ತುರುವೇಕೆರೆ ತಾಲೂಕಿನ ಹೊಣಕೆರೆ ಗೊಲ್ಲರಹಟ್ಟಿಯ ತೋಟದ ಸಾಲಿನಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಇದರಿಂದಾಗಿ ಗ್ರಾಮಸ್ಥರು ಕಂಗಾಲಾಗಿ ಅರಣ್ಯ ಇಲಾಖಾ ಅಧಿಕಾರಿಗಳ ಮೊರೆ ಹೋಗಿದ್ದಾರೆ.
ಶುಕ್ರವಾರ ಸಾಯಂಕಾಲ ಹೊಣಕೆರೆ ಗೊಲ್ಲರಹಟ್ಟಿಯ ರವಿಯಣ್ಣ ಎಂಬುವವರು ತಮ್ಮ ತೋಟದಲ್ಲಿ ನೀರು ಹಾಯಿಸುತ್ತಿದ್ದ ಸಂದರ್ಭದಲ್ಲಿ ಗಿಡದ ಪೊದೆಯಿಂದ ಚಿರತೆ ಹೊರಬಂದಿದೆ. ಕೆಲವೇ ಅಂತರದಿಂದ ಗಮನಿಸಿದ ರವಿಯಣ್ಣ ಜೀವ ಭಯದಿಂದ ತಮ್ಮ ಮನೆಯತ್ತ ತೆರಳಿದ್ದಾರೆ. ಶನಿವಾರ ಬೆಳಗ್ಗೆ ಕೆಲ ಗ್ರಾಮಸ್ಥರ ಸಹಕಾರದಿಂದ ತಮ್ಮ ತೋಟದತ್ತ ತೆರಳಿ ಚಿರತೆ ಬಂದಿದ್ದ ಸ್ಥಳವನ್ನು ಪರಿಶೀಲಿಸಲಾಗಿ ಚಿರತೆಯ ಹೆಜ್ಜೆ ಗುರುತು ಕಂಡುಬಂದಿದೆ.
ಕಳೆದ ಐದಾರು ದಿನಗಳ ಹಿಂದೆ ಇದೇ ಗ್ರಾಮದ ಹೊರವಲಯದಲ್ಲಿ ನರಿಯನ್ನು ತಿಂದಿದ್ದ ಚಿರತೆ, ನರಿಯ ದೇಹವನ್ನೆಲ್ಲಾ ತಿಂದು ನರಿಯ ತಲೆ ಬುರುಡೆಯನ್ನು ಬಿಟ್ಟು ಹೋಗಿದ್ದ ದೃಶ್ಯವನ್ನು ದನಗಾಹಿಗಳು ನೋಡಿದ್ದಾರೆ. ಅಲ್ಲದೇ ಪದೇ ಪದೇ ಗ್ರಾಮದಲ್ಲಿರುವ ಬೀದಿ ನಾಯಿಗಳನ್ನೂ ಸಹ ಚಿರತೆ ಬಲಿ ತೆಗೆದುಕೊಂಡಿದೆ ಎಂದು ಗ್ರಾಮಸ್ಥರು ಅರಣ್ಯ ಇಲಾಖಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಚಿರತೆ ಸೆರೆಹಿಡಿಯಲು ಬೋನಿನ ವ್ಯವಸ್ಥೆ ಮಾಡಬೇಕೆಂದು ಗ್ರಾಮದ ಮುಖಂಡರಾದ ರವಿಯಣ್ಣ ಮತ್ತು ಚಂದ್ರ ಪ್ರಸಾದ್ ಅರಣ್ಯ ಇಲಾಖಾ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.





