ಜನಗಣತಿಯ ಅಂಕಿ-ಅಂಶಗಳೇ ಅಭಿವೃದ್ಧಿಗೆ ಆಧಾರವಾಗಿರುವುದರಿಂದ ಗಣತಿದಾರರು ಜವಾಬ್ದಾರಿಯಿಂದ ಗಣತಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ತುಮಕೂರು ಮಹಾನಗರ ಪಾಲಿಕೆಯಲ್ಲಿ ಸೋಮವಾರ ಭಾರತ ಜನಗಣತಿ-2027ರ ನಿಯೋಜಿತ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಜನಗಣತಿಯ ಅಂಕಿ-ಅಂಶಗಳೇ ಆಧಾರವಾಗಿರುತ್ತದೆ. ಸರ್ಕಾರ ರೂಪಿಸುವ ಯೋಜನೆಗಳು, ಕ್ಷೇತ್ರ ವಿಂಗಡಣೆ ಎಲ್ಲವೂ ಜನಸಂಖ್ಯೆ ಆಧಾರದ ಮೇಲೆಯೇ ನಿರ್ಧಾರವಾಗುತ್ತದೆ. ಆದ್ದರಿಂದ ಈ ಕಾರ್ಯದಲ್ಲಿ ನಿಯೋಜಿತರಾದ ಅಧಿಕಾರಿ ಸಿಬ್ಬಂದಿ ಯಾವುದೇ ಪೂರ್ವಗ್ರಹವಿಲ್ಲದೆ, ಸರಿಯಾದ ಮಾಹಿತಿಯನ್ನು ಕ್ರೋಢೀಕರಿಸಬೇಕು ಎಂದರು.
1948ರ ಜನಗಣತಿ ಕಾಯ್ದೆಯ ಪ್ರಕಾರ ಜನಗಣತಿ ಕಾರ್ಯವನ್ನು ಕೈಗೊಳ್ಳಬೇಕಾಗಿದೆ. 1972ರಲ್ಲಿ ಮೊದಲ ಗಣತಿ ನಡೆದಿದ್ದು, ಅದರ ಬಳಿಕ ಜನಸಂಖ್ಯೆಯ ನಿಖರ ಮಾಹಿತಿಯನ್ನು ಸಂಗ್ರಹಿಸುವುದು ಸರ್ಕಾರದ ಯೋಜನೆಗಳ ಜಾರಿಗೆ ಪ್ರಮುಖವಾಗಿದೆ ಎಂದು ತಿಳಿಸಿದರು.
ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಹಾಗೂ ಅಲೆಮಾರಿ ಸಮುದಾಯಗಳಿಗೆ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದಕ್ಕಾಗಿ ಜಿಲ್ಲೆಯ ಮಟ್ಟದಲ್ಲಿ ಸಮಗ್ರ ಮಾಹಿತಿ ಅಗತ್ಯವಿದೆ. ಜನಗಣತಿ ಮೂಲಕ ಸಂಗ್ರಹವಾಗುವ ಅಂಕಿ-ಅಂಶಗಳು ಅದಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಇದಲ್ಲದೆ ಲೋಕಸಭೆ, ವಿಧಾನಸಭೆ, ಗ್ರಾಮ ಪಂಚಾಯ್ತಿ ಕ್ಷೇತ್ರಗಳ ರಚನೆಯೂ ಜನಸಂಖ್ಯೆ ಆಧಾರಿತವಾಗಿರುವುದರಿಂದ ಅಧಿಕಾರಿಗಳು ಜನಗಣತಿ ಕಾರ್ಯವನ್ನು ನಿಖರವಾಗಿ ಹಾಗೂ ಸಮರ್ಪಕವಾಗಿ ನಡೆಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಸಂವಹನ, ವಿಶ್ವಾಸಾರ್ಹತೆ ಹಾಗೂ ಮಾಹಿತಿ ಸಂಗ್ರಹ ಗಣತಿಯ ಪ್ರಮುಖ ಅಂಶಗಳು, ಈ ಹಿನ್ನೆಲೆಯಲ್ಲಿ ದೇಶದ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಹಾಗೂ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಗಣತಿ ಕಾರ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕಾಗಿದೆ.
ಈ ಕಾರ್ಯಾಗಾರ ನಾಯಕತ್ವ ವಹಿಸಿಕೊಳ್ಳಬೇಕಾದ ಕಾರ್ಯಕ್ರಮವಾಗಿದ್ದು, ಆರಂಭದಲ್ಲಿ ನಿರಾಸಕ್ತಿ ಹುಟ್ಟಿಸಬಹುದು. ಆದರೆ ಜವಾಬ್ದಾರಿ ಮತ್ತು ಕರ್ತವ್ಯ ಎಂಬುದನ್ನು ಮರೆಯಬಾರದು. ತಮ್ಮ ಸಂದೇಹಗಳನ್ನು ಇಲ್ಲಿಯೇ ಬಗೆಹರಿಸಿಕೊಂಡು ಹೋಗಬೇಕು ಎಂದರು.
ಕಾರ್ಯಾಗಾರದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ಜನಗಣತಿ ಸಂಪನ್ಮೂಲ ವ್ಯಕ್ತಿಗಳಾದ ಆರ್.ಎಸ್. ಶರ್ಮಾ, ಭವ್ಯ ಇದ್ದರು.





