ಆಧಾರ್ ಕಾರ್ಡ್ ತಿದ್ದುಪಡಿ ತಾಂತ್ರಿಕ ಸಮಸ್ಯೆಯಿಂದ ಪರದಾಡಿದ್ದ ಮೆದುಳು ಕ್ಯಾನ್ಸರ್ ಪೀಡಿತ ಯೋಗಿತಾ ಎಂಬ ಬಾಲಕಿಯ ಚಿಂತಾಜನಕ ಸ್ಥಿತಿಗೆ ಸ್ಪಂದಿಸಿದ ಜಿಲ್ಲಾಡಳಿತ ಕೊಟ್ಟ ಮಾತಿನಂತೆ ನಾಲ್ಕು ದಿನದಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಹಾಗೂ ಬಿಪಿಎಲ್ ಕಾರ್ಡ್ ಗೆ ಬಾಲಕಿ ಹೆಸರು ಸೇರ್ಪಡೆ ಮಾಡಿ ಜಿಲ್ಲಾ ಮಂತ್ರಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರ ಹಸ್ತದಿಂದ ಬಾಲಕಿಯ ಕುಟುಂಬಕ್ಕೆ ವಿತರಣೆ ಮಾಡಿದರು.
ಕಳೆದ ವಾರದಲ್ಲಿ ಮೆದುಳು ಕ್ಯಾನ್ಸರ್ ಕಾಯಿಲೆಗೆ ತುತ್ತಾದ ಗುಬ್ಬಿ ಪಟ್ಟಣದ ಸಮೀಪದ ಜಿ.ಹರಿವೇಸಂದ್ರ ಗ್ರಾಮದ ಮಂಜುನಾಥ್ ನೇತ್ರಾವತಿ ದಂಪತಿಯ ಹತ್ತು ವರ್ಷದ ಮಗಳು ಯೋಗಿತಾ ಐದು ತಿಂಗಳ ಹಿಂದೆ ಜ್ವರದಿಂದ ಬಳಲಿ ನಂತರ ಕೈ ಕಾಲು ಸ್ವಾಧೀನ ಇಲ್ಲದಂತಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ತೆರಳಿದಾಗ ಮೆದುಳು ಕ್ಯಾನ್ಸರ್ ನಾಲ್ಕನೇ ಹಂತದಲ್ಲಿದ್ದ ವಿಚಾರ ತಿಳಿದು ಆಘಾತಕ್ಕೆ ಒಳಗಾಗಿದ್ದರು. ಬಡ ಕುಟುಂಬ ಮಗಳ ಚಿಕಿತ್ಸೆಗೆ ತೆರಳಿದಾಗ ಬಾಲಕಿಯ ಆಧಾರ್ ಕಾರ್ಡ್ ಸರಿ ಇಲ್ಲದ ಬಗ್ಗೆ ತಿಳಿದು ತಿದ್ದುಪಡಿಗೆ ನಿರಂತರ ಪ್ರಯತ್ನ ಪಟ್ಟಿದ್ದರೂ ಪ್ರಯೋಜನ ಆಗಿರಲಿಲ್ಲ.
ಈ ವಿಷಯ ಮಾಧ್ಯಮಗಳು ವರದಿ ಮಾಡಿದ ಬೆನ್ನಲ್ಲೇ ಸ್ಪಂದಿಸಿದ ಜಿಲ್ಲಾಡಳಿತ ಉಪವಿಭಾಗಾಧಿಕಾರಿಗಳು ಬಾಲಕಿಯ ಮನೆಗೆ ಸಿಬ್ಬಂದಿಗಳ ಜೊತೆ ಬಂದು ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸುವಲ್ಲಿ ಯಶಸ್ವಿಯಾದರು. ನಂತರ ಬಿಪಿಎಲ್ ಕಾರ್ಡ್ ಗೆ ಬಾಲಕಿ ಹೆಸರು ಸೇರ್ಪಡೆ ಮಾಡಿದ ತಾಲ್ಲೂಕು ಆಡಳಿತ ಪಡಿತರ ಚೀಟಿ ಸಿದ್ಧಪಡಿಸಿ ಜಿಲ್ಲಾ ಮಂತ್ರಿ ಹಾಗೂ ಜಿಲ್ಲಾಧಿಕಾರಿಗಳ ಮೂಲಕ ಸಂತ್ರಸ್ತ ಕುಟುಂಬಕ್ಕೆ ಹಸ್ತಾಂತರ ಮಾಡಿದರು.
ಸ್ಥಳದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಉಪವಿಭಾಗಾಧಿಕಾರಿ ನಹೀದಾ ಜಮ್ ಜಮ, ತಹಶೀಲ್ದಾರ್ ಆರತಿ.ಬಿ ಇತರರು ಇದ್ದರು.





