಗೆ ಭೌಗೋಳಿಕ ಸೂಚಕ ಟ್ಯಾಗ್ ದೊರೆತ್ತಿದ್ದು, ಸಂಸ್ಥೆಗೆ ನೂರು ವರ್ಷಕ್ಕಿಂತ ಹೆಚ್ಚು ಇತಿಹಾಸವಿದ್ದು, ಬೆಂಗಳೂರು, ಮೈಸೂರು ಮತ್ತು ಶಿವಮೊಗ್ಗದಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿದ್ದು, ಕರ್ನಾಟಕದ ಅರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಗೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದರು.
ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ರಂಜಿತಾ ಬಿ.ಆರ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ಕೈಗಾರಿಕಾ ಭೇಟಿಯಿಂದಾಗಿ ಪ್ರಾಯೋಗಿಕ ಜ್ಞಾನ ಪಡೆಯಲು, ಉದ್ಯಮದ ಕಾರ್ಯಪದ್ದತಿ ತಿಳಿಯುವಿಕೆ, ಉದ್ಯೋಗ ಅವಕಾಶಗಳ ಅರಿವು , ನೈಪುಣ್ಯಗಳ ಅಭಿವೃದ್ದಿ , ತಜ್ಞರ ಜೊತೆ ಸಂವಾದ, ಪಠ್ಯ ಮತ್ತು ಉದ್ಯಮದ ನಡುವೆ ಸಂಪರ್ಕ ಹಾಗೂ ನೈಜ ಪರಿಸರದಲ್ಲಿ ಕಲಿಯುವ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂದರು.
ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಲೀಲಾವತಿ ಹೆಚ್ ಮಾತನಾಡಿ ಕೈಗಾರಿಕ ಭೇಟಿ ವಿದ್ಯಾರ್ಥಿಗಳ ಶಿಕ್ಷಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ, ವಿಶೇಷವಾಗಿ ವಾಣಿಜ್ಯ, ನಿರ್ವಹಣಾ ಮತ್ತು ತಾಂತ್ರಿಕ ವಿಧ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನವನ್ನು ನೀಡುವ ಸಾದನವಾಗಿದ್ದು, ಕೇವಲ ಪ್ರವಾಸವಾಗಿರದೆ ಭವಿಷ್ಯದ ವೃತ್ತಿಜೀವನಕ್ಕೆ ದಿಕ್ಕು ತೋರಿಸುವ ಮಹತ್ವದ ಅನುಭವವಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕುಮಾರ್ ಕೆ.ಎಸ್, ಪ್ರಾಧ್ಯಾಪಕರಾದ ಮಂಜುನಾಥ್ ಬಿ. ಡಾ.ದುರ್ಗಪ್ಪ, ರಾಮಮೂರ್ತಿ, ಡಾ.ನಾಗರಾಜು, ಸಂಜೀವಮೂರ್ತಿ, ಡಾ.ಲತಾ, ಮುರುಳಿಧರ್, ಡಾ.ಮಂಜುನಾಥ್ ಬುಡಸನಹಳ್ಳಿ, ವ್ಯವಾಸ್ತಾಪಕಿ ಚಂದ್ರಕಲಾ, ರಂಗಸ್ವಾಮಯ್ಯ ಹಾಜರಿದ್ದರು.





