ಡಿಪ್ಲಮಾ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಕೊಂಡಜ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.
ಗೊಪ್ಪೇನಹಳ್ಳಿ ಗ್ರಾಮದ ನಿವಾಸಿ ಕಾಂತರಾಜು ಅವರ ಮಗ ಜಿ ಕೆ ಧನುಶ್ ಮೃತ. ಪಟ್ಟಣದ ಎಪಿಎಂಸಿ ಹಿಂಭಾಗದ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾನೆ. ಸಾವಿಗೆ ಪ್ರೇಮವೈಫಲ್ಯ ಕಾರಣವಿರಬಹುದು ಎಂದು ಶಂಕಿಸಲಾಗಿದೆ.
ಮೃತನು ಗುಡ್ಡೇನಹಳ್ಳಿ ಡಿಪ್ಲೋಮೋ ಕಾಲೇಜಿನಲ್ಲಿ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ. ಎಂದಿನಂತೆ ಬೆಳಗ್ಗೆ ಮನೆಯಿಂದ ಕಾಲೇಜಿಗೆ ಹೋಗುತ್ತೇನೆ ಎಂದು ತುರುವೇಕೆರೆಗೆ ಬಂದಿದ್ದಾನೆ. ಆದರೆ ಎರಡು ದಿನಗಳಿಂದ ಕಾಲೇಜಿಗೆ ಹೋಗಿರಲಿಲ್ಲ ಎಂಬ ಸಂಗತಿ ಬೆಳಕಿಗೆ ಬಂದಿದೆ. ಬುಧವಾರ ಬೆಳಗ್ಗೆಯೂ ಕಾಲೇಜಿಗೆ ಹೋಗುತ್ತೇನೆಂದು ಮನೆಯಿಂದ ಬಂದಿದ್ದ ಧನುಶ್ ಕೆಲ ಗಂಟೆಗಳ ನಂತರ ತನ್ನ ಸ್ಟೇಟಸ್ ನಲ್ಲಿ ನಾನು ಪ್ರಪಂಚದಿಂದ ದೂರ ಹೋಗುತ್ತಿದ್ದೇನೆ. ಎಲ್ಲರೂ ನನ್ನ ಹೆಣದ ಮೇಲೆ ಗುಲಾಬಿ ಹೂ ಹಾಕಿ ಖುಷಿಪಡಿ ಎಂದು ಹಾಕಿದ್ದನೆಂದು ಹೇಳಲಾಗಿದೆ.
ಬುಧವಾರ (ಫೆ.25) ಸುಮಾರು 12 ಗಂಟೆಯ ಸುಮಾರಿಗೆ ಕೆರೆಯ ಬದಿಯಲ್ಲಿ ಆತನ ಬ್ಯಾಗ್, ಮೊಬೈಲ್ ಮತ್ತು ಚಪ್ಪಲಿ ಇದ್ದುದನ್ನು ಗಮನಿಸಿದ ದಾರಿಹೋಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ವೇಳೆಗಾಗಲೇ ಮನೆಯವರು ಧನುಶ್ ಗೆ ಕರೆ ಮಾಡಿದರೂ ಸ್ವೀಕರಿಸದ ಕಾರಣ ಅನುಮಾನಗೊಂಡಿದ್ದಾರೆ. ಪೊಲೀಸರಿಂದ ವಿಷಯ ತಿಳಿದು ಧನುಶ್ ನ ಪೋಷಕರು ಕೆರೆಯ ಬಳಿ ಬಂದು ನೋಡಲಾಗಿ ಅಲ್ಲಿದ್ದ ಬ್ಯಾಗ್, ಚಪ್ಪಲಿ ಮತ್ತು ಪೋನ್ ಆತನದೇ ಎಂದು ಖಚಿತಪಡಿಸಿಕೊಂಡರು. ವಿಷಯ ತಿಳಿದು ಕುಟುಂಬದವರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳದಲ್ಲಿ ಜಮಾಯಿಸಿದ್ದರು.
ಇದನ್ನೂ ಓದಿ: ತುಮಕೂರು | ನಂದಿಹಳ್ಳಿ, ಮಲ್ಲಸಂದ್ರ, ವಸಂತನರಸಾಪುರ ಔಟರ್ ರಿಂಗ್ ರಸ್ತೆ ಡಿಪಿಆರ್ ರೈತ ವಿರೋಧಿ : ಡಿ.ಸಿ.ಗೌರಿಶಂಕರ್
ತುರುವೇಕೆರೆ ಪೊಲೀಸರು ಮತ್ತು ಅಗ್ನಿ ಶಾಮಕ ಸಿಬ್ಬಂದಿಗಳು ಕಬ್ಬಿಣದ ಕೊಕ್ಕೆಯಿಂದ ಒಂದೆರೆಡು ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿದರು. ಕೊನೆಗೂ ಧನುಶ್ ನ ಶವ ಪತ್ತೆಯಾಗಿದೆ. ಶವ ಹೊರತೆಗೆಯುತ್ತಿದ್ದಂತೆ ಮೃತ ಯುವಕನ ಸಂಬಂಧಿಕರ ರೋಧನ ಮುಗಿಲು ಮುಟ್ಟಿತು. ಪೊಲೀಸರು ಸ್ದಳದಲ್ಲಿದ್ದ ಜನರನ್ನು ನಿಯಂತ್ರಿಸಲು ಹರಸಾಹಸಪಟ್ಟರು. ಈ ಸಂಬಂಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






