ತುಮಕೂರು ಮಹಾನಗರದಲ್ಲಿ ವಾಸವಾಗಿರುವ ಪೌರಕಾರ್ಮಿಕರಾದ ಅಯ್ಯಪ್ಪ ಅವರ ಮನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಅವರ ಮನೆ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ.
ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿದ್ದು, ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.
ಜೀವನೋಪಾಯಕ್ಕಾಗಿ ದುಡಿಯುತ್ತಿರುವ ಪೌರಕಾರ್ಮಿಕ ಕುಟುಂಬಕ್ಕೆ ಈ ಘಟನೆ ದೊಡ್ಡ ಆಘಾತವಾಗಿದೆ.

ಈ ದುರ್ಘಟನೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ತುಮಕೂರು ಮಹಾನಗರ ಪಾಲಿಕೆ ತಕ್ಷಣ ಗಮನಹರಿಸಿ ಮನೆ ಹಾಗೂ ಮನೆಯಲ್ಲಿದ್ದ ವಸ್ತುಗಳ ನಷ್ಟವನ್ನು ಪರಿಗಣಿಸಿ ನ್ಯಾಯೋಚಿತ ಮತ್ತು ಸಮರ್ಪಕ ಪರಿಹಾರವನ್ನು ನೀಡಬೇಕು ಎಂದು ಸಿಪಿಎಂ ತುಮಕೂರು ನಗರ ಸಮಿತಿ ಒತ್ತಾಯಿಸಿದೆ.

ಅಧಿಕಾರಿಗಳು ಘಟನೆ ಸ್ಥಳಕ್ಕೆ ಭೇಟಿ ನೀಡಿ ಮಹಜರ್ ನಡೆಸಿರುವುದು ಸರಿಯೇ. ಆದರೆ ಕೇವಲ ಮಹಜರ್ ನಡೆಸುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಬೆಂಕಿಯಿಂದ ಎಲ್ಲವನ್ನೂ ಕಳೆದುಕೊಂಡಿರುವ ಕುಟುಂಬಕ್ಕೆ ತಕ್ಷಣ ಆರ್ಥಿಕ ನೆರವು, ತಾತ್ಕಾಲಿಕ ವಸತಿ ವ್ಯವಸ್ಥೆ ಹಾಗೂ ಅಗತ್ಯ ಜೀವನೋಪಾಯ ಸಾಮಗ್ರಿಗಳನ್ನು ಒದಗಿಸಲು ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ವಿಳಂಬವಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಸಿಪಿಐ(ಎಂ) ನೀಯೋಗ ಸ್ಥಳಕ್ಕೆ ತೆರಳಿ ಪರೀಶಿಲಿಸಿ ಒತ್ತಾಯಿಸಲಾಯಿತು.
ನೀಯೋಗದಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಸೈಯದ್ ಮುಜೀಬ್, ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ನಗರ ಕಾರ್ಯದರ್ಶಿ ಎ.ಲೋಕೇಶ್ ಉಪಸ್ಥಿತರಿದ್ದರು.
ಪೌರಕಾರ್ಮಿಕರು ನಗರ ಸ್ವಚ್ಛತೆಗಾಗಿ ಹಗಲಿರುಳು ದುಡಿಯುವವರು. ಅವರ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ಮತ್ತು ಆಡಳಿತ ಸ್ಪಂದಿಸದಿದ್ದರೆ ಅದು ಮಾನವೀಯತೆಯ ಕೊರತೆಯಾಗಿದೆ. ಆದ್ದರಿಂದ ಈ ಕುಟುಂಬಕ್ಕೆ ತಕ್ಷಣ ಸಮರ್ಪಕ ಪರಿಹಾರ ನೀಡಿ ಮಾನವೀಯತೆ ತೋರಬೇಕು ಎಂದು ಸಿಪಿಐ(ಎಂ) ನಗರ ಸಮಿತಿ ಆಗ್ರಹಿಸಿದೆ.





