ತುಮಕೂರು ತಾಲೂಕು ಹೆಬ್ಬೂರಿನ ದಿ.ಕೆ.ಎಸ್.ಪುಟ್ಟಣ್ಣಯ್ಯ ರೈತ ಭವನದಲ್ಲಿ ರೈತ ದಿನಾಚರಣೆ,ಕೆ.ಎಸ್.ಪುಣ್ಣಯ್ಯ ಜಯಂತಿ,ಮಾಜಿ ಪ್ರಧಾನಿ ಚೌದರಿ ಚರಣ್ ಸಿಂಗ್ ದಿನಾಚರಣೆ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಹೆಬ್ಬೂರಿನ ಕೆ.ಎಸ್.ಪುಟ್ಟಣ್ಣಯ್ಯ ರೈತಭವನದ ಮುಂಭಾಗದಲ್ಲಿರುವ ದಿ.ಕೆ.ಎಸ್.ಪುಟ್ಟಣ್ಣಯ್ಯ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಪುಷ್ಪನಮನ ಸಲ್ಲಿಸುವುದರ ಜೊತೆಗೆ,ಮಾಜಿ ಪ್ರಧಾನ ಚೌಧರಿ ಚರಣಸಿಂಗ್ ಅವರ ಭಾವಚಿತ್ರಕ್ಕೂ ರೈತ ಸಂಘದ ಮುಖಂಡರು ಹಾಗೂ ಕಾರ್ಯಕರ್ತರು ಪುಷ್ಪ ನಮನ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎನ್.ಗೋವಿಂದರಾಜು, ಇಂದು ರೈತ ದಿನಾಚರಣೆ. ಸರಕಾರ ಇಂದು ರೈತ ದಿನಾಚರಣೆಯನ್ನು ಆಚರಿಸುವ ಮೂಲಕ ಮಾಜಿ ಪ್ರಧಾನಿ ಚೌಧರಿ ಚರಣ್ಸಿಂಗ್ ಅವರ ಸ್ಮರಿಸುವ ಕೆಲಸವನ್ನು ಮಾಡುತ್ತಿದೆ.ಇದಕ್ಕಾಗಿ ಸರಕಾರಕ್ಕೆ ನಾವು ಅಭಿನಂದನೆ ಸಲ್ಲಿಸುತ್ತೇವೆ.ಸರಕಾರ ಕೇವಲ ಕೃಷಿ, ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಲ್ಲಿ ದಾಖಲೆಗಾಗಿ ಒಂದಿಷ್ಟು ರೈತರನ್ನು ಸೇರಿಸಿ, ಭಾಷಣ ಮಾಡಿ ಹೊಗುವುದರಿಂದ ರೈತರ ಸಮಸ್ಯೆಗಳಿಗೆ ಪರಿಹಾರ ದೊರೆಯುವುದಿಲ್ಲ.ಕೃಷಿಕರು ಇಂದು ಬಹಳ ಕಷ್ಟದಲ್ಲಿದ್ದಾರೆ.ಕೃಷಿಗೆ ಹಾಕಿದ ಬಂಡವಾಳ ವಾಪಸ್ಸು ಬಾರದೆ, ಸಾಲಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಸರಕಾರದ ಅಂಕಿ ಅಂಶಗಳ ಪ್ರಕಾರವೇ, ಪ್ರತಿ ಅರ್ಧ ನಿಮಿಷಕ್ಕೆ ಓರ್ವ ರೈತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ.ದೇಶದ ಜನರ ಹೊಟ್ಟೆಗೆ ಅನ್ನ ಬೆಳೆದುಕೊಟ್ಟು, ಶೇ.65 ರಷ್ಟು ಜನರಿಗೆ ಉದ್ಯೋಗ ನೀಡಿರುವ ಕೃಷಿಕ ನೆಮ್ಮದಿಯಿಂದ ಬದುಕಲು ಬೇಕಾಗುವ ವಾತಾವರಣ ಸೃಷ್ಠಿಯಾಗುತ್ತಿಲ್ಲ. ರೈತರ ಉತ್ಪನಗಳಿಗೆ ವೈಜ್ಞಾನಿಕ ಬೆಲೆ ನೀಡುತ್ತಿಲ್ಲ. ಕನಿಷ್ಠ ಎಲ್ಲಾ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡುತ್ತಿಲ್ಲ. ರೈತರ ಶ್ರಮಕ್ಕೆ ತಕ್ಕ ಬೆಲೆ ಸಿಗುವಂತೆ ಮಾಡಿದಾಗ ಮಾತ್ರ ಇಂತಹ ರೈತ ದಿನಾಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದರು.

ಸರಕಾರ ವ್ಯವಸಾಯಕ್ಕೆ ಬೇಕಾದ ಸಾಲ ನೀತಿ ರೂಪಿಸುವುದರ ಜೊತೆಗೆ,ನೀರಾವರಿ ಸೌಲಭ್ಯ ಕಲ್ಪಿಸುವತ್ತ ಗಮನಹರಿಸಬೇಕು. ಮಾರುಕಟ್ಟೆ ವ್ಯವಸ್ಥೆ,ಪಲವತ್ತಾದ ಭೂಮಿಯನ್ನು ಕಿತ್ತು ಕಾರ್ಪೋರೇಟ್ ಕಂಪನಿಗಳಿಗೆ ನೀಡುವ ನೀತಿಗಳನ್ನು ಕೈಬಿಡಬೇಕು. ಡಾ.ಸ್ವಾಮೀನಾಥನ್ ವರದಿಯನ್ನು ಅನುಷ್ಠಾನಕ್ಕೆ ತರಬೇಕು. ರೈತ ವಿರೋಧಿ, ಜನವಿರೋಧಿ ಕಾಯ್ದೆಗಳನ್ನು ಕೈಬಿಡಬೇಕು. ರೈತರ ಹೋರಾಟಕ್ಕೆ ಮಣಿದು ಕೇಂದ್ರ ಸರಕಾರ ಕಾಯ್ದೆಗಳನ್ನು ವಾಪಸ್ ಪಡೆದರು, ರಾಜ್ಯ ಸರಕಾರ ಇಂದಿಗೂ ಮುಂದುವರೆಸಿದೆ.ಆದರೆ ರೈತ ಹೋರಾಟಗಾರರಿಗೆ ನೀಡಿದ್ದ ಭರವಸೆ ಇಂದಿಗೂ ಈಡೇರಿಲ್ಲ.ವಿದ್ಯುತ್ ಖಾಸಗೀಕರಣ, ಪಂಪ್ಸೆಟ್ಗಳಿಗೆ ಸ್ಮಾರ್ಟ ಮೀಟರ್ ಅಳವಡಿಕೆಯಂತಹ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂಬುದು ರೈತರ ಸಂಘದ ಪ್ರಮುಖ ಬೇಡಿಕೆಯಾಗಿವೆ.ಅಲ್ಲದೆ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದು ಎ.ಗೋವಿಂದರಾಜು ತಿಳಿಸಿದರು.
ಈ ವೇಳೆ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಜಿ,ಶಂಕರಪ್ಪ,ತುಮಕೂರು ತಾಲೂಕು ಅಧ್ಯಕ್ಷ ಚಿಕ್ಕಬೋರೇಗೌಡ, ಮಹಿಳಾ ಮುಖಂಡರಾದ ನಾಗರತ್ನಮ್ಮ, ಭಾಗ್ಯಮ್ಮ, ಲಲಿತಮ್ಮ, ಗುಬ್ಬಿ ತಾಲೂಕು ಅಧ್ಯಕ್ಷ ಲೋಕೇಶ್, ತುಮಕೂರು ತಾಲೂಕು ಉಪಾಧ್ಯಕ್ಷ ತಿಮ್ಮೇಗೌಡ, ಕೊರಟಗೆರೆ ತಾಲೂಕು ಮುಖಂಡ ಶಬ್ಬೀರ್ ಮತ್ತಿತರರು ಉಪಸ್ಥಿತರಿದ್ದರು.





