ಭೈರಪ್ಪನವರನ್ನು ಒಂದು ಕಡೆಗೆ ತತ್ತ್ವಶಾಸ್ತ್ರ ಮತ್ತೊಂದು ಕಡೆಗೆ ಅನುಭವವನ್ನು ಅದ್ಭುತವಾಗಿ ವಿವರಿಸಬಹುದಾದ ನಾಟಕ, ಕಥೆ ಇತ್ಯಾದಿಗಳು ಪ್ರಭಾವಿಸಿದ್ದವು. ಭಾಷೆ, ಕಥನ ಶೈಲಿ, ಕಥಾಪ್ರವೇಶ, ಸರಾಗವಾಗಿ ಓದಿಸಿಕೊಳ್ಳುವ ಕಥನಕ್ರಮಗಳು ಭೈರಪ್ಪನವರಿಗೆ ಅನಾಯಾಸವಾಗಿ ದಕ್ಕಿವೆ ಎಂದು ಬೆಳ್ಳಾವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಶ್ರೀಧರ ಸಿ ಆರ್ ಹೇಳಿದರು
ತುಮಕೂರು ನಗರದ ಎಸ್ಎಸ್ ಪುರಂನ ಅಂಗಳ ಕಮ್ಯುನಿಟಿ ಟ್ರಸ್ಟ್ನಲ್ಲಿ ಆಯೋಜಿಸಲಾಗಿದ್ದ “ಕನ್ನಡ ಸಾಹಿತ್ಯ ಸಂಸ್ಕೃತಿ ಮತ್ತು ಎಸ್ ಎಲ್ ಭೈರಪ್ಪ” ಎಂಬ ವಿಷಯವನ್ನು ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ಭೈರಪ್ಪನವರ ಕೃತಿಗಳಲ್ಲಿ ಒಂದು ಸ್ಪಷ್ಟವಾಗಿ ತಾತ್ವಿಕ ನಿಲುವು ಇರುತ್ತದೆ. ತಮ್ಮ ಯಾನ ಕೃತಿಯಲ್ಲಿ ‘ಗ್ರಹಗಳನ್ನು ದಾಟಬಹುದಾದರೂ, ನಮ್ಮ ಸಂಸ್ಕೃತಿಯ ಎಲ್ಲೆಗಳನ್ನು ದಾಟಬಾರದು’ ಎಂಬಂತೆ ಚಿತ್ರಿಸುತ್ತಾರೆ. ಭೈರಪ್ಪನವರ ಈ ಗುಣ ಪಾತ್ರಗಳನ್ನು ತಮ್ಮಿಂದ ತಾವೇ ಬೆಳೆಯುವುದಕ್ಕೆ ಅವಕಾಶಮಾಡಿಕೊಡುವುದಿಲ್ಲ ಎಂದರು
ಕನ್ನಡದ ಸಾಹಿತ್ಯ ಘಟ್ಟಗಳು ಆಯಾ ಕಾಲದ ಚಳವಳಿಗಳ ಪ್ರಭಾವದಿಂದಲೇ ಬೆಳೆದಿರುವುದನ್ನು ಗಮನಿಸಬಹುದು. ಭೈರಪ್ಪ ೧೯೬೦ರಿಂದಲೇ ಬರವಣಿಗೆ ಮಾಡುತ್ತಿದ್ದರೂ, ಈ ಯಾವ ಚಳವಳಿಗಳಲ್ಲೂ ಭಾಗವಹಿಸುವುದಿಲ್ಲ. ಚಳವಳಿಗಳನ್ನು ಕುರಿತು ಭೈರಪ್ಪನವರಿಗೆ ಸಾಕಷ್ಟು ಅಸಹನೆಯೂ ಇತ್ತು. ಭೈರಪ್ಪನವರು ಶುದ್ಧ ಮತ್ತು ಸತ್ಯ ಎಂಬೆರಡು ಪದಗಳನ್ನು ಬಳಸುತ್ತಾರೆ. ನಿಜಕ್ಕೂ ಶುದ್ಧ ಸಾಹಿತ್ಯ ಎನ್ನುವುದಾಗಲಿ, ಸತ್ಯ ಎನ್ನುವುದಾಗಲಿ ಇದೆಯೇ? ಸತ್ಯವನ್ನು ಸ್ಥಾಪಿಸ ಹೊರಡುವವನ ತಲೆಯಲ್ಲಿರುವ ರಾಜಕಾರಣವೇನು? ಎಂದು ಪ್ರಶ್ನಿಸಿದರು
ಭೈರಪ್ಪನವರು ಕುಲದ ಪವೀತ್ರೀಕರಣಕ್ಕೆ ಒತ್ತುಕೊಡುತ್ತಾರೆ. ಆವರಣ ಇದೆ ಕೆಲಸವನ್ನು ಮುಕ್ತವಾಗಿ ಮಾಡುತ್ತದೆ. ಭೈರಪ್ಪನವರು ಆವರಣವನ್ನು ಒಂದು ಕಥೆಯಾಗಿ ನಮ್ಮ ಮುಂದಿಡುವ ಬದಲು, ಒಂದು ಇತಿಹಾಸವಾಗಿ, ‘ನಾನು ಹೇಳುತ್ತಿರುವುದು ಒಂದು ಅಧಿಕೃತ ಇತಿಹಾಸ’ ಎಂಬಂತೆ ಚಿತ್ರಿಸುತ್ತಾರೆ. ಇತಿಹಾಸವೂ ಅಂತಿಮವಾಗಿ ಕಥೆಯೆ, ಇತಿಹಾಸ ಒಂದು ಮುಗ್ಧವಾದ ಜೀವಿಯಲ್ಲ. ಅದಕ್ಕೆ ವರ್ತಮಾನದಲ್ಲಿ ಒಂದು ಕಾರ್ಯವಿರುತ್ತದೆ. ಯಾವುದನ್ನೇ ಆಗಲಿ ನಾವು ಆತ್ಯಂತಿಕ ಸತ್ಯವೆಂದು ಪ್ರತಿಪಾಧಿಸಲು ಹೊರಟರೆ ಸಾಕಷ್ಟು ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಭೈರಪ್ಪನವರ ಬರಹಗಳಲ್ಲಿ ಈ ಸಮಸ್ಯೆಗಳಿವೆ. ಭೈರಪ್ಪನವರ ತಾತ್ವಿಕ ನಿಲುವುಗಳನ್ನು ನಾವು ಅನುಸರಿಸುವುದು ಬೇಡ. ಇತಿಹಾಸವನ್ನು ಗಟ್ಟಿಯಾಗಿ ಅಧ್ಯಯನ ಮಾಡಿ ಅದನ್ನು ಕಥನದಲ್ಲಿ ತರುವ ಮಾದರಿ ಅನುಸರಣೀಯ. ನಾವೂ ನಮ್ಮದೇ ಇತಿಹಾಸವನ್ನು ಕಥನದಲ್ಲಿ ತರಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಂಗಳ ಟ್ರಸ್ಟ್ ನ ಅಧ್ಯಕ್ಷರಾದ ರಂಜಿತ ಎಂ ಎನ್., ಪ್ರ.ಕಾರ್ಯದರ್ಶಿ ನವೀನ್ ಕುಮಾರ್ ಪಿ.ಆರ್., ಸಂಶೋಧನಾರ್ಥಿಗಳಾದ ಗಂಗಾಧರ ಬಾಣಸಂದ್ರ, ಧನುಷ್ ಎಚ್. ಶೇಖರ್., ಮಠಪತಿ, ಹರ್ಷವರ್ಧನ ಎಂ.ವಿ., ರಂಗನಾಥ ವೈ., ಲೋಕೇಶ್, ಹರಿಕೃಷ್ಣ, ಪಾತಲಿಂಗಯ್ಯ, ಸೇರಿದಂತೆ ಹಲವರು ಹಾಜರಿದ್ದರು.





