ತಾಯಿಯನ್ನು ಕೊಲೆ ಮಾಡಿ, ಸಹಜ ಸಾವು ಎಂದು ಬಿಂಬಿಸಿದ್ದ ಮಗಳನ್ನು ಪೊಲೀಸರು ಬಂಧಿಸಿದ್ದಾರೆ.ಬುಧವಾರ ರಾತ್ರಿ ಪುಷ್ಪಾವತಿ ಮಲಗಿದ್ದಾಗ ಸುಚಿತ್ರಾ ಮುಖದ ಮೇಲೆ ದಿಂಬು ಇಟ್ಟು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಗುರುವಾರ ಮಧ್ಯಾಹ್ನ ಅನುಪನಹಳ್ಳಿಯಲ್ಲಿ ಅಂತ್ಯಕ್ರಿಯೆಗೆ ತೆರಳಿ ದಾಗ ಕೊಲೆಯ ರಹಸ್ಯ ಬಯಲಾಗಿದೆ.
ಮುಖದ ಮೇಲೆ ಗಾಯದ ಗುರುತುಗಳು ಕಾಣಿಸಿದ್ದವು. ಅಂತ್ಯಕ್ರಿಯೆ ಸಮಯದಲ್ಲಿ ಪುಷ್ಪಾವತಿ ಸಹೋದರ ಅನಿಲ್ ಕುಮಾರ್ ಇದನ್ನು ಗಮನಿಸಿ, ಅಂತ್ಯಕ್ರಿಯೆಗೆ ಅಡ್ಡಿಪಡಿಸಿದ್ದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದಾಗ ಹತ್ಯೆಯ ವಿಷಯ ಹೊರ ಬಂದಿದೆ. ಅನಿಲ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಕ್ಯಾತ್ಸಂದ್ರ ಠಾಣೆ ಪೊಲೀಸರು ಸುಚಿತ್ರಾರನ್ನು ವಶಕ್ಕೆಪಡೆದು ತನಿಖೆ ನಡೆಸುತ್ತಿದ್ದಾರೆ.
ತುಮಕೂರು ತಾಲ್ಲೂಕಿನ ಅನುಪನಹಳ್ಳಿ ಪುಷ್ಪಾವತಿ (55) ಕೊಲೆಯಾದವರು. ಸುಚಿತ್ರಾ (33) ಕೊಲೆ ಮಾಡಿದ ಆರೋಪಿ, ಪುಷ್ಪಾವತಿ ಮಗಳ ಜತೆಗೆ ತುಮಕೂರು ನಗರದ ಶ್ರೀನಗರದಲ್ಲಿ ವಾಸವಿದ್ದರು.
‘ತಂದೆಯ ಸಾವಿನ ನಂತರ ಸುಚಿತ್ರಾ ಮಾನಸಿಕವಾಗಿ ಕುಗ್ಗಿ ಹೋಗಿದ್ದರು ಸುಚಿತ್ರಾ ಮತ್ತು ಪುಷ್ಪಾವತಿ ಮಧ್ಯೆ ಆಸ್ತಿಗಾಗಿ ಆಗಾಗ ಗಲಾಟೆ ನಡೆ ಯುತ್ತಿತ್ತು. ಇದೇ ವಿಚಾರವಾಗಿ ನಡೆದ ಗಲಾಟೆ ಕೊಲೆಗೆ ಕಾರಣ ಆಗಿರಬಹುದು’ ಎಂದು ಪೊಲೀಸರು ಶಂಕಿಸಿದ್ದಾರೆ.
ಒಂದೂವರೆ ವರ್ಷದ ಹಿಂದೆ ಸುಚಿತ್ರಾ ತಂದೆ ಮರಣ ಹೊಂದಿದ್ದರು. ತಂದೆಯ ಸಾವಿಗೆ ತಾಯಿ ಪುಷ್ಪಾವತಿ ಕಾರಣ, ಮಾಟ- ಮಂತ್ರ ಮಾಡಿಸಿದ್ದರಿಂದ ತಂದೆ ಸಾವನ್ನಪ್ಪಿದ್ದರು ಎಂದು ಸುಚಿತಾಗೆ ಕೋಪ ಇತ್ತು ಇದೇ ಕಾರಣಕ್ಕೆ ತಾಯಿಯನ್ನು ಹತ್ಯೆ ಮಾಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.





