ಮೆಟ್ರಿಕ್ ಫೇಲ್ ಆಗಿದ್ದ ಡಿ ವಿ ಗುಂಡಪ್ಪನವರು ಮುಂದೆ ಕನ್ನಡ ಸಾಹಿತ್ಯಕ್ಕೆ ಅಪಾರ ಸೇವೆ ಸಲ್ಲಿಸಿ ಆಧುನಿಕ ಸರ್ವಜ್ಞ ಎನಿಸಿಕೊಂಡರೆ, ಪತ್ರಿಕೋದ್ಯಮದಲ್ಲಿನ ಅವರ ಸಾಧನೆಗೆ ಕನ್ನಡ ಪತ್ರಿಕೋದ್ಯಮದ ಭೀಷ್ಮ ಎಂದು ಕರೆಸಿಕೊಳ್ಳುವಂತೆ ಬೆಳೆದದ್ದು ನಿಜಕ್ಕೂ ಆದರ್ಶನೀಯ ಎಂದು ತಿಪಟೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ. ಬಸವರಾಜಪ್ಪ ತಿಳಿಸಿದರು.
ತಿಪಟೂರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಪಿಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಮಂಗಳವಾರ ಕಾಲೇಜು ಪತ್ರಿಕೋದ್ಯಮ ವಿಭಾಗ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ತಾಲೂಕು ಘಟಕ ತಿಪಟೂರು ಸಹಯೋಗದೊಂದಿಗೆ ನಡೆದ ಪತ್ರಕರ್ತರ ಸಂಘದ ಸಂಸ್ಥಾಪಕರಾದ ಡಿ ವಿ ಗುಂಡಪ್ಪನವರ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಡಿವಿಜಿ ಅವರ ಬದುಕು ಬರಹದ ಕುರಿತು ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಡುತ್ತ, ಗುಂಡಪ್ಪನವರು ಬಡತನ ಕುಟುಂಬದಿಂದ ಬಂದು, ಮೆಟ್ರಿಕ್ ಫೇಲ್ ಆಗಿಯೂ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸುವ ಮಟ್ಟಿಗೆ ಬೆಳೆದದ್ದು ವಿದ್ಯಾರ್ಥಿಗಳಿಗೆ ಮಾದರಿ. ಅವರ ಆದರ್ಶಗಳ ಮೇಲೆಯೇ ಇಂದು ತಿಪಟೂರು ಕಾನಿಪ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಿಪಟೂರು ಅಧ್ಯಕ್ಷ ದಯಾನಂದ್ ಟಿ.ಎಸ್ ಮಾತನಾಡಿ, ಪತ್ರಿಕೋದ್ಯಮ ಡಿವಿಜಿ ಅವರಿಗೆ ಕೇವಲ ವೃತ್ತಿಯಾಗಿರಲಿಲ್ಲ, ಅದು ಜನತೆಯಲ್ಲಿ ಜಾಗೃತಿ ಮೂಡಿಸುವ ಮಾರ್ಗವಾಗಿತ್ತು. ಆದರೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪತ್ರಿಕೆಗಳು ನೈಜತೆಯ ಅರಿವಿರದೇ ಸುದ್ದಿ ಬಿತ್ತರಿಸಿ, ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿವೆ ಎಂದು ವಿಷಾದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಶಶಿಕುಮಾರ್.ಎಚ್.ಸಿ ಅವರು, ವಿದ್ಯಾರ್ಥಿಗಳು ದಿನನಿತ್ಯ ಪತ್ರಿಕೆಗಳನ್ನು ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು. ಇದರಿಂದ ನಿಮ್ಮ ಜ್ಞಾನವನ್ನು ವೃದ್ಧಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಹೆಚ್ಚು ಸಹಾಯವಾಗುತ್ತದೆ. ನಾನು ಕೂಡ ನಿತ್ಯ ಕೈಸಿಗುವ ಪತ್ರಿಕೆಗಳಲ್ಲಿನ ಸುದ್ದಿ ಮತ್ತು ಸಂಪಾದಕೀಯ ವಿಭಾಗ ಓದುತ್ತಿರುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ತಿಪಟೂರು ಕಾನಿಪ ಪ್ರಧಾನ ಕಾರ್ಯದರ್ಶಿ ಸಿದ್ದೇಶ್ವರ್, ಉಪಾಧ್ಯಕ್ಷ ಪ್ರಶಾಂತ್, ಖಜಾಂಚಿ ಕುಮಾರಸ್ವಾಮಿ, ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ಶಿವಕುಮಾರ.ಸಿ.ಜಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಹಣಮಂತ ಕಾಂಬಳೆ, ಕನ್ನಡ ವಿಭಾಗದ ಮುಖ್ಯಸ್ಥೆ ಸ್ಮಿತಾ, ಸಮಾಜ ಕಾರ್ಯ ವಿಭಾಗದ ಗಂಗಾಧರ್ ಸೇರಿದಂತೆ ವಿವಿಧ ವಿಭಾಗಗಳ ಪ್ರಾಧ್ಯಾಪಕರು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





