ರಂಜಾನ್ ತಿಂಗಳಲ್ಲಿ ಆಚರಿಸುವ ಇಫ್ತಿಯಾರ್ ಕೂಟಗಳು ಜನರಲ್ಲಿ ಭಾವೈಕ್ಯತೆಯನ್ನು ಮೂಡಿಸಲು ಹಲವಾರು ಶತಮಾನಗಳಿಂದ ಕಾರಣವಾಗಿವೆ ಎಂದು ಮಾಜಿ ಸಹಕಾರ ಸಚಿವ ಹಾಗೂ ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು
ತುಮಕೂರು ನಗರದ ಎಚ್.ಎಂ.ಎಸ್ ಶಿಕ್ಷಣ ಸಂಸ್ಥೆಗಳಿಂದ ಆಯೋಜಿಸಿದ್ದ ಇಪ್ತಿಯಾರ್ ಕೂಟ ಹಾಗೂ ಕೋಮು ಸೌಹಾರ್ದ ಕೂಟದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪವಿತ್ರ ರಂಜಾನ್ ತಿಂಗಳಲ್ಲಿ ಕುರಾನ್ ಪಠಣದ ಜೊತೆಗೆ, ಧರ್ಮ ಗುರುಗಳಿಂದ ಸಮುದಾಯಕ್ಕೆ ಅಗತ್ಯವಿರುವ ಮಾರ್ಗದರ್ಶನ ದೊರೆಯುತ್ತದೆ ಎಂದರು.
ಕುವೆಂಪು ಅವರು ಹೇಳಿದಂತೆ ಕರ್ನಾಟಕ ಒಂದು ಸರ್ವ ಧರ್ಮಗಳ ಶಾಂತಿಯ ತೋಟ. ಆದರೆ ಕೆಲವರು ತಮ್ಮ ರಾಜಕೀಯ ಅಧಿಕಾರಕ್ಕಾಗಿ ಜನರ ನಡುವೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿ, ಗೊಂದಲ ಉಂಟು ಮಾಡುತ್ತಿದ್ದಾರೆ. ಇಂತಹವರ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕು. ಭಾರತ ಜಾತ್ಯಾತೀತ ರಾಷ್ಟ್ರ. ಯಾರು ಸಹ ಭೇಧ ಭಾವಕ್ಕೆ ಒಳಗಾಗಬಾರದು.ಶಾಂತಿ ಕದಡುವ ಕಿಡಿಗೇಡಿಗಳನ್ನು ಹಿಮ್ಮೆಟ್ಟಿಸುವ ಕೆಲಸವನ್ನು ನಾವೆಲ್ಲರೂ ಎಚ್ಚರಿಕೆಯಿಂದ ಮಾಡಬೇಕಾಗಿದೆ. ಮನುಷ್ಯರು ತಮ್ಮ ನಡುವೆ ಪರಸ್ಪರ ಪ್ರೀತಿ, ವಿಶ್ವಾಸದಿಂದ ಬಾಳಬೇಕೆಂಬುದು ಎಲ್ಲಾ ಧರ್ಮಗಳ ಸಾರವಾಗಿದೆ.ತಮ್ಮ ಸ್ವಾರ್ಥಕ್ಕೆ ಜನರ ನಡುವೆ ದ್ವೇಷ ಹರಡುವುದು ಹಾನಿಕರ. ಇದರ ಬಗ್ಗೆ ನಾವೆಲ್ಲರೂ ಜಾಗೃತರಾಗಿ ಇರೋಣ ಎಂದು ಕೆ.ಎನ್.ರಾಜಣ್ಣ ನುಡಿದರು.
ನಾನು ಹಾಸನ ಜಿಲ್ಲೆಯ ಉಸ್ತುವಾರಿ ಸಚಿವನಾಗಿದ್ದ ವೇಳೆ ಎರಡು ಧರ್ಮಗಳ ನಡುವೆ ಕೋಮು ಸಂಘರ್ಷ ಉಂಟಾಗುವ ಪರಿಸ್ಥಿತಿ ಎದುರಾದಾಗ,ಇಬ್ಬರು ನಾಯಕರುಗಳನ್ನು ಕರೆಯಿಸಿ,ಶಾಂತಿಯ ಮಾತುಕತೆ ನಡೆಸುವ ಮೂಲಕ ನಡೆಯಬಹು ದಾಗಿದ್ದ ದೊಡ್ಡ ಆನಾಹುತವನ್ನು ತಡೆದು, ಎಲ್ಲರೂ ಸೌಹಾರ್ಧತೆಯಿಂದ ಬದುಕುವಂತೆ ಮಾಡಿದೆ. ಆ ಕೆಲಸ ನನಗೆ ತೃಪ್ತಿ ತಂದಿದೆ.ಶಾಂತಿ ಕಡದುವವರ ವಿರುದ್ದ ಕಾನೂನು ಕ್ರಮದ ಜೊತೆಗೆ, ಪರಸ್ವರರಲ್ಲಿ ಪ್ರೀತಿ ಮತ್ತು ವಿಶ್ವಾಸ ಬೆಳೆಸುವ ಕೆಲಸವನ್ನು ನಾವು ಮಾಡಬೇಕಾಗಿದೆ ಎಂದು ಕೆ.ಎನ್.ರಾಜಣ್ಣ ನುಡಿದರು.
ಮಾಜಿ ಶಾಸಕರು, ಹೆಚ್.ಎಂ.ಎಸ್. ವಿದ್ಯಾಸಂಸ್ಥೆಯ ನಿರ್ದೇಶಕರಾದ ಡಾ.ರಫೀಕ್ ಅಹಮದ್ ಮಾತನಾಡಿ,ಇಂದು ರಂಜಾನ್ ತಿಂಗಳ 10ನೇ ದಿನದ ಉಪವಾಸವನ್ನು ನಾವೆಲ್ಲರೂ ಆಚರಿಸುತ್ತಿದ್ದೇವೆ.ಪ್ರವಾದಿಗಳಿಂದ ಈ ತಿಂಗಳು ಪವಿತ್ರ ಕುರಾನ್ ರಚಿತವಾಯಿತು ಎಂಬ ಪ್ರತೀತಿ ಇದೆ.ಬಹಳ ವರ್ಷಗಳಿಂದ ಹೆಚ್.ಎಂ.ಎಸ್ ವಿದ್ಯಾಸಂಸ್ಥೆ ಈ ಕೆಲಸವನ್ನು ಮಾಡುತ್ತಾ ಬಂದಿದೆ ಎಂದರು.
ಪತ್ರಕರ್ತ ಎಸ್.ನಾಗಣ್ಣ ಮಾತನಾಡಿ, ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ಶಾಂತಿ ಕದಡುವ ಕೆಲಸ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಇದರ ಬಗ್ಗೆ ನಾವು ಎಚ್ಚರಿಕೆ ವಹಿಸಬೇಕಾಗಿದೆ. ಶತ ಶತಮಾನಗಳಿಂದ ಒಟ್ಟಿಗೆ ಬಾಳಿದ ಹಿಂದು, ಮುಸ್ಲಿಂ ಇತರೆ ಸಮುದಾಯಗಳು, ಇತರ ಮನಸ್ಥಿತಿಯನ್ನು ಕದಕದಂತೆ ಕೆಲಸ ಮಾಡಬೇಕಾಗಿದೆ. ಯಾರು ಏನೇ ಹೇಳಿದರೂ ಉದ್ರಿಕ್ತರಾಗದೇ ಹಿರಿಯರ ಮಾರ್ಗದರ್ಶನದಲ್ಲಿ ನಡೆಯಬೇಕೆಂದು ಸಲಹೆ ನೀಡಿದರು.
ಖಾಜಿಯಾ ಷರಿಯತ್ ಷೇಕ್ ಮಹಮೂದ್ ಅವರು ಆಶೀರ್ವಚನ ನೀಡಿ,ದೇವರ ಪ್ರಕಾರ ಹೆಣ್ಣು ಗಂಡು ಮಾತ್ರ ಸೃಷ್ಟಿಯಾಗಿದೆ. ಉಳಿದೆಲ್ಲವೂ ಒಂದೇ ಆಗಿದೆ.ಬೇರೆಯವರ ಮಾತಿಗೆ ಕಿವಿಗೋಡದೆ,ಜನರಲ್ಲಿ ಪ್ರೀತಿ ಮತ್ತು ವಿಶ್ವಾಸದಿಂದ ಬದುಕೊಣ ಎಂದರು.
ವೇದಿಕೆಯಲ್ಲಿ ಹೆಚ್.ಎಂ.ಎಸ್.ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಧ ಡಾ.ಎಸ್.ಷಪಿಅಹಮದ್,ಕಾರ್ಯದರ್ಶಿ ಅಫ್ತಾಬ್ ಅಹಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ,ಆರ್.ರಾಮಕೃಷ್ಣ, ಆಡಿಟರ್ ಸುಲ್ತಾನ್ ಮೊಹಮದ್, ಮಾಜಿ ಕೌನ್ಸಿಲರ್ಗಳಾದ ನಯಾಜ್ ಅಹಮದ್, ಜಿಯಾ,ನದೀಂ, ಮೆಹಬೂಬ್ ಪಾಷ,ವಾಲೆಚಂದ್ರಯ್ಯ,ಆಟೋ ರಾಜು, ತಾಜುದ್ದೀನ್ ಷರಿಫ್, ತರುಣೇಶ್, ಸಿದ್ದಲಿಂಗೇಗೌಡ, ಇಮ್ರಾನ್, ಸಿದ್ದರಾಜ್ ಸೇರಿದಂತೆ ಹಲವು ಹಿರಿಯರು, ವಿವಿಧ ಸಮುದಾಯಗಳ ಮುಖಂಡರು ಕೋಮು ಸೌಹಾರ್ದ ಕೂಟದಲ್ಲಿ ಪಾಲ್ಗೊಂಡಿದ್ದರು.





