ಇಡೀ ಜಗತ್ತೇ ಸಾಂತ್ವಾನ ಮತ್ತು ಪ್ರೀತಿಗೆ ಹಾತೊರೆಯುತ್ತಿದೆ. ಪ್ರೀತಿ ಮತ್ತು ಸಂಬಂಧಗಳು ಮಾತಿನಲ್ಲಿ ಅಲ್ಲ, ಅದೊಂದು ಭಾವನೆಯಾಗಿ ಹೊರಹೊಮ್ಮಬೇಕು ಎಂದು ಲೇಖಕಿಯರ ಸಂಘದ ಅಧ್ಯಕ್ಷೆ ಮಲ್ಲಿಕಾ ಬಸವರಾಜು ಹೇಳಿದರು.
ನಗರದ ಎಸ್ಎಸ್ ಪುರಂ ನಲ್ಲಿ ಭಾನುವಾರ ಆಯೋಜಿಸಿದ್ದ ಅಂಗಳ ಕಮ್ಯೂನಿಟಿ ಟ್ರಸ್ಟ್ ಉದ್ಘಾಟನೆ ಮತ್ತು ಕವಿಗೋಷ್ಠಿ ಕಾರ್ಯಕ್ರದಲ್ಲಿ ಮಾತನಾಡಿದ ಅವರು, ಪುಟ್ಟ ಮಕ್ಕಳು, ಸಾಹಿತಿಗಳು, ಯುವಜನರು ಆತ್ಮಹತ್ಯೆಯ ದಾರಿ ತುಳಿಯುತ್ತಿದ್ದಾರೆ. ಇವೆಲ್ಲವನ್ನು ನೋಡಿದಾಗ ನೊಂದ ಜೀವಗಳಿಗೆ ತಬ್ಬಲು ಒಂದು ಮಡಿಲು ಮತ್ತು ಅಂತಃಕರಣ ಬೇಕಿದೆ ಎಂದು ತಿಳಿಸಿದರು.
ಸಾಹಿತ್ಯ, ಹೋರಾಟ, ಸಮಸ್ಯೆಗಳಿಗೆ ಪರಿಹಾರ ಹುಡುಕುವ ಜೊತೆ ಜೊತೆಗೆ ಮನುಷ್ಯ ಮನುಷ್ಯರ ನಡುವೆ ಮಾನವೀಯ ಸಂಬಂಧಗಳನ್ನು ಬೆಸೆಯುವ ಕೆಲವಾಗಬೇಕಿದೆ. ಭಿನ್ನ ಧ್ವನಿಗಳನ್ನು ನಾವು ಸಹಿಸಿಕೊಳ್ಳುವ ಮನೋಭಾವ ವೃದ್ಧಿಯಾಬೇಕು ಎಂದರು.
ನಾವು ಹೇಳಿದ್ದೇ ಸರಿ ಎಂಬ ಶ್ರೇಷ್ಠತೆಯ ಗೀಳು ಬಹಳಷ್ಟು ಜನರ ತಲೆಯಲ್ಲಿ ಹೊಕ್ಕಿದೆ. ವಿದೇಯತೆಯ ಹಸಿವು ಹೆಚ್ಚದೆ ನಮ್ಮ ಬದುಕಿದೆ ಅರ್ಥ ದೊರಕದು. ಭಿನ್ನಭೇದಗಳನ್ನು ಮರೆತು ಬದುಕುವುದೇ ಸಹಜತೆ. ಹೇಳಿದಂತೆ ಬದುಕುವುದು ಅಷ್ಟು ಸುಲಭವಲ್ಲ. ನುಡಿಯಂತೆ ನಡೆಯೂ ಇದ್ದಾಗ ಮಾನವೀಯ ಮೌಲ್ಯಗಳಿಗೆ ಅರ್ಥ ದೊರಕುತ್ತದೆ. ಪೋಷಕರು ಸೃಜನಶೀಲ ಮತ್ತು ಸಾಹಿತ್ಯಿಕ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಬೇಕು. ಆಗ ಅವರು ಸೀಮಿತ ಚೌಕಟ್ಟಿನಿಂದ ಆಚೆ ಬಂದು ಆಲೋಚಿಸಲು ಸಾಧ್ಯವಾಗುತ್ತದೆ. ಇದರಿಂದ ಅಂಕಗಳನ್ನು ಹೆಚ್ಚು ತೆಗೆಯಬೇಕೆಂಬ ಒತ್ತಡ ಹಾಕುವ ಸಂಸ್ಕೃತಿ ಮುಂದಿನ ಪೀಳಿಗೆಯಿಂದ ನಿಧಾನವಾಗಿ ನಿಲ್ಲಲಿದೆ ಎಂದು ಸಲಹೆ ನೀಡಿದರು.
ತುಮಕೂರಿನಲ್ಲಿ ಚಳವಳಿ ಪರಂಪರೆಯ ಇತಿಹಾಸವಿದೆ. ಇತ್ತೀಚಿನ ದಿನಗಳಲ್ಲಿ ಅನ್ಯಾಯವನ್ನು ಪ್ರಶ್ನಿಸುವ ಮನೋಭಾವ ಕ್ಷೀಣಿಸುತ್ತಿರುವ ಆತಂಕ ಮನೆ ಮಾಡಿತ್ತು. ಆದರೆ ಅಂಗಳ ಕಮ್ಯೂನಿಟಿ ಟ್ರಸ್ಟ್ ಅದನ್ನು ದೂರ ಮಾಡಿದೆ. ಈ ಟ್ರಸ್ಟ್ ನಿಂದ ಹೆಚ್ಚು ಹೆಚ್ಚು ಸಮಾಜಮುಖಿ ಕೆಲಸಗಳನ್ನು ನಿರೀಕ್ಷಿಸುತ್ತೇವೆ. ಈ ಸಂಸ್ಥೆಯೊಂದಿಗೆ ನಮ್ಮ ಇರುವಿಕೆ ಸದಾ ಇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅನ್ಯಾಯಗಳನ್ನು ಖಂಡಿಸಲು ನಾವು ದೈಹಿಕವಾಗಿ ಶಕ್ತಿಯಾಗಿರಬೇಕು ಅಥವಾ ಗುಂಪಿನಲ್ಲಿರಬೇಕೆಂಬ ಯಾವುದೇ ನಿಯಮ ಇಲ್ಲ. ಪ್ರಶ್ನಿಸುವ ಧ್ವನಿ ಯೊಂದು ಬೇಕಿದೆ ಅಷ್ಟೆ ಎಂದರು.
ಕ.ರಾ.ಸ್ವ.ಸಿ ವೇದಿಕೆ ಅಧ್ಯಕ್ಷರಾದ ಕಲಾವತಿ ಮಧುಸೂದಸನ್ ಮಾತನಾಡಿ, ಯುವಶಕ್ತಿ ಮುಂದೆ ಬರಬೇಕು ಎಂಬುದು ವಿವೇಕಾನಂದರ ಆಶಯ. ಯುವಜನರ ಶಕ್ತಿಯನ್ನು ಅವರು ಕಂಡುಕೊಂಡಿದ್ದರು. ನಮಗೆಲ್ಲರಿಗೂ ಒಂದು ಭರವಸೆಯಿದೆ, ನಮ್ಮ ಪೀಳಿಗೆಯ ನಂತರವೂ ಆಂದೋಲನಗಳು ಮುಂದುವರೆಯಲಿವೆ ಎಂದು. ಅಂಗಳ ಕಮ್ಯೂನಿಟಿ ಟ್ರಸ್ಟ್ ಈ ಆಶಾಭಾವನೆಯನ್ನು ಹೆಚ್ಚು ಮಾಡಿದೆ. ಬಂಡವಾಳಶಾಹಿ ಜಗತ್ತಿನಲ್ಲಿ ಸೇವೆ ಬದಲಾಗಿ ಸ್ವಾರ್ಥದ ಹಪಹಪಿ ಹೆಚ್ಚುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲಿನ ಸಮಸ್ಯೆಗೆ ಸೌಹಾರ್ದತೆ ಕೊರತೆ ಕಾರಣವಾಗಿದೆ. ಸಮುದಾಯಗಳಲ್ಲಿ ಸೌಹಾರ್ದತೆ ಮತ್ತು ಸಮನ್ವಯತೆ ತರುವ ಕಾರ್ಯವಾಗಬೇಕು ಎಂದು ತಿಳಿಸಿದರು.
ಜಾತ್ಯಾತೀತ ಮತ್ತು ಜನಪರ ಚಿಂತನೆಗಳೊಂದಿಗೆ ನಡೆದಾಗ ನಾವಂದುಕೊಂಡದ್ದು ನೆರವೇರಲು ಸಾಧ್ಯ. ವಿಶ್ವಾಸ, ಗೌರವ, ನಂಬಿಕೆ ಇಲ್ಲಿ ಮುಖ್ಯವಾಗುತ್ತದೆ. ಮಾನವಕುಲಂ ಒಂದೇವಲಂ ಎಂಬ ತತ್ವವಿದ್ದರೆ ಸಾಕು ಎಂದರು.
ಯುವಜನರಲ್ಲಿ ಸಮಾಜಮುಖಿ ಚಿಂತನೆ ಬಂದಿರುವುದು ಇಂದಿಗೆ ಅಪರೂಪ. ನೈತಿಕತೆ ಹೆಚ್ಚಿದಾಗ ಆರ್ಥಿಕತೆಗೆ ಬೆಲೆ ಬರುತ್ತದೆ. ಈ ಸಂಸ್ಥೆಯ ಜನಪರ ಒತ್ತಾಸೆಗಳಿಗೆ ಪೂರಕವಾಗಿ ನಾವೆಲ್ಲರೂ ಜೊತೆ ನಿಲ್ಲೋಣ ಎಂದು ಹೇಳಿದರು.
ಸಾಮಾಜಿಕ ಹೋರಾಟಗಾರರಾದ ಹೆತ್ತೇನಹಳ್ಳಿ ಮಂಜುನಾಥ್ ಮಾತನಾಡಿ, ಇಂದು ಪ್ರಶ್ನಿಸುವ ಮನೋಭಾವ ಕಡಿಮೆಯಾಗುತ್ತಿರುವ ಆತಂಕದಲ್ಲಿದ್ದೇವೆ. ಶಿಕ್ಷಣ ಮುಗಿಸಿದ ನಂತರ ಸಮಾಜಕ್ಕೆ ಋಣ ಸಂದಾಯ ಮಾಡಬೇಕೆನ್ನುವ ಮನಸ್ಥಿತಿ ಕಣ್ಮರೆಯಾಗುತ್ತಿದೆ. ವಿದ್ಯಾವಂತರು ಆಚೆ ಬರುತ್ತಿದ್ದಾರೆಯೇ ಹೊರತು, ಪ್ರಜ್ಞಾಚಂತರು ಆಚೆ ಬರುತ್ತಿಲ್ಲ. ಆದರೆ ಯುವ ಜನರೇ ಸೇರಿ ಸ್ಥಾಪಿಸಿರುವ ಈ ಟ್ರಸ್ಟ್ ಉದ್ದೇಶ ವಿಭಿನ್ನ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕ.ಸಾ.ಪ ನಿಕಟಪೂರ್ವ ಅಧ್ಯಕ್ಷರಾದ ಬಾ.ಹ ರಮಾಕುಮಾರಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಶಾರದಾಂಬ ಟ್ರಸ್ಟ್ ಸಂಸ್ಥಾಪಕರಾದ ಯಶೋಧ, ಟ್ರಸ್ಟ್ನ ಕಾರ್ಯದರ್ಶಿ ಧನುಷ್ ಹೆಚ್ ಶೇಖರ್, ಯುವ ಕವಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು, ಅಂಗಳ ಕಮ್ಯುನಿಟಿ ಟ್ರಸ್ಟ್ನ ಸಮಸ್ತ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.





