ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿಯನ್ನು ನೀಡಬೇಕೆಂದು ಒತ್ತಾಯಿಸಿ ಸರಕಾರಕ್ಕೆ ಶಿಫಾರಸ್ಸು ಮಾಡಲು ಕೋರಿ ಶಿರಾ ತಾಲೂಕು ಮಾದಿಗ ಮಹಾಸಭಾದ ವತಿಯಿಂದ ತಹಶೀಲ್ದಾರ್ ಆನಂದ್ ಕುಮಾರ್ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ಶಿರಾ ತಾಲೂಕು ಮಾದಿಗ ಮಹಾಸಭಾದ ಅಧ್ಯಕ್ಷ ಪಿ.ಬಿ ನರಸಿಂಹಯ್ಯ, ಸುಮಾರು 35 ವರ್ಷಗಳಿಂದ ಪರಿಶಿಷ್ಟ ಜಾತಿಯಲ್ಲಿ ಇರುವ 101 ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಮಾದಿಗ ಸಮುದಾಯದಿಂದ ಹೋರಾಟ ನಡೆಯುತ್ತಿದೆ. ಇದರ ಹಿನ್ನೆಯಲೆಯಲ್ಲಿ ಸುಪ್ರೀಂ ಕೋರ್ಟ್ 2024ರ ಆ. 1 ರಂದು ಸ್ಪಷ್ಟ ಆದೇಶ ನೀಡಿ, ಆಯಾ ರಾಜ್ಯ ಸರಕಾರಗಳೇ ಪರಿಶಿಷ್ಟ ಜಾತಿಯಲ್ಲಿನ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕ ದತ್ತಾಂಶಗಳನ್ನು ಕ್ರೂಢೀಕರಣ ಮಾಡಿ ಅದರ ಆಧಾರದ ಮೇಲೆ ಒಳಮೀಸಲಾತಿ ಕಲ್ಪಿಸುವಂತೆ ತಿಳಿಸಿದೆ. ಇದರ ಸಂಬಂಧವಾಗಿ ಸರಕಾರ ಜಸ್ಟೀಸ್ ನಾಗಮೋಹನ್ದಾಸ್ ರವರ ಆಯೋಗ ರಚನೆ ಮಾಡಿ ಅವರಿಂದ ಪಡೆದ ದತ್ತಾಂಶದ ವರದಿಯ ಆಧಾರದ ಮೇಲೆ ಮಾದಿಗ ಸಂಬಂಧಿತ ಜಾತಿಗಳಿಗೆ-06, ಹೊಲೆಯ ಸಂಬಂಧಿತ ಜಾತಿಗಳಿಗೆ-06 ಮತ್ತು ಸ್ಪರ್ಶ ಜಾತಿಗಳೊಂದಿಗೆ ಅಲೆಮಾರಿ ಜನಾಂಗಗಳನ್ನು ಸೇರಿಸಿ -05ರ ಅನುಪಾತದಲ್ಲಿ ಒಳಮೀಸಲಾತಿ ಜಾರಿ ಮಾಡಲು ತೀರ್ಮಾನ ಮಾಡಿತ್ತು. ಆದರೆ ತದನಂತರ ಮೀಸಲಾತಿ ಪ್ರಮಾಣ ಶೇಕಡ 50 ಕ್ಕಿಂತ ಜಾಸ್ತಿಯಾಗದಂತೆ ಉದ್ಯೋಗ ನೇಮಕಾತಿ ಮಾಡಬೇಕೆಂದು ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿರುವುದರಿಂದ ಅದರಂತೆಯೇ ಶೇ. 50 ರಡಿಯಲ್ಲಿ ಪರಿಶಿಷ್ಟ ಜಾತಿಗಳಿಗೆ ಶೇಕಡ 15 ರ ಮೀಸಲಾತಿಯಲ್ಲಿಯೇ ಒಳಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿದರು.
ಸರಕಾರ ಒಳಮೀಸಲಾತಿ ಜಾರಿಯನ್ನು ಕೈಬಿಟ್ಟು 56432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿರುವುದರಿಂದ ಪರಿಶಿಷ್ಟ ಜಾತಿಗಳಿಗೆ ಅನ್ಯಾಯವಾಗುತ್ತಿದೆ. ಅದರಲ್ಲೂ ಮಾದಿಗ ಸಮುದಾಯಕ್ಕೆ ತೀವ್ರತರವಾದ ಅನ್ಯಾಯವಾಗುತ್ತಿದೆ. ಆದ್ದರಿಂದ ಈ ಅನ್ಯಾಯವನ್ನು ಸರಿಪಡಿಸಿ 56432 ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಜಾರಿಮಾಡಿ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಶಿರಾ ತಾಲೂಕು ಮಾದಿಗ ಮಹಾಸಭಾದ ಕಾರ್ಯದರ್ಶಿ ನರಸಿಂಹಮೂರ್ತಿ, ಡಾ.ದ್ವಾರನಕುಂಟೆ ಲಕ್ಷö್ಮಣ, ಶಾಸಮರು ಮೂರ್ತಿ, ಜಯರಾಮಕೃಷ್ಣ, ಟಿ.ಲೋಕೇಶ್, ಬೀರನಹಳ್ಳಿ ಹನುಮಂತರಾಯಪ್ಪ, ಕರೆಯಾಗಲಹಳ್ಳಿ ಮೂರ್ತಿ, ಹನುಮಂತರಾಯಪ್ಪ, ಹೊನ್ನೇನಹಳ್ಳಿ ಚಂದ್ರಶೇಖರ್, ಶಿವಣ್ಣ ಸೇರಿದಂತೆ ಹಲವರು ಹಾಜರಿದ್ದರು.





