ಅಪ್ರಾಪ್ತ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ತಾನು ಹೋದ ಕಡೆಯಲ್ಲೆಲ್ಲ ಉದ್ದೇಶ ಪೂರ್ವಕವಾಗಿ ಹದಿಹರೆಯದ ಮಕ್ಕಳ ಮೇಲೆ ದೌರ್ಜನ್ಯ ಎಸಗಿ ಅಟ್ಟಹಾಸ ಮೆರೆದು ಎಸ್ಕೇಪ್ ಆಗುತ್ತಿದ್ದ ಪಾಪಿಯನ್ನು ಹಿಡಿದ ಪೊಲೀಸರು ಆರೋಪಿಯ ಎಡೆಮುರಿ ಕಟ್ಟಿದ ಘಟನೆ ಗುಬ್ಬಿ ತಾಲ್ಲೂಕು ಹೊಸಹಳ್ಳಿಯಲ್ಲಿ ನಡೆದಿದೆ.
ಶಾಲಾ ಬಾಲಕಿಯ ಹಿಂಬಾಲಿಸಿ ನಿರ್ಜನ ಪ್ರದೇಶದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದು, ಈ ಅಪರಿಚಿತನ ಬಂಧನಕ್ಕೆ ಪೊಲೀಸರಿಗೆ ಒಂದು ಸವಾಲ್ ಎದುರಾಯಿತು. ಯಾರಿಗೂ ಪರಿಚಯವಿಲ್ಲದ ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಮಾಡಿ 24 ಗಂಟೆಗಳಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ ಕಾಮುಕ ಆರೋಪಿಯನ್ನು ಗುಬ್ಬಿ ಪೋಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿ ತುಮಕೂರು ತಾಲ್ಲೂಕಿನ ಹಾಲನೂರು ಬಳಿಯ ಅದಲಾಪುರ ಗ್ರಾಮದ 26 ವರ್ಷದ ರೇಣುಕ ಎನ್ನಲಾಗಿದೆ. ಈತನ ಚರಿತ್ರೆ ಕೇಳಿದರೆ ಬೆಚ್ಚಿ ಬೀಳುವಂತಿದೆ. ದನದ ವ್ಯಾಪಾರಿಯಾದ ಆರೋಪಿ ಗುಬ್ಬಿ ತಾಲೂಕಿನ ಕೆ.ಜಿ ಟೆಂಪಲ್ ನಲ್ಲಿ ನಡೆಯುವ ದನಗಳ ಸಂತೆಗೆ ಬಂದಿದ್ದು ಮಾರ್ಗ ಮಧ್ಯೆ ಬರುವ ಜಿ.ಹೊಸಹಳ್ಳಿ ಗ್ರಾಮದಲ್ಲಿ ಶಾಲೆ ಮುಗಿಸಿಕೊಂಡು ಮಧ್ಯಾಹ್ನ ಮನೆಗೆ ತೆರಳುತ್ತಿದ್ದ ಏಳನೇ ತರಗತಿಯ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಎಸ್ಕೇಪ್ ಆಗಿದ್ದ. ಅಮಾನವೀಯ ಘಟನೆಯ ಬಗ್ಗೆ ಗ್ರಾಮವೇ ಬೇಸರ ವ್ಯಕ್ತಪಡಿಸಿತ್ತು. ಫೋಕ್ಸೋ ಪ್ರಕರಣ ದಾಖಲಿಸಿ ಆರೋಪಿಯನ್ನು ಒಂದು ದಿನದಲ್ಲಿ ಬಂಧಿಸಿದ ಪೊಲೀಸರು ಮುಂದಿನ ತನಿಖೆ ನಡೆಸಿದ್ದಾರೆ.
ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಅಟ್ಟಹಾಸ ಮೆರೆಯುವ ಪ್ರವೃತ್ತಿ ಬೆಳೆಸಿಕೊಂಡಿದ್ದ ಪಾಪಿ ಆರೋಪಿ ರೇಣುಕ ಈ ಹಿಂದೆ ತುಮಕೂರು ಗ್ರಾಮಾಂತರದಲ್ಲಿಯೂ ಇಂತಹದ್ದೇ ಕೃತ್ಯ ನಡೆಸಿ ಸಾರ್ವಜನಿಕವಾಗಿ ಧರ್ಮದೇಟು ತಿಂದಿದ್ದ. ಈಗಾಗಲೇ ಪೊಲೀಸ್ ಪ್ರಕರಣ ಈತನ ಮೇಲಿದೆ ಎನ್ನಲಾಗಿದೆ. ವಿವಾಹಿತ ಆರೋಪಿ ಪತ್ನಿ ಗರ್ಭಿಣಿ. ಆದರೂ ಇಂತಹ ಹೇಯ ಕೃತ್ಯ ಮಾಡಿದ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.





