ಕುವೆಂಪು ಅವರ ಪುರಾಣದ ಮರುರಚನೆಯಲ್ಲಿ ಸಂಪ್ರದಾಯಿಕ ಚಿಂತನೆ ಇಲ್ಲ, ಉತ್ತರ ಮುಖಿ ಚಿಂತನೆ ಇಲ್ಲ. ಬದಲಾಗಿ ದಕ್ಷಿಣಮುಖಿಯಾದ ವೈಚಾರಿಕ ನೆಲೆ ಇದೆ. ದಕ್ಷಿಣದ ಮತ್ತು ದಕ್ಷಿಣಮುಖಿ ಆಲೋಚನೆಯ ಪ್ರತಿನಿಧಿಯಾದ ಶಿವನಿಗೆ ಇದು ಮುಖಮಾಡಿದೆ ಎಂದು ಡಾ ರವಿಕುಮಾರ ನೀಹ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಕುವೆಂಪು ಅಧ್ಯಯನ ಪೀಠ ಮತ್ತು ಡಾ. ಡಿ.ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ನಡೆದ “ಕುವೆಂಪು ನಿರ್ವಹಿಸಿದ ದಕ್ಷಿಣೋತ್ತರ ಚಿಂತನೆ” ಎಂಬ ವಿಷಯವನ್ನು ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಇವರು “ಕನ್ನಡ ಸಾಹಿತ್ಯದ ಆರಂಭದಿಂದಲೂ ಉತ್ತರ-ದಕ್ಷಿಣದ ಚರ್ಚೆ ಇದೆ. ಉತ್ತರ ದಕ್ಷಿಣ ಎಂದರೆ ಎರಡು ದಿಕ್ಕುಗಳಲ್ಲ, ಎರಡು ಚಿಂತನೆಗಳು. ವಸ್ತು, ಮೀಮಾಂಸೆ, ಗಡಿ, ಭಾಷಿಕ ಸಂಪರ್ಕ ಹೀಗೆ ಅನಂತ ವ್ಯಾಪಿಯಾಗಿ ದಕ್ಷಿಣೋತ್ತರ ಚಿಂತನೆ ಇದೆ. ದಕ್ಷಿಣ ಕನಿಷ್ಠ, ಉತ್ತರ ಶ್ರೇಷ್ಠ ಎಂಬ ಕಲ್ಪನೆ ಉತ್ತರದವರದ್ದು. ಇಂದಿಗೂ ಸ್ಮಶಾನಗಳು, ಹೊಲೆಗೇರಿಗಳು ದಕ್ಷಿಣಕ್ಕೇ ಏಕೆ ಇರುತ್ತವೆ? ವಸಿಷ್ಠ ಪ್ರತಿಜ್ಞೆ ಮಾಡುವಾಗ ನಾನು ಸೋತರೆ ಕತ್ತೆಯ ಮೇಲೆ ಕುಳಿತು ದಕ್ಷಿಣಕ್ಕೆ ಹೋಗುವೆ ಎಂದು ಏಕೆ ಹೇಳಿದ? ಇವೆಲ್ಲ ಉತ್ತರಮುಖಿ ಚಿಂತನೆಗಳು. ಉತ್ತರಕ್ಕೆ ತಲೆ ಇಟ್ಟು ಮಲಗಿರುವ ಪ್ರಾಣಿಯ ತಲೆ ಕಡಿದು ತನ್ನಿ ಎಂದು ಶಿವ ತನ್ನ ಕಿಂಕರರಿಗೆ ಹೇಳುವುದು, ಉತ್ತರದ ರಾಜನನ್ನು ಕುರಿತು ಬರೆದ ರಾಘವಾಂಕನ ಹಲ್ಲನ್ನು ಹರಿಹರ ಉದುರಿಸಿದ್ದು ಇಂತಹ ಕತೆಗಳಲ್ಲಿ ದಕ್ಷಿಣ ಮುಖಿ ಚಿಂತನೆ ಇದೆ. ಇದು ಕುವೆಂಪು ಅವರ ಸಾಹಿತ್ಯದಲ್ಲಿ ಹೆಜ್ಜೆಹೆಜ್ಜೆಗೂ ಪ್ರತಿಫಲಿಸಿದೆ. ಕುವೆಂಪು ತಮ್ಮ ಬರಹಗಳಲ್ಲಿ ತರುವ ಭೌಗೋಳಿಕತೆ, ರಾವಣನ ಮೂಲಕ ನಡೆಸುವ ಉತ್ತರದವರ ವಿಡಂಬನೆ, ಅವರ ಸ್ತ್ರೀಪರ ಚಿಂತನೆ ಇವೆಲ್ಲವೂ ದಕ್ಷಿಣಮುಖಿ” ಎಂದು ಹೇಳಿದರು.
ಕುವೆಂಪು ಅಧ್ಯಯನ ಪೀಠದ ಸಂಯೋಜಕರಾದ ಡಾ ಗೀತಾ ವಸಂತ ಮಾತನಾಡಿ, “ವಿಶ್ವಮಾನವ ತತ್ವಕ್ಕೆ ಒಂದು ದಿನ ಎಂದು ಇಲ್ಲ. ಸದಾ ನಾವು ಇದರ ಕಡೆಗೆ ಸಾಗುವ ದಾರಿಯನ್ನು ಅನ್ವೇಷಿಸುತ್ತಾ ಇರಬೇಕು. ಇಂಥಹ ಹೊಸ ಹೊಸ ದಾರಿಗಳನ್ನು ಕಾಣುವುದು ಮತ್ತು ಕಾಣಿಸುವುದು ನಮ್ಮ ಬರವಣಿಗೆ, ಅಧ್ಯಯನ ಮುಂತಾದವುಗಳ ಮೂಲ ಉದ್ದೇಶ. ನಮ್ಮ ಪರಂಪರೆ ಮಾಡುತ್ತಾ ಬಂದಿರುವುದು ಇದನ್ನೇ. ಈ ನಿಟ್ಟಿನಲ್ಲಿ ಇಂತಹ ಉಪನ್ಯಾಸಗಳ ಮೂಲಕ ಕುವೆಂಪು ಅವರ ಚಿಂತನೆಗಳನ್ನು ನಾವು ಮತ್ತೆ ಮತ್ತೆ ಎದುರುಗೊಳ್ಳಬೇಕು” ಎಂದರು.
ಉಪನ್ಯಾಸದ ನಂತರ ವಿದ್ಯಾರ್ಥಿಗಳು ಹಾಗೂ ಸಂಶೋಧನಾರ್ಥಿಗಳು ಆರೋಗ್ಯಪೂರ್ಣವಾದ ಸಂವಾದಕ್ಕೆ ಸಾಕ್ಷಿಯಾದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಪ್ರೊ. ನಿತ್ಯಾನಂದ ಬಿ ಶೆಟ್ಟಿ, ಡಾ ಮಂಜುಳ, ಡಾ. ಶಿವಲಿಂಗ ಮೂರ್ತಿ, ಪ್ರೊ. ಎನ್ ಎಸ್ ಗುಂಡೂರ, ಕನ್ನಡ ವಿಭಾಗದ ಸಂಶೋಧನಾರ್ಥಿಗಳು, ವಿಧ್ಯಾರ್ಥಿಗಳು ಮತ್ತು ಇತರರು ಉಪಸ್ಥಿತರಿದ್ದರು.





