ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವರು (ಆಡಳಿತ) ಆದೇಶ ಪಾಲಿಸದೆ ಮತ್ತೆಮತ್ತೆ ಸಮರ್ಥನೆ ಮಾಡಿಕೊಂಡು ಸರ್ಕಾರಕ್ಕೆ ಪತ್ರ ಬರೆದಿರುವುದು ಹಾಗೂ ಕುಲಪತಿ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಲೋಪವೆಸಗಿದ ಹಿನ್ನೆಲೆ ತುಮಕೂರು ವಿಶ್ವವಿದ್ಯಾಲಯದಲ್ಲಿ 8 ಮಂದಿ ಬೋಧಕೇತರ ಸಿಬ್ಬಂದಿಗೆ ನೀಡಿದ್ದ ಬಡ್ತಿ ಪ್ರಕರಣದ ತನಿಖೆ ನಡೆಸಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ.ಕೃಷ್ಣಭಟ್ ನೇತೃತ್ವದ ಸಮಿತಿ ರಚಿಸಿ ರಾಜ್ಯಪಾಲರು ಆದೇಶಿಸಿದ್ದಾರೆ. ತನಿಖೆ ನಡೆಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ರಾಜ್ಯಪಾಲರು ಆದೇಶದಲ್ಲಿ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ವಿಶ್ವವಿದ್ಯಾಲಯದ ಕಾರ್ಯನಿರ್ವಹಣೆಗೆ ಪ್ರಥಮ ದರ್ಜೆ ಸಹಾಯಕರ 16 ಹುದ್ದೆಗಳ ನೇಮಕಾತಿಗೆ ಸರ್ಕಾರ ಒಪ್ಪಿಗೆ ನೀಡಿತ್ತು. ಅದರಲ್ಲಿ 8 ಹುದ್ದೆಗಳಿಗೆ ಬಡ್ತಿ ನೀಡುವುದು. ಇನ್ನುಳಿದ 8 ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಆದೇಶದಲ್ಲಿ ತಿಳಿಸಲಾಗಿದೆ. ಈ ನಿಯಮವನ್ನು ವಿಶ್ವವಿದ್ಯಾನಿಲಯ
ಪಾಲನೆ ಮಾಡಿಲ್ಲ. ಪ್ರಥಮ ದರ್ಜೆ ಸಹಾಯಕರ 8 ಹುದ್ದೆಗಳಿಗೆ ನೇರ ನೇಮಕಾತಿ ಮಾಡದೆ 01-02-2021 ರಂದು ಬಡ್ತಿ ನೀಡಿ ಆದೇಶಿಸಲಾಗಿತ್ತು. ಆ ಸಮಯದಲ್ಲಿ ಪ್ರೊ. ಕೆ. ಶಿವಚಿತ್ತಪ್ಪ ಆಡಳಿತ ವಿಭಾಗದ ಕುಲಸಚಿವರಾಗಿದ್ದರು.
ಈ ಪ್ರಕರಣ ಬೆಳಕಿಗೆ ಬಂದ ತಕ್ಷಣ ಉನ್ನತ ಶಿಕ್ಷಣ ಇಲಾಖೆ ಹಂತದಲ್ಲಿ ನಡೆಸಿದ ತನಿಖೆಯಲ್ಲಿ ನಿಯಮ ಪಾಲನೆ ಮಾಡದೆ ಬಡ್ತಿ ನೀಡಿರುವುದು ಕಂಡು ಬಂದಿತ್ತು. ಎಲ್ಲ 8 ಮಂದಿಗೂ ನೀಡಿದ್ದ ಬಡ್ತಿಯನ್ನು ರದ್ದುಪಡಿಸುವಂತೆ 2023 ಜನವರಿಯಲ್ಲಿ ಉನ್ನತ ಶಿಕ್ಷಣ ಇಲಾಖೆ ಆದೇಶಿಸಿತ್ತು. ಸರ್ಕಾರದ ಆದೇಶದಂತೆ ತಕ್ಷಣವೇ ಹಿಂಬಡ್ತಿ ನೀಡಿ, ಹೆಚ್ಚುವರಿಯಾಗಿ ಪಾವತಿಸಿದ್ದ ವೇತನವನ್ನು ವಾಪಸ್ ಪಡೆದುಕೊಳ್ಳಬೇಕಿತ್ತು. ಉನ್ನತ ಶಿಕ್ಷಣ ಇಲಾಖೆ ಆದೇಶವನ್ನು ಕುಲಪತಿ, ಕುಲಸಚಿವರು ಈವರೆಗೂ ಜಾರಿಗೆ ತಂದಿಲ್ಲ.
ತಾನು ನೀಡಿದ್ದ ಆದೇಶ ಪಾಲನೆಯಾಗದ ಬಗ್ಗೆ ಉನ್ನತ ಶಿಕ್ಷಣ ಇಲಾಖೆ ಅಸಮಾಧಾನ ವ್ಯಕ್ತಪಡಿಸಿತ್ತು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೋರಿ ಇಲಾಖೆಯು ರಾಜ್ಯಪಾಲರಿಗೆ ಪ್ರಸ್ತಾವ ಸಲ್ಲಿಸಿತ್ತು. ಇದರ ಆಧಾರದ ಮೇಲೆ ತನಿಖೆಗೆ ಸಮಿತಿ ರಚಿಸಿ ರಾಜ್ಯಪಾಲರು ಆದೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ
ಬಡ್ತಿ ಪಡೆದ ನೌಕರರು
ನೌಕರರಾದ ಬಿ.ಎಸ್.ಗಾಯತ್ರಿಬಾಯಿ, ಪ್ರೇಮಾ ಪ್ಯಾಟಿಗೌಡರ್,ಎನ್.ಮಂಜುನಾಥ, ಆರ್.ಪರಪ್ಪ, ಎನ್.ರಾಘವೇಂದ್ರ, ಆಯಿಶಾತಜೀನ್. ಡಿ.ಎನ್. ರವಿ, ವಿ.ದಯಾನಂದ ಅವರು ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಬಡ್ತಿ ಪಡೆದುಕೊಂಡಿದ್ದರು





