ಗ್ರಾಮೀಣ ಸೊಗಡಿನ ಪ್ರತೀಕವಾಗಿರುವ ಸುಗ್ಗಿಹಬ್ಬ ಮಕರ ಸಂಕ್ರಾಂತಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲು ಸಿದ್ದತೆ ನಡೆಸಿರುವ ಜನಸಾಮಾನ್ಯರಿಗೆ ಹೂವು, ಹಣ್ಣು, ಕಡಲೆಕಾಯಿ, ಕಬ್ಬು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಆದರೂ ಕಂಗೆಡದೆ ಸುಗ್ಗಿ ಹಬ್ಬವನ್ನು ನಗರ, ಗ್ರಾಮೀಣ ಪ್ರದೇಶ ಸೇರಿದಂತೆ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲು ಭರದ ಸಿದ್ದತೆಗಳು ನಡೆದಿವೆ.
ಮಕರ ಸಂಕ್ರಾಂತಿ ಹಬ್ಬ ಅನ್ನದಾತರ ಸುಗ್ಗಿ ಕಾಲದ ಸಂಕೇತ. ಆದರೆ ಈ ಬಾರಿ ಕೊಂಚ ಮಳೆ ಕೊರತೆ ಉಂಟಾಗಿದ್ದು, ಈ ನಡುವೆಯೂ ರೈತರು ಸೇರಿದಂತೆ ಜನಸಾಮಾನ್ಯರು ಸುಗ್ಗಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಸರ್ವ ಸನ್ನದ್ಧರಾಗಿದ್ದು, ಮಾರುಕಟ್ಟೆಯಲ್ಲಿ ಹೂವು, ಹಣ್ಣು, ಕಬ್ಬು, ಕಡ್ಲೆಕಾಯಿ, ಆವರೆಕಾಯಿ, ಗೆಣಸು ಬೆಲೆ ಗಗನಕ್ಕೇರಿದ್ದರೂ ಸಹ ಕಂಗೆಡದೆ ಎಲ್ಲವನ್ನು ಖರೀದಿಸಿ ಹಬ್ಬ ಆಚರಿಸುವ ಸಂಭ್ರಮದಲ್ಲಿದ್ದಾರೆ.
ಹೊಸ ವರ್ಷದ ತಿಂಗಳ ಬರುವ ಮೊದಲನೇ ಹಬ್ಬ ಇದಾಗಿದ್ದು, ಈ ಸುಗ್ಗಿ ಹಬ್ಬ ಸಂಕ್ರಾಂತಿ ಗ್ರಾಮೀಣ ಸೊಗಡಿನ ಪ್ರತೀಕ. ಈ ಹಬ್ಬ ಬಂತೆಂದರೆ ಹಳ್ಳಿಗಳಲ್ಲಿ ಎಲ್ಲಿಲ್ಲದ ಸಂಭ್ರಮ.

ಸುಗ್ಗಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಸಿದ್ದತೆ ನಡೆಸಿರುವ ಜನಸಾಮಾನ್ಯರು ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಅಗತ್ಯವಾಗಿ ಬೇಕಾಗಿರುವ ವಸ್ತುಗಳ ಬೆಲೆ ಎಷ್ಟೇ ಗಗನಕ್ಕೇರಿದ್ದರೂ ಲೆಕ್ಕಿಸದೆ ಖರೀದಿಸಲು ಮುಗಿ ಬೀಳುತ್ತಿರುವುದು ಕಂಡು ಬರುತ್ತಿದೆ.
ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತನಾಡು ಎಂಬ ಗಾದೆ ಮಾತಿದೆ. ಈ ಗಾದೆ ಮಾತು ಸಂಕ್ರಾಂತಿ ಹಬ್ಬದಂದು ಪ್ರಚಲಿತಕ್ಕೆ ಬರುತ್ತದೆ. ಎಳ್ಳು-ಬೆಲ್ಲ ಸಂಕ್ರಾಂತಿ ಹಬ್ಬದ ಪ್ರತೀಕವಾಗಿದೆ. ಹಾಗಾಗಿ ಅಂಗಡಿ ಮುಂಗಟ್ಟುಗಳಲ್ಲಿ ಎಳ್ಳು-ಬೆಲ್ಲದ ಮಾರಾಟವೂ ಬಲು ಜೋರಾಗಿಯೇ ನಡೆದಿದೆ.

ಕಲ್ಪತರುನಾಡಿನ ತುಮಕೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಜಿಲ್ಲೆಯ ಎಲ್ಲ ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಂಡು ಬರುತ್ತಿದೆ.
ಈ ಬಾರಿಯೂ ಬೆಲೆ ಏರಿಕೆಗೇನೂ ಕಡಿಮೆಯಾಗಿಲ್ಲ. ಮಾರುಕಟ್ಟೆಯಲ್ಲಿ ಒಂದು ಜತೆ ಕಬ್ಬಿನ ಜೊಲ್ಲೆ 100 ರಿಂದ 120 ರೂಪಾಯಿ, ಆವರೆ ಕಾಯಿ 1 ತೂಕ (ಎರಡೂವರೆ ಕೆ.ಜಿ.) 150 ರಿಂದ 200 ರೂ., ಗೆಣಸು ಕೆ.ಜಿ.ಗೆ 40 ರಿಂದ 60 ರೂ., ಬಾಳೆ ಹಣ್ಣು ಕೆ.ಜಿ.ಗೆ 80 ರಿಂದ 100 ರೂ., ಸೇವಂತಿಗೆ ಹೂವು ಮಾರು 100 ರಿಂದ 130 ರೂ., ಎಳ್ಳು, ಬೆಲ್ಲ ಹೀಗೆ ಹಬ್ಬಕ್ಕೆ ಅಗತ್ಯವಾಗಿರುವ ಸಾಮಗ್ರಿಗಳ ದರ ಏರಿಕೆಯಾಗಿದೆ. ಆದರೂ ಮಾರುಕಟ್ಟೆಯಲ್ಲಿ ಖರೀದಿಯ ಭರಾಟೆ ಜೋರಾಗಿದೆ.
ಹಳ್ಳಿಗಳಲ್ಲಿ ಕಾಣದ ಸಂಭ್ರಮ
ಸಂಕ್ರಾಂತಿ ಹಬ್ಬ ಬಂತೆಂದರೆ ಹಳ್ಳಿಗಳಲ್ಲಿ ಸಂಭ್ರಮ, ಸಡಗರ ಎದ್ದು ಕಾಣುತ್ತಿತ್ತು. ಎತ್ತುಗಳಿಂದ ಜಮೀನು ಉಳುಮೆ ಮಾಡಿ ಹದಗೊಳಿಸಿ ಬಿತ್ತನೆ ಮಾಡಿ ಕಳೆ ಕಿತ್ತು ಫಸಲು ಬಂದ ಮೇಲೆ ಒಕ್ಕಣೆ ಮಾಡಿ ಬೆಳೆ ರಾಶಿ ಹಾಕಿ ಪೂಜೆ ಸಲ್ಲಿಸಿ ಮನೆಗೆ ತರುವುದೇ ಒಂದು ಸಂಭ್ರಮ.
ಆದರೆ ಆಧುನಿಕತೆ ಬೆಳೆದಂತೆ ಇತ್ತೀಚಿನ ದಿನಗಳಲ್ಲಿ ಎಲ್ಲವೂ ಯಂತ್ರಮಯವಾಗಿ ಬಿಟ್ಟಿದೆ. ಎತ್ತುಗಳಿಂದ ಜಮೀನು ಉಳುಮೆ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಈಗ ಜಮೀನು ಉಳುಮೆ ಮಾಡುವುದರಿಂದ ಹಿಡಿದು ಮನೆಗೆ ರಾಗಿ ರಾಶಿ ತರುವವರೆಗೂ ಯಂತ್ರಗಳನ್ನೇ ಅವಲಂಬಿಸಿದ್ದಾರೆ. ಹಾಗಾಗಿ ಬೆಳೆದ ಬೆಳೆ ಒಕ್ಕಣೆ ಮಾಡಲು ಕಣವೂ ಇಲ್ಲ, ರಾಶಿಯೂ ಇಲ್ಲ, ಅದಕ್ಕೆ ಪೂಜೆನೂ ಮಾಡುವವರಿಲ್ಲದಂತಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಈ ಹಿಂದೆ ಪ್ರತಿ ಮನೆಯಲ್ಲೂ ಒಂದು ಜತೆ ಎತ್ತುಗಳನ್ನು ಕಟ್ಟಲಾಗುತ್ತಿತ್ತು. ಇಂದು ಅಪ್ಪಟ ರೈತನಾಗಿದ್ದರೂ ಆತನ ಮನೆಯಲ್ಲೂ ಹುಡುಕಿದರೂ ಒಂದು ಜತೆ ಎತ್ತುಗಳು ಸಿಗುವುದು ದುರ್ಲಭ. ಕೆಲವರು ಮನೆತನದ ಗೌರವಕ್ಕೋ ಅಥವಾ ಪ್ರತಿಷ್ಠೆಗಾಗೋ ಸಾಕುವುದು ಮಾತ್ರ ಕಂಡು ಬರುತ್ತದೆ. ಆದರೆ ವ್ಯವಸಾಯ ಮಾಡುವ ಸಲುವಾಗಿ ಎತ್ತುಗಳನ್ನು ಕಟ್ಟುವರೇ ಇಲ್ಲದಂತಾಗಿದೆ. ಹಾಗಾಗಿ ಸಂಕ್ರಾಂತಿ ಹಬ್ಬದಂದು ಎತ್ತುಗಳ ಕಿಚ್ಚು ಹಾಯಿಸುವುದು ಕಣ್ಮರೆಯಾಗಿದೆ.
ಆದರೆ ರಾಜ್ಯ ಸರ್ಕಾರ ಎಲ್ಲ ಜಿಲ್ಲಾ ಕೇಂದ್ರ ಹಾಗೂ ರಾಜಧಾನಿಯಲ್ಲಿ ಸಿರಿಧಾನ್ಯ ಮೇಳ ನಡೆಸುವ ಮೂಲಕ ಸುಗ್ಗಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದೆ. ಹಳ್ಳಿಗಳಲ್ಲಿ ರೈತರು ರಾಶಿ ಹಾಕುತ್ತಾರೋ, ಬಿಡುತ್ತಾರೋ, ಸಿರಿಧಾನ್ಯ ಮೇಳದ ನೆಪದಲ್ಲಾದರೂ ರಾಗಿ ರಾಶಿಗಳನ್ನು ನೋಡುವಂತಹ ಭಾಗ್ಯ ಜನರಿಗೆ ದೊರೆಯುತ್ತಿದೆ.
ಅದೇನೆ ಇರಲಿ, ಸುಗ್ಗಿ ಹಬ್ಬ ಮಕರ ಸಂಕ್ರಾಂತಿಯನ್ನು ನಗರ, ಗ್ರಾಮೀಣ ಪ್ರದೇಶ ಸೇರಿದಂತೆ ನಾಡಿನ ಎಲ್ಲೆಡೆ ಸಂಭ್ರಮದಿಂದ ಆಚರಿಸಲು ಜನಸಾಮಾನ್ಯರು ಸಿದ್ದತೆಯಲ್ಲಿ ತೊಡಗಿದ್ದಾರೆ. ಮಾರುಕಟ್ಟೆಗಳು ಜನಜಂಗುಳಿಯಿAದ ಗಿಜಗುಡುತ್ತಿದ್ದು, ವ್ಯಾಪಾರ, ಖರೀದಿ ಭರಾಟೆ ಬಲು ಜೋರಾಗಿದೆ.





